ಬೆಳಗಾವಿ : ಬೆಂಗಳೂರಿನಲ್ಲಿ ಆರ್ಸಿಬಿ ತಂಡದ ಸಂಭ್ರಮಾಚರಣೆ ಸಂದರ್ಭದಲ್ಲಿ ನಡೆದ ಕಾಲ್ತುಳಿತದಿಂದ 11 ಜನ ಸಾವಿಗೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿರುವ ಬಿಜೆಪಿ ಕಾರ್ಯಕರ್ತರು ಬೆಳಗಾವಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ವತಿಯಿಂದ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ಮಾತನಾಡಿ
ಆರ್.ಸಿ.ಬಿ ಗೆದ್ದ ಸಂದರ್ಭದಲ್ಲಿ ಇಡೀ ರಾಜ್ಯಾದ್ಯಂತ ಪೊಲೀಸ್ ಭದ್ರತೆಯಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ, ಕಾಂಗ್ರೆಸ್ ಸರ್ಕಾರವು ಗೌರವ ಕೊಡುವ ಸಂಬಂಧ ಎರಡು ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮಗಳು ಬೇಡವೆಂದು ಪೊಲೀಸ್ ಇಲಾಖೆ ಪತ್ರದ ಮೂಲಕ ತಿಳಿಸಿದರೂ ಸಿಎಂ ರವರು ಕಾರ್ಯಕ್ರಮ ಮಾಡಬೇಕು; ಆಟಗಾರರಿಗೆ ಗೌರವ ಕೊಡಬೇಕು ಎಂದು ಸೂಚಿಸಿದರು. ಅದು ಅವರಿಗೆ ಗೌರವ ಕೊಡುವ ಕಾರ್ಯಕ್ರಮವಾಗಿರಲಿಲ್ಲ. ಆಟಗಾರರನ್ನು ಅವಮಾನಿಸುವ ಕಾರ್ಯಕ್ರಮವಾಗಿತ್ತು ಎಂದು ಅವರು ಟೀಕಿಸಿದರು.
ಒಂದು ಲಕ್ಷಕ್ಕಿಂತ ಹೆಚ್ಚಿನ ಅಭಿಮಾನಿಗಳು ಸೇರಿದ್ದರೂ ವಿಧಾನಸೌಧದ ಬಳಿ ಆಯೋಜಿಸಿದ್ದ ಕಾರ್ಯಕ್ರಮವನ್ನು ನೋಡಲು ಆಗಲಿಲ್ಲ. ಇದೊಂದು ಪ್ರಚಾರಕ್ಕೆಂದೇ ಮಾಡಿರುವ ಕಾರ್ಯಕ್ರಮವಾಗಿದೆ ಎಂದು ಅವರು ಆರೋಪಿಸಿದರು. ಮಧ್ಯಾಹ್ನ ಸುಮಾರು 3 ಗಂಟೆಗೆ ಕಾಲ್ತುಳಿತದಿಂದ ಒಂದು ಸಾವಾಗಿದ್ದು, ಮುಖ್ಯಮಂತ್ರಿಗಳಿಗೆ ಆ ವಿಷಯವು ಸಂಜೆ 5 ಗಂಟೆಗೆ ತಿಳಿಯುತ್ತದೆ ಎಂದರೆ ಹೇಗೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.
ವಿಧಾನ ಸೌಧದ ಮುಂದೆ ಕಾರ್ಯಕ್ರಮ ಆಯೋಜಿಸುವ ಮೊದಲು ಎಲ್ಲಾ ಸಿದ್ಧತೆ ಮಾಡಿಕೊಂಡು ಕಾರ್ಯಕ್ರಮವನ್ನು ಆಯೋಜಿಸುವ ಬದಲು ತರಾತುರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಮೂಲಕ 11 ಜನರ ಬಲಿಯನ್ನು ಕಾಂಗ್ರೆಸ್ ಸರ್ಕಾರವು ಪಡೆದಿದೆ ಎಂದು ಅವರು ಆರೋಪಿಸಿದರು. ಸರ್ಕಾರದ ವೈಫಲ್ಯಗಳನ್ನು ಮರೆಮಾಚುವ ಸಲುವಾಗಿ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಭದ್ರತೆಯ ವೈಫಲ್ಯವೆಂದು ಅವರನ್ನು ಅಮಾನತುಗೊಳಿಸಿದ್ದಾರೆ ಈ ಕೂಡಲೇ ಸಿ.ಎಂ, ಡಿ.ಸಿ.ಎಂ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಮಾಜಿ ಶಾಸಕ ಸಂಜಯ್ ಪಾಟೀಲ ಅವರು ಮಾತನಾಡಿ ಕಾರ್ಯಕ್ರಮ ಆಯೋಜಿಸುವ ಮೊದಲು ಪೊಲೀಸ್ ಭದ್ರತೆ, ಇನ್ನಿತರೆ ಸಿದ್ಧತೆಗಳನ್ನು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಏಕೆ ತೆಗೆದುಕೊಂಡಿಲ್ಲ?
ಡಿ.ಪಿ.ಎ.ಆರ್. ಕಾರ್ಯದರ್ಶಿಯವರು ಮಾಧ್ಯಮದ ಮೂಲಕ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ನಾವು ಕಾರ್ಯಕ್ರಮವನ್ನು ರೂಪಿಸಿದ್ದೇವೆ; ದಯವಿಟ್ಟು ಸಾರ್ವಜನಿಕರು ಸ್ಟೇಡಿಯಂಗೆ ಬರಬೇಕು ಎಂದು ಹೇಳಿಕೆಯನ್ನು ನೀಡಿದ್ದಾರೆ. ಅದೇ ರೀತಿ ಡಿಸಿಎಂ ಅವರು ಕೂಡ ಹೇಳಿದ್ದಾರೆ. ಆದರೆ ಆರ್.ಸಿ.ಬಿ ತಂಡವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದಕ್ಕೆ ಅವರನ್ನು ಬಂಧಿಸಿದ್ದಾರೆ. ಮೇಲೆ ಹೇಳಿಕೆ ನೀಡಿರುವವರನ್ನು ಏಕೆ ಬಂಧಿಸಿಲ್ಲ ಎಂದು ಹೇಳಿದರು
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್ ಎಸ್ ಸಿದ್ಧನಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ದೇಶಪಾಂಡೆ, ರಾಜಶೇಖರ್ ಡೋಣಿ, ಮಲ್ಲಿಕಾರ್ಜುನ ಮಾದಮ್ಮನವರ, ಉಜ್ವಲಾ ಬಡವನಾಚೆ, ಮುರುಗೇಂದ್ರಗೌಡ ಪಾಟೀಲ, ಮಾಧ್ಯಮ ಪ್ರಮುಖರಾದ ಸಚಿನ್ ಕಡಿ, ಹನುಮಂತ ಕೊಂಗಾಲಿ,ಮಂಡಲ ಅಧ್ಯಕ್ಷರಾದ ಯುವರಾಜ್ ಜಾಧವ್, ವಿಜಯ್ ಕೊಡಗನೂರ,ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಯಲ್ಲೇಶ್ ಕೋಲಕಾರ, ಪ್ರಕೋಷ್ಠಗಳ ಸಂಯೋಜಕ ಮಹೇಶ್ ಮೋಹಿತೆ,ದಾದಾಗೌಡ ಬಿರಾದಾರ, ವೈದ್ಯಕೀಯ ಪ್ರಕೋಷ್ಠ ಜಿಲ್ಲಾ ಸಂಚಾಲಕ ಗುರು ಕೋತಿನ್, ಶಿವಾನಂದ ಹನುಮಸಾಗರ, ಮನೋಜ್ ಪಾಟೀಲ, ಶಿಲ್ಪಾ ಕೆಕರೆ, ಶ್ವೇತಾ ಜಗದಾಳೆ, ಪ್ರಸಾದ್ ದೇವರಮನಿ ಹಾಗೂ ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.