ಬೆಂಗಳೂರು: ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಸೋಮವಾರ ನಿಧನರಾದರು.
ಉಡುಪಿ ಮೂಲದವರಾದ ರಾಕೇಶ್, ಕಾಮಿಡಿ ಕಿಲಾಡಿಗಳು ಸೀಸನ್-3 ಕಾರ್ಯಕ್ರಮದಲ್ಲಿ ವಿಜೇತರಾಗಿದ್ದರು.
ಹೃದಯಾಘಾತದಿಂದ ರಾಕೇಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಿಯಾಲಿಟಿ ಶೋ ಮಾತ್ರವಲ್ಲದೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿಯೂ ರಾಕೇಶ್ ನಟಿಸಿದ್ದರು. ತಮ್ಮ ಹಾಸ್ಯ ಚಟಾಕಿಯಿಂದಲೇ ಕನ್ನಡಿಗರ ಮನಗೆದ್ದಿದ್ದರು.
ರಾಕೇಶ್ ನಿಧನದ ಕುರಿತು ನಟಿ ರಕ್ಷಿತಾ, ನಟ ಶಿವರಾಜ್ ಕೆ.ಆರ್.ಪೇಟೆ ಸೇರಿ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.
ರಾಕೇಶ ನಿಧನದ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ರಕ್ಷಿತಾ, ‘ಇನ್ನು ಮುಂದೆ ರಾಕೇಶ್ ಜೊತೆ ಮಾತನಾಡಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಕಾರ್ಯಕ್ರಮ, ರಾಕೇಶ್ ಯಾವಾಗಲೂ ಉಳಿದವರಿಗಿಂತ ಭಿನ್ನವಾಗಿ ನಿಲ್ಲುತ್ತಿದ್ದ ವ್ಯಕ್ತಿ. ಕ್ಯಾಮೆರಾದ ಹೊರಗೆಯೂ ಅತ್ಯಂತ ಪರಿಪೂರ್ಣ ವ್ಯಕ್ತಿ ಎಂದು ನನಗೆ ತಿಳಿದಿತ್ತು. ರಾಕೇಶ್ ನೀವು ಯಾವಾಗಲೂ ನಮ್ಮ ಹೃದಯದಲ್ಲಿ ವಾಸಿಸುತ್ತೀರಿ. ನೀವು ನಮ್ಮೆಲ್ಲರ ಜೀವನದಲ್ಲಿ ತಂದ ಸಂತೋಷಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಶಿವರಾಜ ಕೆ.ಆರ್ ಪೇಟೆ ಅವರು, ‘ಎಷ್ಟೋ ಮನಸುಗಳ ನಗಿಸಿದ ಆತ್ಮಕ್ಕೆ ಹೇಗೆ ಶಾಂತಿ ಕೋರಲಿ’ ಎಂದು ಬರೆದುಕೊಂಡಿದ್ದಾರೆ.