ಬೆಳಗಾವಿ: “ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ, ಇದಕ್ಕೆ ಉತ್ತಮ ಭವಿಷ್ಯವಿದೆ. ಇದರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಳಗಾವಿಯ ಅಶೋಕ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಸ್ವಚ್ಛತಾ ಓಟಕ್ಕೆ ಚಾಲನೆ ನೀಡಿ, ಮಾತಾಡಿದರು.
“ನಮ್ಮೆಲ್ಲರಿಗೂ ದೊಡ್ಡ ಜವಾಬ್ದಾರಿ ಇದೆ. ನಮಗೆ ಎಲ್ಲಾ ಧರ್ಮ, ಜಾತಿ ಒಂದೇ. ನಮಗೆ ಎಲ್ಲದರ ಮೇಲೂ ನಂಬಿಕೆ ಇದೆ. ನಾವೆಲ್ಲರೂ ನಮಗೆ ಸಿಕ್ಕ ಅವಕಾಶದಲ್ಲಿ ಪರಿಸರ ಕಾಪಾಡಲು ನಮ್ಮ ಸರ್ಕಾರದ ಯೋಜನೆಯಲ್ಲಿ ಅನುದಾನ ನೀಡಲಾಗಿದೆ. ಬೈರತಿ ಸುರೇಶ್ ಅವರು ನಗರಾಭಿವೃದ್ಧಿ ಸಚಿವರಾದ ಬಳಿಕ ಸುಮಾರು 200 ಕೋಟಿ ರೂ. ಗಳಷ್ಟು ಅನುದಾನವನ್ನು ಅನೇಕ ಯೋಜನೆಗಳ ಮೂಲಕ ಈ ನಗರಕ್ಕೆ ನೀಡಿದ್ದಾರೆ” ಎಂದು ಹೇಳಿದರು.
“ಮುಂದೆ ನಮ್ಮ ಸರ್ಕಾರ ಈ ಪ್ರದೇಶದ ಅಭಿವೃದ್ಧಿ ಮಾಡಿ, ಉದ್ಯೋಗ ನೀಡಲು ಅಗತ್ಯ ಕ್ರಮ ಕೈಗೊಳ್ಳಲಿದೆ. ನಾವು ನೀವು ಜೊತೆಯಾಗಿ ಕೈ ಜೋಡಿಸಿ ಹೆಜ್ಜೆ ಹಾಕೋಣ” ಎಂದು ಕರೆ ನೀಡಿದರು.
“ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ್ದರು. ಅದರ ಶತಮಾನೋತ್ಸವ ಹಿನ್ನೆಲೆಯಲ್ಲಿ ಕಳೆದ ವರ್ಷ ನಾವು ಬೆಳಗಾವಿಗೆ ಬಂದು ಗಾಂಧಿ ಭಾರತ ಎಂಬ ಕಾರ್ಯಕ್ರಮ ಮಾಡಿದೆವು. ಸ್ವಚ್ಛತೆ ಹಾಗೂ ಪರಿಸರ ಕಾಪಾಡುವುದು ಅವರ ಉದ್ದೇಶವಾಗಿತ್ತು” ಎಂದರು.
“ನಾನು ಚಿಕ್ಕ ವಯಸ್ಸಿನಲ್ಲಿ ಕ್ರಾಸ್ ಕಂಟ್ರಿ ಓಡುತ್ತಿದ್ದೆ. ಈಗ ವಯಸ್ಸಾಗಿದೆ. ಆದರೆ ನನ್ನ ಮನಸ್ಸು ನಿಮ್ಮಷ್ಟೇ ತಾರುಣ್ಯವಾಗಿದೆ. ನನ್ನ ಕೈಲಾದಷ್ಟು ನಡೆಯುತ್ತೇನೆ. ನಿಮಗೆ ಒಳ್ಳೆಯದಾಗಲಿ” ಎಂದು ತಿಳಿಸಿದರು.


