ಬೆಳಗಾವಿ : ನಿರಂತರವಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡುತ್ತಿದ್ದ ಮೂವರನ್ನು ಕೊನೆಗೂ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಶಹಾಪುರದ ಸರ್ಫರಾಜ ಶಬ್ಬೀರ ಅಹ್ಮದ್ ಶೇಖ್, ಟಿಳಕವಾಡಿ ಅಯೋಧ್ಯಾ ನಗರದ ವಿನಾಯಕ ಪ್ರಕಾಶ ಕೊಲ್ಲಾಪುರಿ ಮತ್ತು ಶಹಾಪುರ ಹೊಸೂರ ಬಸವನಗಲ್ಲಿಯ ಸಾಗರ ಪಾಂಡುರಂಗ ಸಾಲಗುಡೆ ಬಂಧಿತರು.
ಇವರು ಪದೇಪದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿ ಸಾರ್ವಜನಿಕ ನೆಮ್ಮದಿಯನ್ನು ಹಾಳು ಮಾಡುತ್ತಿದ್ದ ಮೇಲೆ ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಫರಾಜ್ ವಿವಿಧ ಪೊಲೀಸ್ ಠಾಣೆಗಳಲ್ಲಿ ಇಸ್ಪೀಟ್ ಆಟ ಆಡಿಸುವುದು ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿ ಒಟ್ಟು 16 ಪ್ರಕರಣ ದಾಖಲಾಗಿವೆ.
ವಿನಾಯಕ ಮೇಲೆ ಗಾಂಜಾ ಮಾರಾಟ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿ ಐದು ಪ್ರಕರಣ ದಾಖಲಾಗಿದೆ. ಸಾಗರ ಮೇಲೆ ಇಸ್ಪೀಟ್ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿದ ಆರು ಪ್ರಕರಣ ದಾಖಲಾಗಿದೆ.
ಇವರನ್ನು ಬಂಧಿಸಿರುವ ಪೊಲೀಸರು ಮುಂದಿನ ಐದು ತಿಂಗಳ ಅವಧಿಗೆ ವಿಜಯಪುರ , ಕಾರವಾರ ಮತ್ತು ಯಾದಗಿರಿ ಜಿಲ್ಲೆಗಳಿಗೆ ಇವರನ್ನು ಗಡಿಪಾರು ಮಾಡಿ ಆದೇಶಿಸಿದ್ದಾರೆ.


