ಗುರುಗ್ರಾಮ: ಬ್ಯಾಂಕ್ ಎಟಿಎಂನಿಂದ ಹಣ ತೆಗೆಯುವಷ್ಟೇ ಈಗ ಗ್ಯಾಸ್ ಸಿಲಿಂಡರ್ ಸಹ ಪಡೆಯುವುದು ಸುಲಭವಾಗಿದೆ ! ಯಾಕೆಂದರೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಹರಿಯಾಣದ ಗುರುಗ್ರಾಮದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಭಾರತದ ಮೊಟ್ಟಮೊದಲ ‘ಎಲ್ಪಿಜಿ ಎಟಿಎಂ’ ಅನ್ನು ಪ್ರಾರಂಭಿಸಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಭಾರತದ ಹಲವು ಭಾಗಗಳಲ್ಲಿ ಅಡುಗೆ ಅನಿಲ ಪೂರೈಕೆ ಕಷ್ಟಕರವಾಗಬಹುದಾದ ಸಮಯದಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ. ಸೋಹ್ನಾದ ಸೆಕ್ಟರ್ 33ರ ಸೆಂಟ್ರಲ್ ಪಾರ್ಕ್ ಫ್ಲವರ್ ವ್ಯಾಲಿಯಲ್ಲಿ ಸ್ಥಾಪಿಸಲಾದ ಈ ʼಎಲ್ಪಿಜಿ ಎಟಿಎಂʼ ನಿವಾಸಿಗಳಿಗೆ ದೊಡ್ಡ ಸಮಾಧಾನ ತಂದಿದ್ದು, ಕೇವಲ 2 ರಿಂದ 3 ನಿಮಿಷಗಳಲ್ಲಿ ಮರು ತುಂಬಿಸಿದ (Refilled) ಸಿಲಿಂಡರ್ ಅನ್ನು ನೀಡುತ್ತದೆ.
ಇದು ಏಕೆ ಮಹತ್ವದ್ದು..?
ಭಾರತದಲ್ಲಿ ಕುಟುಂಬಗಳು ಅಡುಗೆಗಾಗಿ ಎಲ್ಪಿಜಿಯನ್ನು ಹೆಚ್ಚು ಅವಲಂಬಿಸಿವೆ. ರಾಯಿಟರ್ಸ್ ವರದಿಯ ಪ್ರಕಾರ, ಕಳೆದ ವರ್ಷ ಭಾರತವು ಸುಮಾರು 33.15 ಮಿಲಿಯನ್ ಮೆಟ್ರಿಕ್ ಟನ್ ಅಡುಗೆ ಅನಿಲವನ್ನು ಬಳಸಿದೆ. ನಮ್ಮ ಬೇಡಿಕೆಯನ್ನು ಪೂರೈಸಲು ನಾವು ಸುಮಾರು 60% ರಷ್ಟು ಅಡುಗೆ ಅನಿಲವನ್ನು ಆಮದು ಮಾಡಿಕೊಳ್ಳುತ್ತೇವೆ ಮತ್ತು ಆ ಆಮದುಗಳಲ್ಲಿ ಸುಮಾರು 90% ಮಧ್ಯಪ್ರಾಚ್ಯದಿಂದ ಬರುತ್ತದೆ. ಪ್ರಸ್ತುತ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಅಡುಗೆ ಅನಿಲದ ಪೂರೈಕೆಯ ಬಗ್ಗೆ ಆತಂಕವನ್ನು ಮೂಡಿಸಿದೆ.
ಈ ಎಟಿಎಂ ಹೇಗೆ ಕೆಲಸ ಮಾಡುತ್ತದೆ?
ಸೋಹ್ನಾದಲ್ಲಿರುವ ಈ ಯಂತ್ರವು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಮಾನವ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸುತ್ತದೆ. ಇದು ಹಲವಾರು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಹಳೆಯ ಭಾರವಾದ ಕಬ್ಬಿಣದ ಸಿಲಿಂಡರ್ಗಳ ಬದಲಿಗೆ, ಇದು ಹಗುರವಾದ ಮತ್ತು ಸ್ವಚ್ಛವಾದ ‘ಕಾಂಪೋಸಿಟ್ ಸಿಲಿಂಡರ್ಗಳನ್ನು’ (Composite Cylinders) ಬಳಸುತ್ತದೆ. ಅನಿಲ ತುಂಬಿದ ಸಾಂಪ್ರದಾಯಿಕ ಸಿಲಿಂಡರ್ ಸುಮಾರು 31 ಕೆಜಿ ತೂಗುತ್ತದೆ, ಆದರೆ ಈ ಹೊಸ ಸಿಲಿಂಡರ್ಗಳ ತೂಕ ಕೇವಲ 15 ಕೆಜಿ ಮಾತ್ರ. ಇವು ಪಾರದರ್ಶಕವಾಗಿದ್ದು, ಒಳಗಡೆ ಎಷ್ಟು ಅನಿಲ ಬಾಕಿ ಇದೆ ಎಂಬುದನ್ನು ನೀವು ನೋಡಬಹುದು. ಜೊತೆಗೆ ಇವು ಹೆಚ್ಚು ಸುರಕ್ಷಿತ ಎಂದು ಹೇಳಲಾಗಿದೆ.
ಇದನ್ನು ಬಳಸಲು, ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಅದನ್ನು OTP ಮೂಲಕ ಪರಿಶೀಲಿಸಬೇಕು (Verify). ಅದರ ನಂತರ, ಖಾಲಿ ಸಿಲಿಂಡರ್ನಲ್ಲಿರುವ ಕ್ಯೂಆರ್ (QR) ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು ಮತ್ತು ಯುಪಿಐ (UPI) ಅಥವಾ ಡೆಬಿಟ್ ಕಾರ್ಡ್ ಬಳಸಿ ಡಿಜಿಟಲ್ ಪಾವತಿ ಮಾಡಬೇಕು. ಯಂತ್ರವು ತಕ್ಷಣವೇ ಭರ್ತಿಯಾದ ಸಿಲಿಂಡರ್ ಅನ್ನು ಹೊರಬಿಡುತ್ತದೆ ಮತ್ತು ಖಾಲಿ ಸಿಲಿಂಡರ್ ಅನ್ನು ತನ್ನೊಳಗೆ ಸಂಗ್ರಹಿಸುತ್ತದೆ.
ಮರುಪೂರಣ ಮಾಡುವುದು ಹೇಗೆ?
ಮಾರ್ಚ್ 6 ರಂದು ಸ್ಥಾಪಿಸಲಾದ ಈ ಎಟಿಎಂ ಏಕಕಾಲದಲ್ಲಿ 10 ಸಿಲಿಂಡರ್ಗಳನ್ನು ಇಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಸ್ಟಾಕ್ ಕೇವಲ ಎರಡು ಸಿಲಿಂಡರ್ಗಳಿಗೆ ಇಳಿದಾಗ, ಅದು ಸ್ವಯಂಚಾಲಿತವಾಗಿ ಹತ್ತಿರದ ಗ್ಯಾಸ್ ಏಜೆನ್ಸಿಗೆ ಅಲರ್ಟ್ ಸಂದೇಶವನ್ನು ಕಳುಹಿಸುತ್ತದೆ. ನಂತರ ಏಜೆನ್ಸಿಯ ಸಿಬ್ಬಂದಿ ಬಂದು ಯಂತ್ರಕ್ಕೆ ಸಿಲಿಂಡರ್ಗಳನ್ನು ತುಂಬುತ್ತಾರೆ. ಈ ಸೌಲಭ್ಯವು ಹೊಸದಾಗಿರುವುದರಿಂದ ಇನ್ನೂ ಹೆಚ್ಚಿನ ಜಾಗೃತಿ ಮೂಡಿಲ್ಲ, ಹಾಗಾಗಿ ಇದುವರೆಗೆ ಕೇವಲ ನಾಲ್ಕು ಸಿಲಿಂಡರ್ಗಳನ್ನು ಮಾತ್ರ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾಂಪೋಸಿಟ್ ಸಿಲಿಂಡರ್ಗಳು ತುಕ್ಕು ಹಿಡಿಯುವುದಿಲ್ಲ, ಸಾಗಿಸಲು ಸುಲಭ ಮತ್ತು ಹೆಚ್ಚು ಸುರಕ್ಷಿತವಾಗಿವೆ. ಗ್ರಾಹಕರು ತಮ್ಮ ಹಳೆಯ ಕಬ್ಬಿಣದ ಸಿಲಿಂಡರ್ಗಳನ್ನು ಈ ಹೊಸ ಸಿಲಿಂಡರ್ಗಳಿಗೆ ಬದಲಾಯಿಸಿಕೊಳ್ಳುವ ಆಯ್ಕೆಯನ್ನೂ ಹೊಂದಿದ್ದಾರೆ. ಜನರಿಗೆ ಇದರಿಂದ ಇನ್ನು ಮುಂದೆ ಡೆಲಿವರಿ ಬಾಯ್ಗಾಗಿ ಕಾಯುವ ಅಥವಾ ನಿಗದಿತ ವಿತರಣಾ ಸಮಯಕ್ಕೆ ಕಟ್ಟುಬೀಳುವ ತೊಂದರೆ ಇರುವುದಿಲ್ಲ.


