ಬೆಂಗಳೂರು: ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ ಮಾಡಿದೆ. ಆಗಸ್ಟ್ 1 ರಿಂದ ಈ ಹೊಸ ಪ್ರಯಾಣ ದರ ಅನ್ವಯವಾಗುತ್ತಿದೆ. ಈ ದರ ಏರಿಕೆ ನಿರ್ಧಾರವನ್ನು ಬೆಂಗಳೂರಿನ ಹಲವು ಪ್ರಯಾಣಿಕರು ವ್ಯಂಗ್ಯವಾಡಿದ್ದಾರೆ. ಇದೊಂದು ದಶಕದ ದೊಡ್ಡ ಜೋಕ್ ಎಂದಿದ್ದಾರೆ.
ಸದ್ಯ ಬೆಂಗಳೂರಿನ ಹಲವು ಆಟೋ ಚಾಲಕರು ಮೀಟರ್ ಅನ್ನೇ ಬಳಸುತ್ತಿಲ್ಲ. ಬಾಯಿಗೆ ಬಂದಂತೆ ದರ ಕೇಳುತ್ತಿದ್ದಾರೆ. ಕನಿಷ್ಠ ಶೇ 30 ರಷ್ಟು ಹೆಚ್ಚು ದರ ಕೊಡದಿದ್ದರೆ ಆಟೋವನ್ನೇ ಹತ್ತಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಆಟೋ ಮೀಟರ್ ದರ 3 ರೂಪಾಯಿ ಏರಿಕೆಯಾಗಿರುವುದು ದೊಡ್ಡ ಹಾಸ್ಯಕರ ಸಂಗತಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ದರ ಏರಿಕೆಯ ಬಗ್ಗೆ ನೆಟ್ಟಿಗ ದೀಪಕ್ ಎಂಬುವವರು ಈ ಬಗ್ಗೆ ಟ್ವೀಟ್ ಮಾಡಿ, ” ದರ ಏರಿಕೆಯು ಅಸಹಾಯಕ ಪ್ರಯಾಣಿಕರಿಗೆ ದೊಡ್ಡ ತಮಾಷೆಯಾಗಿದೆ. ಆಟೋರಿಕ್ಷಾ ಚಾಲಕರು ಎಂದಿಗೂ ಮೀಟರ್ ಹಾಕುವುದಿಲ್ಲ. ಅವರು ಕೇಳಿದಷ್ಟು ಹಣ ನೀಡಿದ್ದರೆ ಪ್ರಯಾಣಿಸಲು ನಿರಾಕರಿಸುತ್ತಾರೆ.” ಎಂದಿದ್ದಾರೆ. ಇನ್ನು ಹರೀಶ್ ಎಂಬುವವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆಟೋರಿಕ್ಷಾ ಚಾಲಕರು ಮೀಟರ್ ಹಾಕುವುದಿಲ್ಲ. ಇದು ದಶಕದ ದೊಡ್ಡ ತಮಾಷೆ ಎಂದು ಟೀಕಿಸಿದ್ದಾರೆ.
ರಾಜ್ಯ ಸರ್ಕಾರವು ಆಟೋರಿಕ್ಷಾ ದರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದ ನಗರದ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಈಗಾಗಲೇ ಪ್ರಯಾಣದ ವೆಚ್ಚ ಹೆಚ್ಚಾಗಿದೆ. ಸಾರಿಗೆ ಆಯ್ಕೆಗಳು ಕೂಡ ಕಡಿಮೆಯಾಗುತ್ತಿವೆ. ಆಗಸ್ಟ್ 1 ರಿಂದ BBMP ವ್ಯಾಪ್ತಿಯಲ್ಲಿ ಕನಿಷ್ಠ ಆಟೋ ದರವು ಮೊದಲ 2 ಕಿ.ಮೀ ಗೆ 30 ರೂ.ನಿಂದ 36 ರೂ.ಗೆ ಏರಿಕೆಯಾಗಲಿದೆ. ನಂತರದ ಪ್ರತಿ ಕಿ.ಮೀ ಗೆ 18 ರೂ. ಆಗಲಿದೆ. ಈ ದರ ಏರಿಕೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟೋ ಚಾಲಕರು ಮೀಟರ್ ಹಾಕುವುದಿಲ್ಲ. ಹೆಚ್ಚುವರಿ ಹಣವನ್ನು ಕೇಳುತ್ತಾರೆ ಎಂದು ಪ್ರಯಾಣಿಕರು ದೂರಿದ್ದಾರೆ. ದರ ಏರಿಕೆಯು ಹಗಲು ದರೋಡೆಗೆ ಸಮಾನವಾಗಿದೆ ಎಂದು ಕೆಲವರು ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿವೆ 3.6 ಲಕ್ಷ ಆಟೋಗಳುನಗರದಲ್ಲಿ ಸುಮಾರು 3.6 ಲಕ್ಷ ಆಟೋರಿಕ್ಷಾಗಳಿವೆ. ಅವುಗಳಲ್ಲಿ ಕೆಲವೇ ಕೆಲವು ಮೀಟರ್ ಬಳಸಿ ಚಲಿಸುತ್ತವೆ. ಹೆಚ್ಚಿನ ಚಾಲಕರು ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯುತ್ತಾರೆ. ಅಥವಾ ಆ್ಯಪ್ ಆಧಾರಿತ ಸೇವೆಗಳಲ್ಲಿ ಹೆಚ್ಚಿನ ಟಿಪ್ಸ್ ನೀಡುವವರೆಗೆ ಕಾಯುತ್ತಾರೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಬೈಕ್ ಟ್ಯಾಕ್ಸಿ ನಿಷೇಧದ ಬಳಿಕ ಮತ್ತಷ್ಟು ಹೆಚ್ಚು ದರ ಕೇಳುವ ಚಾಲಕರು”ದೊಡ್ಡಕಲ್ಲ ಸಂದ್ರ ಮೆಟ್ರೋ ನಿಲ್ದಾಣದಿಂದ ಉತ್ತರಳ್ಳಿಯಲ್ಲಿರುವ ನನ್ನ ಮನೆಗೆ ಆಟೋದಲ್ಲಿ ಹೋಗುತ್ತೇನೆ. ಆಟೋಗಳು ಎಲ್ಲರ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನನ್ನ ಮಕ್ಕಳು ಸಹ ಆಟೋ ದರಗಳು ತುಂಬಾ ದುಬಾರಿಯಾಗಿವೆ ಎಂದು ಹೇಳುತ್ತಾರೆ. ಬೈಕ್ ಟ್ಯಾಕ್ಸಿ ನಿಷೇಧದ ನಂತರ ದರಗಳು ಮತ್ತಷ್ಟು ಹೆಚ್ಚಾಗಿವೆ. ಸಾಮಾನ್ಯವಾಗಿ 60 ರೂ. ಆಗುತ್ತಿದ್ದ ದರ ಈಗ 80 ರೂ. ಆಗಿದೆ. ಆಟೋ ಚಾಲಕರು ಬದುಕಲು ಹಣ ಸಂಪಾದಿಸಬೇಕು ಎಂದು ನನಗೆ ಅರ್ಥವಾಗುತ್ತದೆ. ಆದರೆ ಇದು ಪ್ರಯಾಣಿಕರಿಗೆ ಅನ್ಯಾಯ ” ಎಂದು ಗೃಹಿಣಿಯೊಬ್ಬರು ಬೇಸರ ಹೊರ ಹಾಕಿದ್ದಾರೆ.
ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ನ ರಾಜ್ಯ ಅಧ್ಯಕ್ಷ ಎನ್.ಜಿ. ಸಂತೋಷ್ ಕುಮಾರ್ ಮಾತನಾಡಿ, “ಹೆಚ್ಚಿನ ದರಗಳ ಕಾರಣದಿಂದ ಜನರು ಈಗಾಗಲೇ ಆಟೋಗಳನ್ನು ಬಳಸಲು ಇಷ್ಟಪಡುವುದಿಲ್ಲ. ಬೆಂಗಳೂರಿನಲ್ಲಿ ಆಟೋ ಚಾಲಕರ ಬಗ್ಗೆ ಸಾರ್ವಜನಿಕರಿಗೆ ಈಗಾಗಲೇ ನಕಾರಾತ್ಮಕ ಅಭಿಪ್ರಾಯವಿದೆ. ಈ ದರ ಏರಿಕೆಯು ಅವರನ್ನು ಮತ್ತಷ್ಟು ಆಟೋಗಳಿಂದ ದೂರ ಉಳಿಸುತ್ತದೆ. ಇದು ಯಾವುದೇ ಆ್ಯಪ್ ಆಧಾರಿತ ಸೇವೆಗಳ ಅಡಿಯಲ್ಲಿ ಕೆಲಸ ಮಾಡದ ಆಟೋ ಚಾಲಕರಿಗೆ ತೊಂದರೆಯುಂಟು ಮಾಡುತ್ತದೆ ” ಎಂದು ಹೇಳಿದ್ದಾರೆ.