ಬೆಳಗಾವಿ :ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಅತ್ಯಂತ ಬರ್ಬರ ರೀತಿಯಲ್ಲಿ ಈ ಕೊಲೆ ಮಾಡಲಾಗಿದೆ.
ಕೇವಲ 500 ರೂಪಾಯಿಗಾಗಿ ಇಬ್ಬರು ತಮ್ಮ ಸ್ನೇಹಿತನನ್ನು ಹೊಡೆದು ಹತ್ಯೆ ಮಾಡಿದ ಘಟನೆ ಯಳ್ಳೂರು ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.
ಯಳ್ಳೂರು ಪ್ರತಾಪ್ ಗಲ್ಲಿಯ ಮಿಥುನ್ ಮಹದೇವ್ ಮತ್ತು ಮನೋಜ್ ಇಂಗಳೇ ತಮ್ಮದೇ ಗಲ್ಲಿಯಲ್ಲಿದ್ದ ಹುಸೇನ್ ತಾಸೆವಾಲೆ ಎಂಬವರನ್ನು ಹೊಡೆದು ಒದ್ದು ತಲೆಯನ್ನು ಗೋಡೆಗೆ ಅಪ್ಪಳಿಸಿ ನಂತರ ಅವರು ಪ್ರಜ್ಞೆ ಕಳೆದುಕೊಂಡು ಬಿದ್ದಾಗ ಪಲಾಯನಗೈದಿದ್ದಾರೆ. ನೆರೆಯವರ ಸಹಾಯದಿಂದ ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಸೋಮವಾರ ಮುಂಜಾನೆ ಹುಸೇನ್ ಅಸುನೀಗಿದರು. ಪಲಾಯನವಾಗಿದ್ದ ಆರೋಪಿಗಳನ್ನು ವಡಗಾವಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ ಬೋರಸೆ, 45-ವರುಷದ ಹುಸೇನ್ ಸ್ಕ್ರಾಪ್ ವ್ಯಾಪಾರ ಮಾಡುತ್ತಿದ್ದ. ಇವರಿಗೆ ಮಿಥುನ್ 500 ರೂಪಾಯಿ ಕೊಟ್ಟು ಕಬ್ಬಿಣದ ಸರಳು ತರಲು ಹೇಳಿದ್ದ. ಹುಸೇನ್ ಸಮಯಕ್ಕೆ ಸರಿಯಾಗಿ ಕಬ್ಬಿನ ಕೊಟ್ಟಿರಲಿಲ್ಲ ಅಲ್ಲದೇ ಹಣವನ್ನೂ ಹಿಂದಿರುಗಿಸಿರಲಿಲ್ಲ. ಕೇಳಿದರೆ ಇಂದು, ನಾಳೆ ಎಂದು ಮುಂದಕ್ಕೆ ಹಾಕುತ್ತಿದ್ದ. ಇದರಿಂದ ಕುಪಿತಗೊಂಡ ಮಿಥುನ್, ಮನೋಜ್ ಜೊತೆ ಸೇರಿ ಭಾನುವಾರ ರಾತ್ರಿ 11 ಗಂಟೆ ಸುಮಾರು ಹುಸೇನ್ ಮನೆಗೆ ಹೋಗಿ ವಾದ ಮಾಡಿದ್ದಾರೆ, ಬೆಳಿಗ್ಗೆಯಾದರೂ ಪರವಾಗಿಲ್ಲ ಹಣ ಪಡೆದೇ ಹೋಗುವುದು ಎಂದು ಹೇಳಿದ್ದಾರೆ. ವಾದದ ನಡುವೆ ಹೈಸೆನ್ ಅವರನ್ನು ಹೊಡೆದಿದ್ದಾರೆ, ಕೂದಲು ಹಿಡಿದು ತಲೆಯನ್ನು ಗೋಡೆಗೆ ಅಪ್ಪಳಿಸಿದ್ದಾರೆ, ನೆಲಕ್ಕೆ ಬೀಳಲು ಒದ್ದಿದ್ದಾರೆ. “ದೇಹದ ಒಳಗನ ಅವಯವಗಳಿಗೆ ಹೆಚ್ಚು ಪೆಟ್ಟು ಆಗಿದ್ದರಿಂದ ಹುಸೇನ್ ಅಸುನಿಗಿದ್ದಾರೆ, ಆರೋಪಿಗಳನ್ನು ಬಂಧಿಸಿ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಸೆಕ್ಷನ್ 101 ಮತ್ತು 103 ರನ್ವಯ ಪ್ರಕರಣ ದಾಖಲಿಸಲಾಗಿದೆ,” ಎಂದು ತಿಳಿಸಿದರು.