ವಿಜಯಪುರ : ಚಂದಪ್ಪನ ಶಿಷ್ಯ, ನಟೋರಿಯಸ್ ರೌಡಿ ಬಾಗಪ್ಪ ಹರಿಜನ್ನ ಕೊಲೆಯಾಗಿದೆ. ವಿಜಯಪುರ ನಗರದ ರೆಡಿಯೋ ಕೇಂದ್ರದ ಬಳಿಯ ಮದಿನಾ ನಗರದಲ್ಲಿ ಮಂಗಳವಾರ ಬಾಗಪ್ಪ ಹರಿಜನ್ನ್ನು ಕೊಲೆ ಮಾಡಲಾಗಿದೆ. ಮಾರಾಕಾಸ್ತ್ರಗಳಿಂದ ಕೊಚ್ಚಿ ಮಾಡಲಾಗಿದೆ. ದಶಕಗಳ ಹಿಂದೆ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಭೀಮಾತೀರದಲ್ಲಿ ರಕ್ತದ ಹೊಳೆಯನ್ನೇ ಹರಿಸಿದ್ದ ಬಾಗಪ್ಪ ಚರಿತ್ರೆ ಹೀಗಿದೆ.
ಕೊಲೆಯಾದ ಬಾಗಪ್ಪ ಹರಿಜನ್ ಭೀಮಾತೀರದ ಹಂತಕ ಎಂದೇ ಕುಖ್ಯಾತಿಯಾಗಿದ್ದ ಚಂದಪ್ಪ ಹರಿಜನ್ ಶಿಷ್ಯನಾಗಿದ್ದ. ಬಾಗಪ್ಪ ಹರಿಜನ್ ಕಲಬುರ್ಗಿ, ವಿಜಯಪುರ ಭಾಗದ ಭೀಮಾತೀರದಲ್ಲಿ ಹಲವು ಅಪರಾಧ ಕೃತ್ಯಗಳನ್ನು ಎಸಗಿದ್ದ.
ಬಾಗಪ್ಪ ಹರಿಜನ್ ಮೇಲಿದ್ದ ಪ್ರಕರಣಗಳು
ಬಾಗಪ್ಪ ಹರಿಜನ್ ಮೇಲೆ ಒಟ್ಟು 10 ಪ್ರಕರಣಗಳಿವೆ, ಈ ಪೈಕಿ 6 ಕೊಲೆ ಪ್ರಕರಣಗಳು ಇವೆ. 1998 ರಲ್ಲಿ ಸಿಂದಗಿಯಲ್ಲಿ ಸ್ಟನ್ಗನ್ ಬಳಸಿ ಗುಂಡು ಹಾರಿಸಿದ್ದ ಕೇಸ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಈತನ ಹೆಸರಿದೆ. ಚಂದಪ್ಪ ಹರಿಜನ್ ಸಹೋದರ ಬಸಪ್ಪ ಹಾಗೂ ಸಂಬಂಧಿ ಮುತ್ತುರಾಜ ಕೊಲೆ ಪ್ರಕರಣ ಈತನ ಮೇಲಿದೆ.
* 2000 ರಲ್ಲಿ ಪೊಲೀಸರ ಮೇಲೆ ಫೈರಿಂಗ್
* 1999 ರಲ್ಲಿ ಆಲಮೇಲದಲ್ಲಿ ನಡೆದ ಕೊಲೆ ಪ್ರಕರಣ
* 1998 ರಲ್ಲಿ ಕಲಬುರಗಿ ಜಿಲ್ಲೆ ಆಳಂದನಲ್ಲಿ ನಡೆದ ಜೋಡಿ ಕೊಲೆ ಪ್ರಕರಣ
* 1997 ರಲ್ಲಿ ಚಡಚಣದಲ್ಲಿ ನಡೆದ ಕೊಲೆ ಪ್ರಕರಣ
* 2001 ರಲ್ಲಿ ಕೋಡ್ ಕೊಲೆ ಪ್ರಕರಣ
2003 ರಲ್ಲಿ ಕಲಬುರಗಿ ಜಿಲ್ಲೆ ಅಫಜಲಪೂರ ತಾಲೂಕಿನ ಶಿರೋಳದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು.
ಬಾಗಪ್ಪನ ಮೇಲೆ ಫೈರಿಂಗ್
ಕಳೆದ 2018 ಆಗಷ್ಟ್ 8 ರಂದು ವಿಜಯಪುರ ನಗರದ ನ್ಯಾಯಾಲಯದ ಆವರಣದಲ್ಲಿ ಬಾಗಪ್ಪ ಹರಿಜನ್ ಮೇಲೆ ಪೀರಪ್ಪ ಹಡಪದ್ ಎಂಬಾತ ಫೈರಿಂಗ್ ಮಾಡಿದ್ದನು. ಚಂದಪ್ಪ ಹರಿಜನ ಸಹೋದರನ ಪುತ್ರ ಭೀಮಸ್ಯಾ ಹಾಗೂ ಇತರರು ಪೀರಪ್ಪ ಹಡಪದಗೆ ಬಾಗಪ್ಪ ಕೊಲೆಗೆ ಸುಪಾರಿ ನೀಡಿದ್ದರು. ಪ್ರಕರಣದ ವಿಚಾರಣೆಗೆ ಬಾಗಪ್ಪ ಹರಿಜನ್ ನ್ಯಾಯಾಲಯಕ್ಕೆ ಬಂದಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು. ಬಳಿಕ, ಹೈದ್ರಾಬಾದ್ನಲ್ಲಿ ಚಿಕಿತ್ಸೆ ಪಡೆದು ಬಾಗಪ್ಪ ಹರಿಜನ್ ಗುಣ ಮುಖನಾಗಿದ್ದ.
ಗುಂಡು ಹಾರಿಸಿ ಹತ್ಯೆ ಮಾಡಿರುವ ಶಂಕೆ: ಎಸ್ಪಿ
ಪ್ರಕರಣ ಸಂಬಂಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಗಪ್ಪ ಹರಿಜನ್ನನ್ನು ಕೊಲೆ ಮಾಡಿರುವ ಹಂತಕರ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ. ತನಿಖೆ ಮುಂದುವರೆದಿದೆ. ಬಾಗಪ್ಪ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಬಾಗಪ್ಪ ಹರಿಜನ್ ವಿಜಯಪುರ ನಗರದ ಮದೀನಾ ನಗರದ ಬಾಡಿಗೆ ಮನೆಯಲ್ಲಿದ್ದನು. ಊಟ ಮಾಡಿ ಮನೆಯ ಮುಂದೆ ಬಾಗಪ್ಪ ವಾಕಿಂಗ್ ಮಾಡುತ್ತಿದ್ದ ವೇಳೆ ಆಟೋದಲ್ಲಿ ಬಂದ ನಾಲ್ಕೈದು ಜನರು ಕೊಡಲಿ ಸೇರಿ ವಿವಿಧ ಮಾರಕಾಸ್ತ್ರ ಹಾಗೂ ಗುಂಡು ಹಾರಿಸಿ ಹತ್ಯೆ ಮಾಡಿರುವ ಅನುಮಾನವಿದೆ ಎಂದು ಹೇಳಿದರು.