ಹಾರೂಗೇರಿ : ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ ಮಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ದಕ್ಷಿಣ ಭಾರತ ಮಹಿಳಾ ಪರಿಷತ್ ಮತ್ತು ವೀರ ಮಹಿಳಾ ಪರಿಷತ್ ಗಳನ್ನು ಸ್ಥಾಪಿಸಿ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನ ಮಾನ ನೀಡುವ ಜೊತೆಗೆ, ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಜೈನ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ದಕ್ಷಿಣ ಭಾರತ ಜೈನ ಸಭೆ ಇತರೆ ಸಮಾಜಗಳಿಗೆ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.
ಅವರು ಸೋಮವಾರ ಹಾರೂಗೇರಿಯ ಶ್ರೀ ಆಧಿನಾಥ ಸಮುದಾಯ ಭವನದಲ್ಲಿ ನಡೆದ ದಕ್ಷಿಣ ಭಾರತ ಜೈನ ಸಭೆಯ 103ನೇ ತ್ರೈಮಾಸಿಕ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಹಿಂಸೆ, ತ್ಯಾಗ, ಶಾಖಾಹಾರಗಳ ರಾಯಭಾರಿಯಂತೆ ವಿಶ್ವದಲ್ಲಿ ಶಾಂತಿಯ ಸಂದೇಶ ಸಾರುತ್ತಿರುವ ಧರ್ಮ ಜೈನ ಧರ್ಮ, ಒಂದು ಇರುವೆಯೂ ಸೇರಿದಂತೆ ಯಾವುದೇ ಜೀವಿಗೆ ನೋವನ್ನುಂಟು ಮಾಡಬಾರದೆನ್ನುವ ಮಹಾನ್ ಧ್ಯೇಯದ ಮೇಲೆ ನಿಂತಿರುವ ಧರ್ಮ ಎಂದು ಹೇಳಿದರು.
ಸುಮಾರು 120 ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಸ್ತವನಿಧಿಯಲ್ಲಿ ಸ್ಥಾಪಿತಗೊಂಡ ದಕ್ಷಿಣ ಭಾರತ ಜೈನಸಭೆಯ ಕಾರ್ಯಗಳು ಇಂದು ಇತರೆ ಸಮಾಜಗಳಿಗೆ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು. ದಕ್ಷಿಣ ಭಾರತ ಜೈನ ಸಭೆಯು ಸಮಾಜದ ಅಭಿವೃದ್ಧಿಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದೆ. ಶಿಕ್ಷಣ, ಸಂಸ್ಕಾರ, ಮತ್ತು ಕೃಷಿಗೆ ಉತ್ತೇಜನ ನೀಡುವ ಮುಖ್ಯ ಉದ್ಧೇಶದಿಂದ ಸಭೆ ತನ್ನ ಕಾರ್ಯವನ್ನು ನಿರ್ವಹಿಸುತ್ತ ಬಂದಿದೆ. ಯುವಕರಲ್ಲಿ ಸಮಾಜ ಜಾಗೃತಿ ಮತ್ತು ದುಶ್ಚಟದಿಂದ ದೂರವಾಗಿರುವಂತೆ ನೋಡಿಕೊಳ್ಳಲು ವೀರ ಸೇವಾ ದಳ ಸ್ಥಾಪಿಸಿ ಯುವಕರಲ್ಲಿ ಸಮಾಜ ಜಾಗೃತಿ ಮೂಡಿಸುವ ಕಾರ್ಯ ಯಾರಾದರೂ ಮಾಡಿದ್ದರೆ ಅದು ದಕ್ಷಿಣ ಭಾರತ ಜೈನ ಸಭೆ ಅಂದರೆ ತಪ್ಪಾಗಲಾರದು ಎಂದು ಅವರು ಹೇಳಿದರು.
ಜೈನ ಧರ್ಮದ ಅಭಿವೃದ್ಧಿ ಪ್ರಸ್ತುತ ಕಾಂಗ್ರೆಸ್ ಸರಕಾರ ಹಲವಾರು ರೀತಿಯಲ್ಲಿ ನೆರವು ಒದಗಿಸಿದೆ. ಮುಂದಿನ ದಿನಗಳಲ್ಲಿ ಯಾವುದೇ ಕೆಲಸಗಳಾಗಬೇಕಾದರೆ ನಾವು ಸಹ ಕೈ ಜೋಡಿಸುತ್ತೇವೆ ಎಂದು ಚನ್ನರಾಜ ಭರವಸೆ ನೀಡಿದರು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು, ನಾಂದಣಿ ಹಾಗೂ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು, ಕೊಲ್ಲಾಪುರ ವಹಿಸಿದ್ದರು.
ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ. ಸುಧಾಕರ್, ಬಾಲಚಂದ್ರ ಪಾಟೀಲ, ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಾಜೇಂದ್ರ ಪಾಟೀಲ (ಯಡ್ರಾವಕರ್), ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ, ಡಿ.ಸಿ.ಸದಲಗೆ, ಚನ್ನಪ್ಪಣ್ಣಾ ಅಸ್ಕಿ, ಡಾ. ಮಹಾವೀರ ದಾನಿಗೊಂಡ, ಉತ್ತಮ ಪಾಟೀಲ, ಮಾಜಿ ಸಚಿವ ವೀರಕುಮಾರ್ ಪಾಟೀಲ, ಅಪ್ಪಾಸಾಬ್ ಕುಲಗುಡೆ ಉಪಸ್ಥಿತರಿದ್ದರು.
ಬಿಜೆಪಿಯವರು ಇನ್ನಾದರೂ ಕೆಟ್ಟ ರಾಜಕೀಯ ಬಿಡಲಿ: ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ:
ಬಿಜೆಪಿಯವರು ಇಡಿ, ಐಟಿ ಮುಂತಾದ ಸಂಸ್ಥೆಗಳನ್ನು ವಿರೋಧ ಪಕ್ಷದವರ ಮೇಲೆ ಸೇಡು ತೀರಿಸಿಕೊಳ್ಳಲು ರಾಜಕೀಯ ದಾಳವಾಗಿ ಬಳಸುತ್ತಿರುವ ಕುರಿತು ನಾವು ಮೊದಲಿನಿಂದಲೂ ಹೇಳುತ್ತ ಬಂದಿದ್ದೇವೆ. ಈಗ ಈ ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯವೇ ನಮ್ಮ ಅಭಿಪ್ರಾಯಕ್ಕೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಇಡಿಗೆ ಚಾಟಿ ಬೀಸಿರುವ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನಾದರೂ ಇಂತಹ ಕೆಟ್ಟ ರಾಜಕೀಯವನ್ನು ಬಿಜೆಪಿಯವರು ಬಿಡಲಿ. ಮತ್ತು ಈವರೆಗಿನ ತಪ್ಪನ್ನು ಒಪ್ಪಿಕೊಂಡು ರಾಷ್ಟ್ರದ ಜನತೆಯ ಕ್ಷಮೆ ಕೇಳಲಿ ಎಂದು ಹೆಬ್ಬಾಳಕರ್ ಆಗ್ರಹಿಸಿದ್ದಾರೆ.
ದೇವಸ್ಥಾನದ ಮೇಲ್ಚಾವಣಿ ಕಾಮಗಾರಿಗೆ ಪೂಜೆ
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ವಿಠ್ಠಲ ಬೀರದೇವರ ದೇವಸ್ಥಾನ ಕಟ್ಟಡದ ಮೇಲ್ಚಾವಣಿಗೆ ಕಾಂಕ್ರೀಟ್ (ಸ್ಲ್ಯಾಬ್) ಹಾಕುವ ಕಾಮಗಾರಿಗೆ ಸ್ಥಳೀಯ ಜನ ಪ್ರತಿನಿಧಿಗಳು, ಗ್ರಾಮದ ಮುಖಂಡರು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
1.50 ಕೋಟಿ ರೂ, ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನದ ನಿರ್ಮಾಣಕ್ಕಾಗಿ ಬಾಗಲಕೋಟೆಯ ಶೆಲ್ಲಿಕೇರಿಯಿಂದ ವಿಶೇಷ ಕಲ್ಲುಗಳನ್ನು ತರಿಸಿ, ಒಡಿಶಾ ರಾಜ್ಯದ ಶಿಲ್ಪಕಾರರಿಂದ ಕಲ್ಲುಗಳನ್ನು ಕೆತ್ತನೆ ಮಾಡಿಸಲಾಗಿದ್ದು, ಆದಷ್ಟು ಬೇಗ ಸುಂದರ ದೇವಸ್ಥಾನ ನಿರ್ಮಾಣ ಮಾಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ವಿಠ್ಠಲ ಸಾಂಬ್ರೇಕರ್, ಮಹಾಲಿಂಗ ಸಾಂಬ್ರೇಕರ್, ಮಲ್ಲಪ್ಪ ಸಾಂಬ್ರೇಕರ್, ಸುರೇಶ ಕರಗುಪ್ಪಿಕರ್, ಬಾಗಣ್ಣ ಸಾಂಬ್ರೇಕರ್, ವಿಠ್ಠಲ ರಾಮಾ ಸಾಂಬ್ರೇಕರ್, ಪಿರಾಜಿ ಸಾಂಬ್ರೇಕರ್, ಪಕೀರ್ ಸಾಂಬ್ರೇಕರ್, ಗಂಗಪ್ಪ ಸಾಂಬ್ರೇಕರ್, ಗಂಗಾರಾಮ ಅಷ್ಠೆಕರ್, ದೇವಸ್ಥಾನ ಕಮಿಟಿಯ ಸದಸ್ಯರು, ಗ್ರಾಮ ಪಂಚಾಯತಿಯ ಸದಸ್ಯರು ಸೇರಿದಂತೆ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.