ಬೆಳಗಾವಿ : ನಗರದ ವಿಜಯನಗರ ಆತವಾಡಕರ ಲೇಔಟ್ನ ಬಾಡಿಗೆ ಮನೆಯಲ್ಲಿ ಗಂಡನೊಬ್ಬ ಹೆಂಡತಿಯನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಪತ್ನಿಯನ್ನು ಕೊಲೆಗೈದ ಪತಿಗೆ ಬೆಳಗಾವಿಯ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ.50 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಮೂಲತಃ ವಿಜಯಪುರ ಜಿಲ್ಲೆ ತಾಳಿಕೋಟಿಯ
ಪರಶುರಾಮ ಗಣಪತಿ ಪೀಸೆ(40)ಶಿಕ್ಷೆಗೊಳಗಾದ ಆರೋಪಿ.
2020 ರ ಫೆಬ್ರವರಿ 13 ರಂದು ಮಧ್ಯಾಹ್ನ 1 ರಿಂದ 1.30 ರ ಸುಮಾರಿಗೆ ಈತ ತನ್ನ ಪತ್ನಿ ಕವಿತಾ ಅವರೊಂದಿಗೆ ತನ್ನ ಸಣ್ಣ ಮಕ್ಕಳನ್ನು ಎತ್ತಿಕೊಳ್ಳುವ ವಿಚಾರದಲ್ಲಿ ತಂಟೆ ತೆಗೆದು ಅದೇ ಸಿಟ್ಟಿನಿಂದ ಅವರ ಕುತ್ತಿಗೆ ಹಿಚುಕಿ ಉಸಿರುಗಟ್ಟಿಸಿ ಕೊಲೆಗೈದಿದ್ದ. ಈ ಬಗ್ಗೆ ಕವಿತಾ ಅವರ ತಂದೆ ಕಲಬುರ್ಗಿಯ ಸುನಿಲ್ ಕುಮಾರ್ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಅಂದಿನ ಕ್ಯಾಂಪ್ ಪೊಲೀಸ್ ಠಾಣೆಯ ಪಿ ಐ ಡಿ.ಸಂತೋಷ ಕುಮಾರ್ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಬೆಳಗಾವಿಯ ಐದನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ್ ಅವರು ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರ ಸರ್ಕಾರಿ ಅಭಿಯೋಜಕ ಐ.ಎಂ.ಮಠಪತಿ ವಾದ ಮಂಡಿಸಿದ್ದರು.