ಬೆಂಗಳೂರು : ಬೆಂಗಳೂರಿನ ಹಿರಿಯ ಪತ್ರಕರ್ತ
ದೊಡ್ಡಬೊಮ್ಮಯ್ಯ (63) ನಿಧನರಾಗಿದ್ದಾರೆ. ಬೆಳಗಾವಿ ವಿಧಾನ ಮಂಡಲ ಅಧಿವೇಶನ ಕರ್ತವ್ಯಕ್ಕೆ ಬಂದಿದ್ದರು. ಶನಿವಾರ (ಡಿಸೆಂಬರ್ 20) ಬೆಳಿಗ್ಗೆ ಬೆಂಗಳೂರು ಮೆಜೆಸ್ಟಿಕ್ ತಲುಪಿ, ಅಲ್ಲಿಂದ ಯಲಹಂಕದ ಬಿಎಂಟಿಸಿ ಬಸ್ ನಲ್ಲಿ ಕುಳಿತಾಗ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತ್ರಕರ್ತನ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ವಿಕ್ಟೋರಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಫಲಕಾರಿಯಾಗಲಿಲ್ಲ.
ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ದೊಡ್ಡಬೊಮಯ್ಯ ಅವರು
ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದ ದೊಡ್ಡಯ್ಯ ಮತ್ತು ಚಿಕ್ಕಮ ದಂಪತಿಯ ಪುತ್ರರು. ಅವರು ಈ ಮೊದಲು ಸಂಜೆ ವಾಣಿ ಮತ್ತು ಪ್ರಸ್ತುತ ಇಂದು ಸಂಜೆ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ ಕೆಲಸ ಮಾಡಿದ್ದರು. ಸುಮಾರು 30 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಅವರು, ಅಪಾರವಾದ ಆತ್ಮೀಯ ಬಳಗವನ್ನು ಗಳಿಸಿಕೊಂಡಿದ್ದರು.
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದ ಕಾರ್ಯಕಲಾಪಗಳ ವರದಿಗಾಗಿ ತೆರಳಿದ್ದ ಅವರು ಶನಿವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದರು. ಕೆಎಸ್ಆರ್ಟಿಸಿ ಬಸ್ನಿಂದ ಇಳಿದು, ಬಾಗಲೂರಿನಲ್ಲಿರುವ ತಮ್ಮ ಮನೆ ತಲುಪಲು ಬಿಎಂಟಿಸಿ ಬಸ್ ಹತ್ತಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತವಾಗಿದೆ. ಸಹಪ್ರಯಾಣಿಕರು ಉಪಚರಿಸಿದ ಹೊರತಾಗಿಯೂ ಬಸ್ನಲ್ಲಿಯೇ ನಿಧನ ಹೊಂದಿದ್ದಾರೆ.


