ಚಿಕ್ಕೋಡಿ: ಡಿ.31ರೊಳಗೆ ಅಖಂಡ ಬೆಳಗಾವಿ ಜಿಲ್ಲೆ
ವಿಭಜಿಸಿ ಚಿಕ್ಕೋಡಿ ಜಿಲ್ಲೆಯನ್ನು ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯ ಜನರು ನಿರಾಶೆಗೊಳಗಾಗುವ ಅವಶ್ಯಕತೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಪದಾಧಿಕಾರಿಗಳಿಗೆ ಭರವಸೆ ನೀಡಿದರು.
ಬೆಳಗಾವಿ ನಗರದಲ್ಲಿ ಬುಧವಾರ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ಅಖಂಡ ಬೆಳಗಾವಿ ಜಿಲ್ಲೆಯ ಜನರಿಗೆ ಸರ್ಕಾರದ ಯೋಜನೆ ಹಾಗೂ ಅನುದಾನವನ್ನು ಸಮರ್ಪಕವಾಗಿ ತಲುಪಿಸಲು ಜಿಲ್ಲೆಯ ವಿಭಜನೆ ಮಾಡುವುದು ಅಗತ್ಯವಾಗಿದೆ ಎಂದು ಸರ್ಕಾರಕ್ಕೆ ಮನವರಿಕೆಯಾಗಿದೆ. ಜಿಲ್ಲೆಯ ವಿಭಜನೆಗೆ ವೈಯಕ್ತಿಕವಾಗಿ ತನ್ನ ಸಹಮತ ಇರುವುದಾಗಿ ಹೇಳಿದರು.
ಚಿಕ್ಕೋಡಿ ಜಿಲ್ಲೆಯನ್ನು ರಚಿಸುವಂತೆ ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರಿಗೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಎಸ್ ವೈ ಹಂಜಿ, ಕಾರ್ಯದರ್ಶಿ ರುದ್ರಪ್ಪ ಸಂಗಪ್ಪಗೋಳ, ಸಂಜಯ ಪಾಟೀಲ, ಸಂತೋಷ ಚಿಂಗಳೆ, ವಿಠಲ ಸ್ವಾಮಿ, ಬಸು ಸಾಬನೆ, ಸುರೇಶ ಬ್ಯಾಕುಡೆ, ಕಾಶಿನಾಥ ಗಿರಿಜಾವಗೋಳ, ಸುರೇಶ ತಳವಾರ, ಅರವಿಂದ ಮಾದರ, ಜಗದೀಶ ಪಾಟೀಲ ಇತರರು ಇದ್ದರು.