ಅಹಮದಾಬಾದ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ಚೊಚ್ಚಲ ಐಪಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಮಂಗಳವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತ್ತು.
191 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಪಂಜಾಬ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 184 ರನ್ ಗಳಿಸಲಷ್ಟೇ ಶಕ್ತವಾಯಿತು.
ಅನುಭವಿ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರದ್ದೇ ಗರಿಷ್ಠ ಗಳಿಕೆ. ವಿರಾಟ್ 35 ಎಸೆತಗಳಲ್ಲಿ 43 ರನ್ ಮಾಡಿದರು. ಈ ಬಾರಿ ಬೆಂಗಳೂರು ಗೆಲುವು ಸಾಧಿಸಲು ವಿರಾಟ್ ಕೊಹ್ಲಿ ಅವರೇ ಪ್ರಮುಖ ಕಾರಣ. ಯಾಕೆಂದರೆ ಇಡೀ ಪಂದ್ಯಾವಳಿಯಲ್ಲಿ ಬೆಂಗಳೂರು ಪರ ಅತಿ ಹೆಚ್ಚು ರನ್ ಅವರು ಗಳಿಸಿದ್ದಾರೆ. ಉಳಿದಂತೆ ನಾಯಕ ರಜತ್ ಪಾಟಿದಾರ್ 26 ರನ್, ಮಯಾಂಕ್ ಅಗರ್ವಾಲ್ 24, ಲಿವಿಂಗ್ ಸ್ಟೋನ್ 25, ಜಿತೇಶ್ ಶರ್ಮಾ 24, ಶೆಫರ್ಡ್ 17 ರನ್ ಮಾಡಿದರು.
191 ರನ್ ಗುರಿ ಬೆನ್ನತ್ತಿದ್ದ ಪಂಜಾಬ್ ತಂಡಕ್ಕೆ ಪ್ರಿಯಾಂಶ್ ಆರ್ಯ ಮತ್ತು ಪ್ರಭ್ ಸಿಮ್ರಾನ್ ಸಿಂಗ್ ಉತ್ತಮ ಆರಂಭ ನೀಡಿದರು. ಆರ್ಯ 24 ರನ್ ಮಾಡಿದರೆ, ಪ್ರಭ್ ಸಿಮ್ರಾನ್ 26 ರನ್ ಮಾಡಿದರು. ಕಳೆದ ಪಂದ್ಯದ ಹೀರೋ ನಾಯಕ ಶ್ರೇಯಸ್ ಅಯ್ಯರ್ ಕೇವಲ ಒಂದು ರನ್ ಗೆ ಆಟ ಮುಗಿಸಿದರು. ಅವರಿಂದ ಬ್ಯಾಟಿಂಗ್ ಕುಸಿತಗೊಂಡಿತು. ಆದರೆ
ಉತ್ತಮ ಬ್ಯಾಟಿಂಗ್ ಮಾಡಿದ ಜೋಶ್ ಇಂಗ್ಲಿಶ್ 39 ರನ್ ಮಾಡಿದರು. 23 ಎಸೆತ ಎದುರಿಸಿದ ಅವರು ನಾಲ್ಕು ಸಿಕ್ಸರ್ ಬಾರಿಸಿದರು. ನೆಹಾಲ್ ವಧೇರ 18 ಎಸೆತಗಳಲ್ಲಿ 15 ರನ್ ಮಾಡಿ ಔಟಾದರು. ಸ್ಪೋಟಕ ಬ್ಯಾಟರ್ ಸ್ಟೋಯಿನಸ್ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದರಾದರೂ ಎರಡನೇ ಎಸೆತಕ್ಕೆ ಔಟಾದರು. ಭುವನೇಶ್ವರ್ ಕುಮಾರ್ ಒಂದೇ ಓವರ್ ನಲ್ಲಿ ಎರಡು ವಿಕೆಟ್ ಕಿತ್ತು ಪಂದ್ಯದ ಗತಿ ಬದಲಿಸಿದರು. ಉತ್ತಮ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು.
ಕೊನೆಯ ಎರಡು ಓವರ್ ಗಳಲ್ಲಿ 41 ರನ್ ಅಗತ್ಯವಿತ್ತು. ಭುವನೇಶ್ವರ ಎಸೆದ ಮೊದಲ ಎಸೆತವನ್ನು ಶಶಾಂಕ್ ಸಿಕ್ಸರ್ ಗೆ ಬಾರಿಸಿದರು. ಆ ಓವರ್ ನಲ್ಲಿ ಒಟ್ಟು 13 ರನ್ ಬಂತು. ಕೊನೆಯ ಓವರ್ ನಲ್ಲಿ 29 ರನ್ ಅಗತ್ಯವಿದ್ದಾಗ ಜೋಶ್ ಹೇಜಲ್ ವುಡ್ ಬೌಲಿಂಗ್ ಮಾಡಿದರು. ಎರಡು ಸಿಕ್ಸರ್ ಬೌಂಡರಿನೊಂದಿಗೆ ಶಶಾಂಕ್ ಪ್ರಯತ್ನ ಪಟ್ಟರೂ ಜಯದ ಗಡಿ ದಾಟಲು ಸಾಧ್ಯವಾಗಲಿಲ್ಲ.
ಬೆಂಗಳೂರು ತಂಡ ಈ ಬಾರಿ ತವರಿನ ಅಚೆ ನಡೆದ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಿತ್ತು. ಕನ್ನಡಿಗರ ತಂಡ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ಇದೇ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಸಮಸ್ತ ಕನ್ನಡಿಗರ ದಶಕಗಳ ಕನಸನ್ನು ನನಸಾಗಿಸಿದೆ. ಮಂಗಳವರ ರಾತ್ರಿ ಇಡೀ ಆರ್ಸಿಬಿ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.