ಬೆಳಗಾವಿ: ಬೆಳಗಾವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಕಾಲೇಜಿಗೆ ಕೀರ್ತಿ ತಂದ ಆರ್ .ಎಸ್. ಪಾಟೀಲ ಅವರನ್ನು ಶನಿವಾರದಂದು ಹೃದಯ ಸ್ಪರ್ಶಿಯಾಗಿ ಬೀಳ್ಕೊಡಲಾಯಿತು. ಶ್ರೇಷ್ಠವಾಗ್ಮಿಯಾಗಿ ಆರ್. ಎಸ್. ಪಾಟೀಲ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಹೆಸರುವಾಸಿಯಾಗಿದ್ದಾರೆ. ಅತ್ಯುತ್ತಮ ಭಾಷಣಕಾರರಾಗಿರುವ ಆರ್. ಎಸ್. ಪಾಟೀಲ ಅವರು ವಿಶೇಷ ದಿನಗಳಂದು ತಮ್ಮ ಶ್ರೇಷ್ಠ ಭಾಷಣದಿಂದ ಜನಪ್ರಿಯತೆ ಗಳಿಸಿದ್ದಾರೆ. ಬೋಧನೆಯನ್ನು ಸಹ ಆಳವಾಗಿ ಮಾಡುವ ಮೂಲಕ ವಿದ್ಯಾರ್ಥಿಗಳ ಮನದಲ್ಲಿ ಅಚ್ಚೊತ್ತುವಂತೆ ಮಾಡಿ ಸಹಸ್ರಾರು ವಿದ್ಯಾರ್ಥಿಗಳ ಬಾಳಿನ ಆಶಾಕಿರಣರಾಗಿರುವ ಅವರ ಸೇವೆಯನ್ನು ನೆನಪಿಸಲಾಯಿತು. ಸುದೀರ್ಘ 32 ವರ್ಷಗಳ ಸೇವೆ ಸಲ್ಲಿಸಿ ಆರ್.ಎಸ್. ಪಾಟೀಲ ಶನಿವಾರದಂದು ನಿವೃತ್ತಿಯಾಗಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಉಲ್ಲೇಖನೀಯ ಮತ್ತು ಸದಾ ಸ್ಮರಣೀಯ, ಸಹಾಯ, ಗೌರವ, ನಂಬಿಕೆ, ಪ್ರೀತಿ-ವಿಶ್ವಾಸವನ್ನು ನೀಡಿದ ಸಹೋದ್ಯೋಗಿ ಮಿತ್ರರಿಗೆ ಅವರು ಕೃತಜ್ಞತೆ ಅರ್ಪಿಸಿದರು. ಸೇವೆಗೆ ಅವಕಾಶ ನೀಡಿದ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಸಿಬ್ಬಂದಿ ಮತ್ತು ಸರ್ವರಿಗೂ ಅವರು ಕೃತಜ್ಞತೆ ಸಲ್ಲಿಸಿದರು. ಆಡಳಿತದಲ್ಲಿ ಸಹಾಯ, ಬೆಂಬಲ ನೀಡಿದ ಬೆಳಗಾವಿಯ ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೂ ಮತ್ತು ಸಿಬ್ಬಂದಿಗಳಿಗೂ ಅವರು ಅಭಿನಂದನೆ ಸಲ್ಲಿಸಿದರು.
ಸೇವಾ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಭಾವುಕರಾಗಿ ಮಾತನಾಡಿದ ಅವರು, ನನ್ನ ವೃತ್ತಿಗೆ ಸ್ಪೂರ್ತಿ ಮತ್ತು ಸಾಕ್ಷಿಯಾಗಿರುವ ನನ್ನ ಎಲ್ಲಾ ಆತ್ಮೀಯ ಸ್ನೇಹಿತರು ಮತ್ತು ಮಾಜಿ ವಿದ್ಯಾರ್ಥಿಗಳಿಗೆ ಧನ್ಯವಾದ ಸಲ್ಲಿಸಿದರು. ಸೇವಾ ಅವಧಿಯಲ್ಲಿ ಹಲವು ಸಂಘಟನೆಗಳಲ್ಲಿ ಕೆಲಸ ಮಾಡಿದ ವೃತ್ತಿಬಾಂಧವರು ಮತ್ತು ಮೌಲ್ಯಮಾಪನ, ಪರೀಕ್ಷೆ ಹಾಗೂ ಶೈಕ್ಷಣಿಕ ಕಾರ್ಯಗಳಲ್ಲಿ ನಿರಂತರ ಸಹಾಯ, ಸಹಕಾರ, ಬೆಂಬಲ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದ ಅವರು ಮುಂದಿನ ದಿನಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ಇನ್ನು ಹೆಚ್ಚು ಹೆಚ್ಚು ಶ್ರಮಿಸುವುದಾಗಿ ತಿಳಿಸಿದರು.
ನೂತನ ಪ್ರಾಚಾರ್ಯ ಡಿ.ಎಸ್.ಪವಾರ, ಉಪ ಪ್ರಾಚಾರ್ಯ ಸಿ . ಪಿ. ದೇವಋಷಿ ಹಾಜರಿದ್ದರು. ದಿವ್ಯಾ ಪಲಭಾವಿ ನಿರೂಪಿಸಿದರು. ಉಪನ್ಯಾಸಕ ಹಾಗೂ ಶಿಕ್ಷಕ ಸಿಬ್ಬಂದಿ ಹಾಜರಿದ್ದರು.
ಬೆಳಗಾವಿ ಜಿಎ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಸೇವಾವಧಿಯ ಅಪರೂಪದ ಕ್ಷಣಗಳನ್ನು ನೆನಪಿಸಿಕೊಂಡು ಭಾವುಕರಾದ ಆರ್ ಎಸ್ ಪಾಟೀಲ
