9 ವರ್ಷಗಳ ಕಾಲ ಪ್ರೀತಿಸಿ ಆದ ಮದುವೆ ಎರಡೇ ತಿಂಗಳಿಗೆ ಕೊಲೆಯಲ್ಲಿ ಅಂತ್ಯ: ಪತ್ನಿ ಬಂಧನ…!
ಬರೇಲಿ: ಒಂಬತ್ತು ವರ್ಷಗಳ ದೀರ್ಘಕಾಲದ ಪ್ರೇಮ ಸಂಬಂಧವು ನಂತರ ಹಿರಿಯರ ಸಮ್ಮತಿಯೊಂದಿಗೆ ನಡೆದ ಅದ್ಧೂರಿ ವಿವಾಹ ನಡೆದ ಕೇವಲ ಎರಡೇ ತಿಂಗಳಲ್ಲಿ ರಕ್ತಸಿಕ್ತ ಅಂತ್ಯ ಕಂಡಿದೆ. ಆನ್ಲೈನ್ ಜೂಜಿನ ಗೀಳು ಮತ್ತು ಹಣದ ವಿಚಾರವಾಗಿ ನಡೆದ ಜಗಳದಲ್ಲಿ, ಒಂಬತ್ತು ವರ್ಷಗಳ ದೀರ್ಘಕಾಲ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯೇ ತನ್ನ ಹೆತ್ತವರ ಜೊತೆಗೂಡಿ ಪತಿಯನ್ನು ಉಸಿರುಗಟ್ಟಿಸಿ ಕೊಂದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಬೆಳಕಿಗೆ ಬಂದಿದೆ.
ಇಟಾವಾ ಜಿಲ್ಲೆಯ ಭೌಪುರ ಗ್ರಾಮದ 33 ವರ್ಷದ ಜಿತೇಂದ್ರ ಕುಮಾರ ಯಾದವ್ ಮತ್ತು ಜ್ಯೋತಿ ಎಂಬವರು ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಪರಿಚಿತರಾಗಿದ್ದ ಇವರು, ಕಳೆದ ವರ್ಷ ನವೆಂಬರ್ 25 ರಂದು ವಿವಾಹವಾಗಿದ್ದರು. ಜಿತೇಂದ್ರ ಅವರು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ (IVRI) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು, ಜ್ಯೋತಿ ಸಾರಿಗೆ ಸಂಸ್ಥೆಯಲ್ಲಿ ಬಸ್ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದಳು.
ಮದುವೆಯಾದ ಕೆಲವೇ ವಾರಗಳಲ್ಲಿ ದಂಪತಿ ನಡುವೆ ಆರ್ಥಿಕ ವಿಚಾರವಾಗಿ ಕಲಹ ಶುರುವಾಗಿತ್ತು. ಜಿತೇಂದ್ರ ಜ್ಯೋತಿಯ ಬ್ಯಾಂಕ್ ಖಾತೆಯಿಂದ 20,000 ರೂಪಾಯಿಗಳನ್ನು ಡ್ರಾ ಮಾಡಿ ತೆಗೆದುಕೊಂಡು ಆನ್ಲೈನ್ ಜೂಜಾಡಿ ಸೋತಿದ್ದರು ಎನ್ನಲಾಗಿದೆ.
ಜನವರಿ 26 ರಂದು ಈ ವಿಷಯವಾಗಿ ದಂಪತಿ ನಡುವೆ ವಾಗ್ವಾದ ತಾರಕಕ್ಕೇರಿತ್ತು. ಕೋಪಗೊಂಡ ಜ್ಯೋತಿ ತನ್ನ ತಂದೆ, ತಾಯಿ ಮತ್ತು ಸಹೋದರನನ್ನು ಮನೆಗೆ ಕರೆಸಿಕೊಂಡಿದ್ದಾಳೆ.
ಆತ್ಮಹತ್ಯೆಯ ನಾಟಕವಾಡಿದ ಕುಟುಂಬ:
ಪೊಲೀಸ್ ತನಿಖೆಯ ಪ್ರಕಾರ, ಜ್ಯೋತಿಯ ಪೋಷಕರು ಮತ್ತು ಸಹೋದರ ಜಿತೇಂದ್ರ ಅವರ ಕೈಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಈ ವೇಳೆ ಜ್ಯೋತಿ ತನ್ನ ಪತಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಇದು ಆತ್ಮಹತ್ಯೆ ಎಂದು ಬಿಂಬಿಸಲು, ಶವವನ್ನು ಮಫ್ಲರ್ ಸಹಾಯದಿಂದ ಕಿಟಕಿ ಗ್ರಿಲ್ಗೆ ನೇತುಹಾಕಿ ನಾಟಕವಾಡಿದ್ದಾರೆ.
“ಆರಂಭದಲ್ಲಿ ಇದೊಂದು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ‘ಉಸಿರುಗಟ್ಟಿಸಿ ಕೊಲೆ’ (Strangulation) ಮಾಡಿರುವುದು ದೃಢಪಟ್ಟಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.
ಜಿತೇಂದ್ರನ ಸಹೋದರ ಅಜಯಕುಮಾರ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಾಗ ಅಸಲಿ ಸತ್ಯ ಹೊರಬಂದಿದೆ. ಜ್ಯೋತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಪೊಲೀಸರು ಈಕೆಯನ್ನು ಹಾಗೂ ಈಕೆಯ ತಂದೆ ಕಾಲಿಚರಣ ಮತ್ತು ತಾಯಿ ಚಮೇಲಿಯನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಜ್ಯೋತಿಯ ಸಹೋದರ ದೀಪಕಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಒಂಬತ್ತು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವನೇ ಇಂದು ಹೆಂಡತಿಯ ಕೈಯಲ್ಲೇ ಹತನಾದ ಘಟನೆ ಸ್ಥಳೀಯವಾಗಿ ಭಾರಿ ಆಘಾತ ಮೂಡಿಸಿದೆ.


