ಸವದತ್ತಿ: ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಹೆಚ್ಚಿದ ಕುರಿತು ಸವದತ್ತಿ ತಾಲ್ಲೂಕು ನಾಗರಿಕರ ವೇದಿಕೆಯಿಂದ ಇಲ್ಲಿನ ಕಲ್ಮಠದಲ್ಲಿ ವಿವಿಧ ಸಂಘಟನೆ ಹಾಗೂ ಪ್ರಮುಖರಿಂದ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.
ಜಿಲ್ಲೆ ವಿಭಜನೆಯಾದಲ್ಲಿ ಸವದತ್ತಿ ತಾಲ್ಲೂಕನ್ನು ಧಾರವಾಡ ಜಿಲ್ಲೆಗೆ ಸೇರಿಸಲು ಒಮ್ಮತದಿಂದ ನಿರ್ಣಯಿಸಲಾಯಿತು.
ಬಿಡಿಸಿಸಿ ನಿರ್ದೇಶಕ ವಿರುಪಾಕ್ಷ ಮಾಮನಿ ಮಾತನಾಡಿ, ಜಿಲ್ಲೆ ವಿಭಜನೆ ಕೂಗು ಕೇಳಿಬಂದಾಗ ಈ ಹಿಂದೆ ಹಲವು ಬಾರಿ ಹೋರಾಟಗಳು ನಡೆದಿವೆ. ಸವದತ್ತಿಯಿಂದ ಬೆಳಗಾವಿಗೆ ಸುಮಾರು 90 ಕಿ.ಮೀ ಅಂತರವಿದ್ದು ಜನತೆಗೆ ಸಂಚರಿಸಲು ಹೆಚ್ಚು ಸಮಯ ವ್ಯಯಿಸುವಂತಾಗಿದೆ. ಸಣ್ಣ ಕೆಲಸಕ್ಕೂ ಇಡೀ ಒಂದು ದಿನ ಕಳೆಯಬೇಕಾದ ಅನಿವಾರ್ಯವಿದೆ. 36 ಕಿ.ಮೀ ಸಮೀಪದಲ್ಲಿರುವ ಧಾರವಾಡ ಜಿಲ್ಲೆಗೆ ಸವದತ್ತಿಯನ್ನು ಸೇರಿಸಿದಲ್ಲಿ ಸಮಯದ ಜೊತೆ ಆರ್ಥಿಕ ಹೊರೆಯೂ ತಪ್ಪಲಿದೆ. ತ್ವರಿತವಾಗಿ ಎಲ್ಲ ಸೌಲಭ್ಯಗಳು ಸರಳ ರೀತಿಯಲ್ಲಿ ಸಿಗಲಿವೆ’ ಎಂದರು.
ಹೋರಾಟ ನಡೆದ ವೇಳೆ ನಿರ್ಣಯ ಕೈಗೊಳ್ಳುವುದಾಗಿ ಸರ್ಕಾರಗಳು ಹೇಳಿದ್ದವು. ಆದರೆ ಈವರೆಗೂ ಪ್ರಕ್ರಿಯೆ ನಡೆದಿಲ್ಲ. ಆದ್ದರಿಂದ ಮತ್ತೆ ಹೋರಾಟ ನಡೆಸಿ ಧಾರವಾಡಕ್ಕೆ ಸೇರಿಸಲು ಸಿದ್ಧತೆ ನಡೆಸಬೇಕಿದೆ. ಹೋರಾಟ ಸಮಿತಿಗಳನ್ನು ನಿರ್ಮಿಸಿ ರೂಪುರೇಷೆಗಳೊಂದಿಗೆ ಮತ್ತೆ ಸಭೆ ನಡೆಸಿ ಚರ್ಚೆ ನಡೆಯಲಿ. ಅಧಿವೇಶನ ಮುಕ್ತಾಯದೊಳಗೆ ಒಂದು ದಿನ ಸವದತ್ತಿ ಬಂದ್ ಗೆ ಕರೆ ನೀಡಿ ಯಶಸ್ವಿಗೊಳಿಸಿ ಸರ್ಕಾರ ಗಮನ ಸೆಳೆಯಲು ಪ್ರಯತ್ನಿಸೋಣ ಎಂದು ತಿಳಿಸಿದರು.
ಹೋರಾಟ ಸಮಿತಿಗೆ ಅಭಿನಂದನ ಕಬ್ಬಿಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಧಾರವಾಡ ಜಿಲ್ಲೆಗೆ ಸೇರಿಸುವ ಹೋರಾಟಕ್ಕೆ ಗೆಲುವು ಸಿಗುವವರೆಗೂ ವಿವಿಧ ಸಂಘಟನೆಗಳಿಂದ ತಹಶೀಲ್ದಾರ್ ಕಚೇರಿ ಎದುರು ನಿತ್ಯ ಸತ್ಯಾಗ್ರಹ ನಡೆಸಲು ನಿರ್ಣಯಿಸಲಾಯಿತು.
ವಕೀಲರ ಸಂಘ, ವರ್ತಕರ ಸಂಘ, ಟ್ಯಾಕ್ಸಿ ಸ್ಟ್ಯಾಂಡ್, ಕನ್ನಡ ಪರ ಸಂಘಟನೆಗಳು, ಸಹಕಾರಿ ಸಂಘದ ಪ್ರತಿನಿಧಿಗಳು, ಪುರಸಭೆ ಸದಸ್ಯರು, ಸ್ಥಳೀಯ ನಾಗರಿಕರು ಇದ್ದರು.


