ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ 10 ಕ್ಕೆ ದಿನ ನಿಗದಿ
ಬೆಳಗಾವಿ:
ಈ ಸಲದ ಅಕ್ಟೋಬರ್ ತಿಂಗಳಲ್ಲಿ ನಡೆದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ರಾಜ್ಯದ ಜನತೆಯ ಗಮನ ಸೆಳೆದಿತ್ತು. ಜಾರಕಿಹೊಳಿ ಸಹೋದರರು ಹಾಗೂ ಕತ್ತಿ ಕುಟುಂಬದ ನಡುವೆ ಅತ್ಯಂತ ಪ್ರಬಲ ಪೈಪೋಟಿಯ ನಡುವೆ ಈ ಚುನಾವಣೆ ನಡೆದಿರುವುದು ಇತಿಹಾಸ. ಕೆಲ ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದರೂ 4 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿರಲಿಲ್ಲ. ಆದರೆ ರವಿವಾರ ಈ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಇದೀಗ ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ನ ಸಾರಥ್ಯವನ್ನು ಯಾರು ವಹಿಸಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಜಿಲ್ಲೆಯ ಪ್ರತಿಷ್ಠಿತ ಮನೆತನಗಳು ಈ ಬಾರಿ ಮತ್ತೊಮ್ಮೆ ಡಿಸಿಸಿ ಬ್ಯಾಂಕಿನ ಚುಕ್ಕಾಣಿ ಹಿಡಿಯಲು ಪಣ ತೊಟ್ಟಿದ್ದು ಕೆಲವೇ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.
ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನವೆಂಬರ್ ಹತ್ತರಂದು ನಡೆಯಲಿದೆ.
ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅಕ್ಟೋಬರ್ 19 ರಂದು ಚುನಾವಣೆಗೆ ಮತದಾನ ನಡೆದಿತ್ತು. ನ್ಯಾಯಾಲಯದಲ್ಲಿ ಕೆಲ ಪಿಕೆಪಿಎಸ್ ಗಳ ವಿಚಾರಣೆ ಬಾಕಿ ಉಳಿದಿದ್ದ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಗೊಂಡಿರಲಿಲ್ಲ. ಆದರೆ ರವಿವಾರ ನಾಲ್ಕು ಕ್ಷೇತ್ರಗಳ ಫಲಿತಾಂಶ ಘೋಷಣೆ ಆಗಿದೆ.
ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಬಾಕಿ ಉಳಿದಿದ್ದ ಡಿಸಿಸಿ ಬ್ಯಾಂಕ್ ಚುನಾವಣೆಯ ನಾಲ್ಕು ಕ್ಷೇತ್ರಗಳ ಫಲಿತಾಂಶಗಳನ್ನು ಚುನಾವಣಾಧಿಕಾರಿ ಶ್ರವಣ ನಾಯಕ ಪ್ರಕಟಿಸಿದರು.
ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ, ಹುಕ್ಕೇರಿ ಫಲಿತಾಂಶ ಪ್ರಕಟಿಸಲಾಗಿದೆ. ನಿಪ್ಪಾಣಿ ಕ್ಷೇತ್ರದಿಂದ ನಿರ್ದೇಶಕರಾಗಿ ಅಣ್ಣಾಸಾಬ್ ಜೊಲ್ಲೆ 71 ಮತ ಪಡೆದು ಆಯ್ಕೆಯಾದರು. ಹುಕ್ಕೇರಿಯಿಂದ ರಮೇಶ ಕತ್ತಿ 59 ಮತ ಪಡೆದು ಆಯ್ಕೆಯಾದರು. ಬೈಲಹೊಂಗಲ ಕ್ಷೇತ್ರದಿಂದ ನಿರ್ದೇಶಕರಾಗಿ ಮಹಾಂತೇಶ ದೊಡ್ಡಗೌಡರ್ 54 ಮತದಿಂದ ಆಯ್ಕೆಯಾದರು. ಕಿತ್ತೂರು ಮತ ಕ್ಷೇತ್ರದಿಂದ ನಿರ್ದೇಶಕರಾಗಿ ನಾನಾಸಾಹೇಬ್ ಪಾಟೀಲ 17 ಮತ ಪಡೆದು ಆಯ್ಕೆಯಾದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಣ್ಣಾಸಾಹೇಬ್ ಜೊಲ್ಲೆ ಅವರು, ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆ ಮಾಡಿದ್ದಾರೆ. ಚುನಾವಣೆಯಲ್ಲಿ ನಾನು ಸೇರಿ ನಾಲ್ಕು ಮತಕ್ಷೇತ್ರದ ಫಲಿತಾಂಶ ಬಂದಿದೆ. 15 ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ.
ನಾನು ಸೇರಿದಂತೆ ಎಲ್ಲರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ನಾವೆಲ್ಲರೂ ಜಾರಕಿಹೊಳಿ ಸಹೋದರರ ಬಣದಲ್ಲಿ ಇದ್ದೇವೆ. ಬಾಲಚಂದ್ರ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿ ಜೊತೆಗೆ ಚರ್ಚಿಸಿ ಅಧ್ಯಕ್ಷರ ಆಯ್ಕೆ ಮಾಡುತ್ತೇವೆ ಎಂದರು.
ಬೈಲಹೊಂಗಲ ತಾಲೂಕಿನ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಚುನಾವಣೆಯಲ್ಲಿ ನಾನು ಅಧಿಕೃತವಾಗಿ ಗೆಲವು ಸಾಧಿಸಿದ್ದೇನೆ. ಕಿತ್ತೂರು ಸೋಲಿನಿಂದ ನನಗೆ ಯಾವುದೇ ಅಸಮಾಧಾನವಿಲ್ಲ. ನಾನು ಅಣ್ಣಾಸಾಹೇಬ್ ಜೊಲ್ಲೆ ಜೊತೆಗೆ ಬಂದಿದ್ದೇವೆ. ಅಸಮಾಧಾನ ಬಗ್ಗೆ ಯಾರು ಹೇಳಿದ್ದಾರೆ ಅವರಿಗೆ ಕೇಳಿ ಎಂದರು.
ಕಿತ್ತೂರು ಚುನಾವಣೆಯಲ್ಲಿ ಬೆನ್ನಿಗೆ ಚೂರಿ ಹಾಕಿದ್ದಕ್ಕೆ ಸೋಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ 16 ಜನರು ಆಕಾಂಕ್ಷಿಗಳಿದ್ದೇವೆ ಎಂದು ಮಹಾಂತೇಶ ದೊಡ್ಡಗೌಡರ ತಿಳಿಸಿದರು.
ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ನಾನಾಸಾಹೇಬ್ ಪಾಟೀಲ ಮಾತನಾಡಿ, 17 ಮತಗಳಿಂದ ನನ್ನ ಗೆಲವು ಆಗಿದೆ. 32 ಮತಗಳಲ್ಲಿ 15 ಮತ ವಿರೋಧಿಗಳಿಗೆ ಬಿದ್ದಿದೆ ಎಂದರು.
ಕಿತ್ತೂರು ತಾಲೂಕಿನ ಚುನಾವಣೆಯಲ್ಲಿ 1 ಮತ ಅಡ್ಡ ಮತದಾನ ಆಗಿಲ್ಲ. 7 ಜನರು ಅಡ್ಡ ಮತದಾನ ಮಾಡಿದ್ದಾರೆ. ನಾವು ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ಮಾಡಿದ್ದೇವೆ. ನಾವು ಏನಿದ್ದರೂ ಸತೀಶ ಜಾರಕಿಹೊಳಿ ಪರವಾಗಿದ್ದೇವೆ ಎಂದು ನಾನಾಸಾಹೇಬ್ ಪಾಟೀಲ ತಿಳಿಸಿದರು.


