ಅಯೋಧ್ಯೆ: ಮಹಾಕುಂಭ ಮೇಳ ನಡೆಯುತ್ತಿರುವ
ಪ್ರಯುಕ್ತ ಅಯೋಧ್ಯೆಗೆ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ, ಹೀಗಾಗಿ, ಅಯೋಧ್ಯೆಯಲ್ಲಿ ಜನರನ್ನು ನಿಯಂತ್ರಿಸಲು ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
ಪ್ರಯಾಗ್ರಾಜ್ನಿಂದ ಅಯೋಧ್ಯೆ ಕೇವಲ 160 ಕಿ.ಮೀ ದೂರದಲ್ಲಿರುವ ಕಾರಣ ಕುಂಭದಲ್ಲಿ ಪುಣ್ಯ ಸ್ನಾನ ಮಾಡಿದವರು ಅಯೋಧ್ಯೆ ರಾಮನ ದರ್ಶನಕ್ಕೆ ಬರುತ್ತಿದ್ದಾರೆ.
ಜನ ಸಂದಣಿ ನಿಯಂತ್ರಣಕ್ಕೆ ಅಯೋಧ್ಯೆಯನ್ನು ಆರು ವಲಯಗಳಾಗಿ ಮತ್ತು 11 ಸೆಕ್ಟರ್ಗಳಾಗಿ ವಿಭಾಗಿಸಲಾಗಿದೆ. ಅಯೋಧ್ಯೆಗೆ ನಿತ್ಯ ಲಕ್ಷಕ್ಕೂ ಹೆಚ್ಚು ಭಕ್ತರು ಬರುತ್ತಿದ್ದಾರೆ, ಬೆಳಿಗ್ಗೆ ಸರಯೂ ನದಿಯಲ್ಲಿ ಸ್ನಾನ ಮಾಡಿ ಬಾಲರಾಮ, ಹನುಮನ ದರ್ಶನ ಪಡೆಯುತ್ತಿದ್ದಾರೆ. ಭಕ್ತ ಸಾಗರವನ್ನು ನಿಯಂತ್ರಿಸಲು ಮತ್ತು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಭದ್ರತೆ ಬಿಗಿ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಧುವನ್ ಕುಮಾರ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹಿಂದೂಗಳಿಗೆ ಅತೀ ಪುಣ್ಯ ಸ್ಥಳಗಳಲ್ಲಿ ಒಂದಾದ ಕಾಶಿಗೆ ಭೇಟಿ ನೀಡುವವರ ಸಂಖ್ಯೆ ದುಪ್ಪಟ್ಟಾಗಿದೆ. ಮಹಾಕುಂಭಮೇಳಕ್ಕೆ ಬಂದವರು ಕಾಶಿ ವಿಶ್ವನಾಥನ ದರ್ಶನಕ್ಕೆ ಬರುತ್ತಿದ್ದಾರೆ. ಶಿವರಾತ್ರಿಯೂ ಸಮೀಪಿಸುತ್ತಿರುವ ಕಾರಣ ಕಾಶಿಯಲ್ಲೂ ಜನಸಾಗರ ಕಂಡುಬರುತ್ತಿದೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಸಾಗುತ್ತಿರುವ ದೃಶ್ಯಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.