ಬೆಳಗಾವಿ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನೇತೃತ್ವದ ಪ್ಯಾನೆಲ್ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ರೈತರು, ಕಾರ್ಮಿಕ ಮುಖಂಡರು, ಸಹಕಾರಿ ಹಾಗೂ ಕಾರ್ಮಿಕ ಮುಖಂಡರು ನೂರಾರು ಸಂಖ್ಯೆಯಲ್ಲಿ ಮಂಗಳವಾರ ಸಚಿವರ ಮನೆಗೆ ಆಗಮಿಸಿ ಅಭಿನಂದಿಸಿದರು.
ಬೆಳಗ್ಗೆಯಿಂದಲೇ ಆಗಮಿಸುತ್ತಿದ್ದ ಜನರು ಕಾರ್ಖಾನೆಯ ಜವಾಬ್ದಾರಿ ತೆಗೆದುಕೊಂಡಿದ್ದಕ್ಕೆ ಧನ್ಯವಾದ ಸಲ್ಲಿಸಿ, ನಿಮ್ಮ ನೇತೃತ್ವದಲ್ಲಿ ಕಾರ್ಖಾನೆಯ ಗತವೈಭವ ಮರುಕಳಿಸಲಿ ಎಂದು ಆಶಿಸಿದರು.
ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಎಲ್ಲರ ಸಹಕಾರದೊಂದಿಗೆ ಕಾರ್ಖಾನೆಯ ಪುನಶ್ಚೇತನ ಮಾಡಲಾಗುವುದು. ರೈತರು, ಕಾರ್ಮಿಕರ ಹಿತ ಕಾಪಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಸಚಿವರು ಗೃಹ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ಕಾರ್ಖಾನೆಯ ಪುನಶ್ಚೇತನ ಕುರಿತು ಚರ್ಚೆ ನಡೆಸಿದ ನೂತನ ನಿರ್ದೇಶಕರು:
ಎಂ.ಕೆ. ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾದ ಪ್ಯಾನಲ್ನ ನಿರ್ದೇಶಕರು ಮಂಗಳವಾರ ಸಭೆ ಸೇರಿ ಕಾರ್ಖಾನೆಯ ಪ್ರಸ್ತುತ ಸ್ಥಿತಿ ಮತ್ತು ಪುನಶ್ಚೇತನ ಕುರಿತು ಚರ್ಚಿಸಿದರು.
ನೂತನ ನಿರ್ದೇಶಕರೂ ಆಗಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಸಭೆ ನಡೆಯಿತು.
ಮೊದಲು ವಿಘ್ನ ವಿನಾಶಕ ಶ್ರೀ ಗಣಪತಿ ಹಾಗೂ ಈ ಭಾಗದ ಶಕ್ತಿದೇವತೆ ಶ್ರೀ ಬಂಡೆಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯಲಾಯಿತು.
ನಂತರ ಕಾರ್ಖಾನೆಯ ಎಲ್ಲ ವಿಭಾಗಗಳಿಗೆ ತೆರಳಿ ಪ್ರಸ್ತುತ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಲಾಯಿತು.
ಮುಂದಿನ ಹಂಗಾಮಿಗೆ ಸಂಬಂಧಿಸಿದಂತೆ ಸಮಗ್ರ ಸಿದ್ಧತೆಗಳ ಕುರಿತು ಪೂರ್ವಭಾವಿ ಸಭೆ ನಡೆಸಿ, ಕಾರ್ಖಾನೆಯ ಪುನಶ್ಚೇತನದ ಕುರಿತಂತೆ ಚರ್ಚಿಸಲಾಯಿತು.