ಅಗಸಗಿ PKPS ಅನ್ನಭಾಗ್ಯ ಅಕ್ಕಿ ಲೂಟಿಕೋರನ ಬಣ್ಣ ಬಯಲು ಮಾಡಿದ ಆಹಾರ ಅಧಿಕಾರಿ ಉಸ್ತಾದ & ಟೀಂ..!
ಅಕ್ಕಿ ಸಿಗದ 30ಕ್ಕೂ ಹೆಚ್ಚು ಪಡಿತರ ಕುಟುಂಬದವರಿಂದ ದೂರು ದಾಖಲು..!
ಎರಡು ಊರಿನಲ್ಲಿ ಲಪಡಾ ಮಾಡಿ ಸಿಕ್ಕಿಬಿದ್ದ ಲೂಟಿಕೋರ..?
ಎಲ್ಲರ ಚಿತ್ತ ಆಹಾರ ಇಲಾಖೆಯತ್ತ; ಕ್ರಮ ಕೈಗೊಳ್ತಾರಾ ಹಿರಿಯ ಅಧಿಕಾರಿಗಳು..?
ಬೆಳಗಾವಿ : ಅಗಸಗಿ ಗ್ರಾಮದ PKPS ಸದಸ್ಯನೊಬ್ಬ ಜನರಿಗೆ ಸರಿಯಾಗಿ ಪಡಿತರ ವಿತರಿಸದೇ ಹಗಲು ಲೂಟಿ ಮಾಡುತ್ತಿದ್ದ ಬಗ್ಗೆ ಜನಜೀವಾಳ ದಿನಪತ್ರಿಕೆಯಲ್ಲಿ ನಿನ್ನೆ ವರದಿ ಮಾಡಿದ ಬೇನ್ನಲ್ಲೇ ಬೆಳಗಾವಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ಆಗ ಬಡವರಿಗಾಗಿ ಸರಕಾರ ಕೊಟ್ಟ ಸಾವಿರಾರು ಕೆಜಿ ಅನ್ನಭಾಗ್ಯ ಅಕ್ಕಿಯನ್ನು ಲೂಟಿಕೋರ ಕೊಳ್ಳೆ ಹೊಡೆದಿರುವುದು ಸಾಬಿತಾಗಿದೆ.
ಬೆಳಗಾವಿ ತಾಲೂಕು ಆಹಾರ ಉಪ ತಹಶಿಲ್ದಾರ ಎಂ ಎನ್ ಉಸ್ತಾದ, ತಾಲೂಕು ಆಹಾರ ನಿರೀಕ್ಷಕರಾದ ಸುರೇಶ ಉಪ್ಪಾರ , ಸತೀಶ ಬೆನಗಿ ಇಂದು ಬೆಳಗ್ಗೆ ದಿಢೀರನೆ ಅಗಸಗಿ PKPS ಗೆ ಬಂದು ಪರಿಶೀಲನೆಗಿಳಿದಾಗ ಸ್ವಯಂ ಪ್ರೇರಿತರಾಗಿ 30 ಕ್ಕೂ ಹೆಚ್ಚು ಪಡಿತ ಕುಟುಂಬದವರು ಸ್ಥಳಕ್ಕೆ ಬಂದು ತಮ್ಮ ಹೆಬ್ಬೆರಳು ಪಡೆದು ತಿಂಗಳ ಸಮೀಪಿಸಿದರೂ ಇನ್ನೂ ಕಳೆದ ತಿಂಗಳಿನ ಪಡಿತರ ನೀಡಿಲ್ಲ ಎಂದು ಲಿಖಿತ ದೂರು ನೀಡಿದರು.
ದೂರಿನನ್ವಯ ತನಿಖೆಗೆ ಮುಂದಾದಾಗ ಉಗ್ರಾಣ ಖಾಲಿಯಾಗಿದ್ದು ಕಂಡು ಬಂದಿತು. ಇದಕ್ಕೆ ತೇಪೆ ಹಚ್ಚಲು ಲೂಟಿಕೋರ ಮಂದಾಗಿ ಇದೇ ಪಡಿತರ ಅಂಗಡಿಗೆ ಕೂಡಿರುವ ಪಕ್ಕದ ಚಲವೇನಟ್ಟಿ ಗ್ರಾಮದಲ್ಲಿ ಉಳಿದ ಪಡಿತರ ಇದೆ ಎಂದು ಸಮಾಜಾಯಿಸಿ ಮಾಡಲಾರಂಭಿಸಿದ, ಇದಕ್ಕೆ ಮನಿಯದ DT ಉಸ್ತಾದ ತಕ್ಷಣ ಆ ಗ್ರಾಮಕ್ಕೆ ಹೋಗಿ ಪರಿಶೀಲನೆ ನಡೆಸಿದರು.
ಚಲವೇನಟ್ಟಿಯಲ್ಲಿ ಸಿಕ್ಕಿದ್ದು 4 ಕ್ವಿಂಟಲ್ ಅಕ್ಕಿ..!
ದೂರು ಕೊಟ್ಟಿರುವ 30 ಹಾಗೂ ದೂರು ನೀಡದ 15 ಕ್ಕೂ ಹೆಚ್ಚು ಪಡಿತರ ಕುಟುಂಬದವರ ಪ್ರಕಾರ ಸರಿಸುಮಾರು ಅಲ್ಲಿ 25 ಕ್ವಿಂಟಲ್ (2500 ಕೆಜಿ)ಗೂ ಹೆಚ್ಚು ಅನ್ನಭಾಗ್ಯ ಅಕ್ಕಿ ಇರಬೇಕಿತ್ತು. ಆದರೆ ಅಲ್ಲಿ ಕೇವಲ 400 ಕೆಜಿ ಅಕ್ಕಿ ಸಿಕ್ಕಿದೆ.
ಇದರಿಂದಾಗಿ ಪಡಿತರ ಸಿಗದೆ ಹತಾಶರಾಗಿದ್ದ ಜನ ಮತ್ತಷ್ಟು ರೊಚ್ಚಿಗೆದ್ದರು. ಈ ಸಂದರ್ಭದಲ್ಲಿ ಹಾಲಿ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಕಲಗೌಡ ಪಾಟೀಲ ಹಾಗೂ ಅಪ್ಪಯ್ಯಗೌಡ ಪಾಟೀಲ ಜನತೆಗೆ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ಎಲ್ಲಿಗೆ ಹೋಯ್ತು 21ಕ್ವಿಂಟಾಲ್ ಕೆಜಿ ಅನ್ನಭಾಗ್ಯ..?
ಅಹಾರ ಇಲಾಖೆ ಅಂಕಿ ಅಂಶಗಳ ಪ್ರಕಾರ 2500 ಕ್ಕೂ ಹೆಚ್ಚು ಕೆಜಿ ಅನ್ನಭಾಗ್ಯ ಉಗ್ರಾಣದಲ್ಲಿರಬೇಕಿತ್ತು. ಆದರೆ ಉಳಿದ 2100 ಕೆಜಿ ಅಕ್ಕಿ ಎಲ್ಲಿಗೆ ಹೊಯ್ತು ಎಂಬ ಯಕ್ಷಪ್ರಶ್ನೆ ಉದ್ಭವಿಸಿದೆ. ಮೂಲಗಳ ಹಾಗೂ ಖಚಿತ ಮಾಹಿತಿ ಪ್ರಕಾರ ಆ ಲೂಟಿಕೋರ ಅನ್ನಭಾಗ್ಯದ ಸಾವಿರಾರು ಕೆಜಿ ಅಕ್ಕಿಯನ್ನು ಬೆಳಗಾವಿ ಉಗ್ರಾಣದಲ್ಲೇ ಮಾರಿದ್ದಾಗಿ ಹೇಳಲಾಗುತ್ತದೆ.
ಎಲ್ಲರ ಚಿತ್ತ ಆಹಾರ ಇಲಾಖೆಯತ್ತ..!
ಹಾಡುಹಗಲೇ ಬಡವರ ಅನ್ನಭಾಗ್ಯಕ್ಕೆ ಲೂಟಿಕೋರ ಸದಸ್ಯನೊಬ್ಬ ಕಣ್ಣು ಹಾಕಿ ಸಾವಿರಾರು ಕೆಜಿ ಅಕ್ಕಿ ಲೂಟಿಮಾಡಿರುವುದು ಸಾಬೀತಾಗಿದ್ದು, ಇದರ ವಿರುದ್ಧ ಆಹಾರ ಅಧಿಕಾರಿಗಳು ಹಾಗೂ ಬೆಳಗಾವಿ ಡಿಸಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದೂ ನೋಡಬೇಕು.
ಒಟ್ಟಿನಲ್ಲಿ 5 ತಿಂಗಳ ಹಿಂದಷ್ಟೇ ಅಧಿಕಾರಕ್ಕೆ ಬಂದ ಹೊಸ ಕಮೀಟಿಯವರಿಗೆ ಆ ಲೂಟಿಕೋರನಿಂದಾಗಿ ಗ್ರಾಮದ ಜನರಿಂದ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿರುವುದಂತೂ ನಿಜ. ಇನ್ನಾದರೂ ಊರು ಬಿಟ್ಟಿರುವ PKPS ಅಧ್ಯಕ್ಷ ಗ್ರಾಮಕ್ಕೆ ಬಂದು ನೆಲೆಸಿ ಬಡವರಿಗೆ, ರೈತರಿಗೆ ನ್ಯಾಯ ಒದಗಿಸಲಿ ಎಂದು ಜನರ ಬಯಕೆ.