ಮಂಗಳೂರು: ದೇರಳಕಟ್ಟೆ ನಾಟೆಕಲ್ ರಸ್ತೆ ಬಳಿಯ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬುಧವಾರ (ಜೂನ್ 4) ಹುಸಿ ಕರೆ ಮಾಡಿದ ಪ್ರಕರಣ ಸಂಬಂಧ ಉಳ್ಳಾಲ ಠಾಣೆಯ ಪೊಲೀಸರು ದೂರು ನೀಡಿದ್ದ, ಅದೇ ಸಂಸ್ಥೆಯ ವಿದ್ಯಾರ್ಥಿನಿಯನ್ನೇ ಶನಿವಾರ ಬಂಧಿಸಿದ್ದಾರೆ.
ಸಂಸ್ಥೆಯ ವೈದ್ಯಕೀಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಚಲಸಾನಿ ಮೋನಿಕಾ ಚೌಧರಿ ಬಂಧಿತ ವಿದ್ಯಾರ್ಥಿನಿ. ಆಕೆ ಅದೇ ದಿನ ಸೆಮಿನಾರ್ ಪ್ರಸ್ತುತಿ ಪಡಿಸಬೇಕಿತ್ತು. ಅದನ್ನು ತಪ್ಪಿಸಿಕೊಳ್ಳಲು ಹುಸಿ ಬಾಂಬ್
ಕರೆಯ ನಾಟಕವಾಡಿದ್ದಳು ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಣಚೂರು ಆಸ್ಪತ್ರೆಗೆ ಬುಧವಾರ ಬೆಳಿಗ್ಗೆ 8-45 ಗಂಟೆಗೆ ಕರೆ ಮಾಡಿದ್ದ ವ್ಯಕ್ತಿ, ‘ಆಸ್ಪತ್ರೆಗೆ ಬಾಂಬ್ ಇರಿಸಲಾಗಿದೆ. ಬೆಳಿಗ್ಗೆ 11ರ ಒಳಗಾಗಿ ಆಸ್ಪತ್ರೆಯನ್ನು ಖಾಲಿ ಮಾಡಬೇಕು’ ಎಂದು ತಿಳಿಸಿದ್ದ. ಇದೇ ರೀತಿ 5 ಸಲ ಕರೆ ಮಾಡಿ ಬೆದರಿಕೆ ಹಾಕಿಲಾಗಿತ್ತು. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳದ ತಂಡ ಹಾಗೂ ಶ್ವಾನ ದಳ ತಂಡ ಆಸ್ಪತ್ರೆಯ ಸಂಪೂರ್ಣ ಕಟ್ಟಡ, ಆಸ್ಪತ್ರೆಯ ವಾಹನ ನಿಲುಗಡೆ ಸ್ಥಳ ಹಾಗೂ ಆಸ್ಪತ್ರೆಯ ಸುತ್ತಮುತ್ತಲಿನ ಪರಿಸರ ಸತತ 10 ಗಂಟೆ ಪರಿಶೀಲಿಸಿದ್ದರು. ಸ್ಥಳದಲ್ಲಿ ಯಾವುದೇ ಬಾಂಬ್ ಪತ್ತೆಯಾಗಿರಲಿಲ್ಲ. ಬೆದರಿಕೆ ಕರೆಯಿಂದಾಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಆತಂಕಕ್ಕೆ ಒಳಗಾಗಿದ್ದರು.
‘ಆರೋಪಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352(2) (ಸಾರ್ವಜನಿಕ ಶಾಂತಿಭಂಗಕ್ಕೆ ಪ್ರಚೋದನೆ), ಸೆಕ್ಷನ್ 352(4)ರ (ಸಾರ್ವಜನಿಕ ಶಾಂತಿ ಭಂಗ) ಅಡಿ ಎಫ್ಐಆರ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ, ಆಕೆಯ ಮೊಬೈಲನ್ನು ಶನಿವಾರ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ’ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮರ್ ರೆಡ್ಡಿ ತಿಳಿಸಿದ್ದಾರೆ.