ಹಂದಿಗುಂದ: ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ಎಸ್ಎಸ್ಎಲ್ಸಿ, ಪಿಯು ವಿದ್ಯಾರ್ಥಿಗಳ ಓದಿಗೆ ಉತ್ತೇಜನ ನೀಡಲು ನಿತ್ಯ ಸಂಜೆ 7 ರಿಂದ ರಾತ್ರಿ 9 ರವರೆಗೆ ಟಿ.ವಿ ಮತ್ತು ಮೊಬೈಲ್ಫೋನ್ ಬಳಸದಂತೆ ಗ್ರಾಮ ಪಂಚಾಯಿತಿಯಲ್ಲಿ ಠರಾವ್ ಪಾಸ್ ಮಾಡಲಾಗಿದೆ. ನಾಲ್ಕು ದಿನಗಳಿಂದ ಇದನ್ನು ಪಾಲಿಸಲಾಗುತ್ತಿದೆ.
ಗ್ರಾಮಸ್ಥರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಮಹಾದೇವ ನಾಯಕ ತಿಳಿಸಿದ್ದಾರೆ. ಪಿಡಿಒ ಬಿ.ಎಸ್. ನಾಗನೂರ, ಎಸ್ಡಿಎಂಸಿ ಅಧ್ಯಕ್ಷ ಗುರು ಅಂಗಡಿ ಮತ್ತು ಮುಖ್ಯ ಶಿಕ್ಷಕ ಪಿ.ಎಂ. ದಿವಾಕರ ಸಮ್ಮತಿಸಿದ್ದಾರೆ.
ಕಪ್ಪಲಗುದ್ದಿಯಲ್ಲಿ ಸರ್ಕಾರಿ ಮಾದರಿ ಶಾಲೆ ಮತ್ತು ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ ಇದೆ. ಪಿಯು ಮತ್ತು ಪದವಿ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೇರೆ ಪಟ್ಟಣಗಳಿಗೆ ಹೋಗುತ್ತಾರೆ. ಮನೆಯಲ್ಲೇ ಓದಲಿ ಎಂಬುದು ಇದರ ಉದ್ದೇಶ ಎಂದು ಗ್ರಾಮಸ್ಥರು ತಿಳಿಸಿದರು.
ಬೆಳಗಾವಿ ತಾಲೂಕಿನ ಹಲಗಾದಲ್ಲಿ ತಿಂಗಳ ಹಿಂದೆ ಇಂಥ ಯತ್ನ ನಡೆದಿತ್ತು. ಅವರಿಂದ ಕಪ್ಪಲಗುದ್ದಿ ಗ್ರಾಮಸ್ಥರು ಪ್ರೇರಣೆ ಪಡೆದಿದ್ದಾರೆ. ಖುದ್ದು ಪರಿಶೀಲಿಸಿದ್ದೇನೆ. ಇದು ಒಳ್ಳೆಯ ಪ್ರಯತ್ನ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಪ್ರತಿಕ್ರಿಯಿಸಿದ್ದಾರೆ.


