ಬೆಂಗಳೂರು: ಮಹಿಳೆಯ ಮೃತದೇಹವನ್ನು ಚೀಲದೊಳಗೆ ತುಂಬಿಸಿ, ಕುತ್ತಿಗೆಗೆ ಕಾಲುಗಳನ್ನು ಕಟ್ಟಿ, ಕಸದ ಲಾರಿಯಲ್ಲಿ ಎಸೆದ ಘಟನೆ ಬೆಂಗಳೂರಿನಲ್ಲಿ ಶನಿವಾರ ತಡರಾತ್ರಿ ಬೆಳಕಿಗೆ ಬಂದಿದೆ.
ಚನ್ನಮ್ಮನಕೆರೆ ಸ್ಕೇಟಿಂಗ್ ಮೈದಾನದ ಬಳಿಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಸದ ಲಾರಿಯ ಹಿಂಭಾಗದ ಲಿಫ್ಟ್ನಲ್ಲಿ ಶವ ಪತ್ತೆಯಾಗಿದೆ. ಮಹಿಳೆ ಸುಮಾರು 25-30 ವರ್ಷ ವಯಸ್ಸಿನವರು ಎಂದು ನಂಬಲಾಗಿದೆ. ಆಕೆಯ ಗುರುತು ಇನ್ನೂ ತಿಳಿದುಬಂದಿಲ್ಲ.
ಶನಿವಾರ ರಾತ್ರಿ ಸ್ಥಳೀಯ ವ್ಯಕ್ತಿಯೊಬ್ಬರು ಕಸ ಹಾಕಲು ಬಂದಿದ್ದರು. ಈ ವೇಳೆ ಯುವತಿಯ ತಲೆ ಕೂದಲು ಕಾಣಿಸಿದೆ. ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
“ಶನಿವಾರ ರಾತ್ರಿ, ಕಸ ಸಂಗ್ರಹಿಸುವ ಲಾರಿಯೊಳಗೆ ಮೃತದೇಹ ಬಿದ್ದಿರುವುದು ನಮಗೆ ಕಂಡುಬಂದಿದೆ. ಮಧ್ಯರಾತ್ರಿ ಯಾರೋ ಮಹಿಳೆಯ ಶವವನ್ನು ಚೀಲದಲ್ಲಿ ತುಂಬಿಸಿ ವಾಹನಕ್ಕೆ ಎಸೆದಿದ್ದರು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಆಕೆಯ ಕಾಲುಗಳನ್ನು ಕುತ್ತಿಗೆಗೆ ಕಟ್ಟಿ, ದೇಹವನ್ನು ಚೀಲಕ್ಕೆ ತುಂಬಿಸಿ ತಂದು ಕಸದ ಲಾರಿಯಲ್ಲಿ ಎಸೆಯಲಾಗಿದೆ. ಬಿಬಿಎಂಪಿ ಕಸದ ಲಾರಿ ಚಾಲಕ ಇದನ್ನು ಗಮನಿಸಿ ನಮಗೆ ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ, ನಾವು ಕೊಲೆ ಪ್ರಕರಣ ದಾಖಲಿಸಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ” ಎಂದು ಅಧಿಕಾರಿ ಹೇಳಿದರು.
ಕೊಲೆಯಾಗುವ ಮೊದಲು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆ ಸೂಚಿಸುತ್ತದೆ. ಪೊಲೀಸರ ಪ್ರಕಾರ, ಮೃತದೇಹವನ್ನು ಎಸೆಯಲು ಮಧ್ಯರಾತ್ರಿ 12:30 ರಿಂದ 12:40 ರ ನಡುವೆ ಅಪರಿಚಿತ ವ್ಯಕ್ತಿಗಳು ವಾಹನದಲ್ಲಿ ಬಂದಿದ್ದರು. ತನಿಖೆಯ ಭಾಗವಾಗಿ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.