ಬೆಳಗಾವಿ :
ಈ ಸಲ ನಡೆಯಲಿರುವ ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ಇಡೀ ರಾಜ್ಯದ ಜನತೆ ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯದ ಪ್ರಭಾವಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಂಸದ ಮತ್ತು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್ ಕತ್ತಿ ಅವರ ಬಣಗಳ ನಡುವಿನ ಈ ಕಾದಾಟದಲ್ಲಿ ಗೆಲ್ಲುವವರು ಯಾರು ಎಂಬ ಬಗ್ಗೆ ನಾಡಿನ ಜನತೆ ಕುತೂಹಲದಿಂದ ಕಾಯುತ್ತಿದ್ದು ರವಿವಾರ ಮಹತ್ವದ ಚುನಾವಣೆಗೆ ವೇದಿಕೆ ಸಜ್ಜಾಗಿದೆ.
ಮುಂದೂಡಿಕೆ ಆಗಿದ್ದ ಚುನಾವಣೆ ಸಹ ರವಿವಾರ:
ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಅಕ್ಟೋಬರ್ 19ರಂದು ನಡೆಯಲಿದೆ. ಆದರೆ ಶುಕ್ರವಾರದಂದು ಜಿಲ್ಲಾ ಸಹಕಾರಿ ಬ್ಯಾಂಕಿನ ಹುಕ್ಕೇರಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಗೆ ಸಂಬಂಧಿಸಿ ಭೀಮಸೇನ ಬಾಗಿ ಎಂಬವರು ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ ಎಂಬ ಕಾರಣಕ್ಕೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಧ್ಯಂತರ ತೀರ್ಪು ನೀಡಿ ಅಲ್ಲಿನ ಚುನಾವಣೆಯನ್ನು ಮುಂದಕ್ಕೆ ಹಾಕಿತ್ತು.
ಆದರೆ ಇದೀಗ ರವಿವಾರ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾ ಅಧಿಕಾರಿ ಆಗಿರುವ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಲಾಗಿದ್ದು ರವಿವಾರ ಚುನಾವಣೆ ಎಂದಿನಂತೆ ನಿಗದಿಯಾಗಿದೆ. ಒಮ್ಮೆ ಚುನಾವಣೆ ಪ್ರಕ್ರಿಯೆ ಆರಂಭವಾದರೆ ಅದನ್ನು ರದ್ದು ಮಾಡುವಂತಿಲ್ಲ. ಈ ಬಗ್ಗೆ ಮನವರಿಕೆ ಮಾಡಿದ್ದರಿಂದ ಚುನಾವಣೆ ನಿಗದಿಯಂತೆ ನಡೆಯಲಿದೆ. ನಮ್ಮ ಮನವಿಗೆ ಸ್ಪಂದಿಸಿ ನ್ಯಾಯಾಲಯ ನಿಗದಿಯಂತೆ ಚುನಾವಣೆಗೆ ಮುಂದಾಗಿರುವುದನ್ನು ಮಾಜಿ ಸಂಸದ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್ ಕತ್ತಿ ಸ್ವಾಗತಿಸಿದ್ದು, ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸ ಇಮ್ಮಡಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.