ಬೆಳಗಾವಿ : ಪದವಿ ಶಿಕ್ಷಣ ಎಂದರೆ ಪಠ್ಯಪುಸ್ತಕದ ಜ್ಞಾನ ಕ್ಕಷ್ಟೇ ಸೀಮಿತವಲ್ಲ, ಅದೊಂದು ಕನಸನ್ನು ನನಸಾಗಿಸುವ ವೇದಿಕೆ. ಅದು ಬದುಕಿನ ದಿಕ್ಸೂಚಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅವರು ಅಭಿಪ್ರಾಯಪಟ್ಟರು.
ನಗರದ ಧರ್ಮನಾಥ ಭವನದಲ್ಲಿ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ 2025-26ನೇ ಸಾಲಿನ ಸಾಂಸ್ಕೃತಿಕ, ಎನ್. ಎಸ್. ಎಸ್., ಎನ್.ಸಿ.ಸಿ,. ರೆಡ್ ಕ್ರಾಸ್, ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣದಿಂದೊಂದಿಗೆ ಸಂಸ್ಕಾರ ಸೇರಿದಾಗ ಮಾತ್ರ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ. ಯಾರು ಹೊಸದನ್ನು ಸೃಷ್ಟಿಸ ಬಲ್ಲರೋ ಅವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಯಬಲ್ಲರು. ಮೌಲ್ಯಗಳ ಜೊತೆಗೆ ಬಂದವರು ಮೌಲ್ಯಗಳನ್ನು ಉಳಿಸುತ್ತಾರೆ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಬೇಕು. ಓದು ಮಾತ್ರ ನಿಮ್ಮ ಬದುಕನ್ನು ರೂಪಿಸುತ್ತದೆ ಎಂದರು.
ಕುಲಸಚಿವ ಸಂತೋಷ ಕಾಮಗೌಡ ಅವರು ಮೊಬೈಲ್ ಇಂದ ಬದುಕು ಅರಳುವ ಬದಲು ಮುದುಡುತ್ತಿದೆ. ಸಾಧನೆಗೆ ಅಡ್ಡ ದಾರಿಯಿಲ್ಲ. ಅದು ಶಾಶ್ವತವೂ ಅಲ್ಲ. ಸಾಧನೆ ಮಾಡಲು ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯ. ಗುರಿ ಇರಬೇಕು, ಗುರಿಗೆ ತಕ್ಕಂತೆ ಪ್ರಯತ್ನ ಇರಬೇಕು. ಕಲಿಕೆಯ ಸಮಯದಲ್ಲಿ ಕಲಿಕೆಗೆ ಹೆಚ್ಚು ಸಮಯ ಕೊಡಬೇಕು. ಸದಾ ಸಕಾರಾತ್ಮಕ ಚಿಂತನೆ ಇರಲಿ. ನೇತ್ಯಾತ್ಮಕ ಚಿಂತನೆಯಿಂದ ದೂರವಿರಬೇಕು ಎಂದರು.
ನಾಯಕ ನಟ ಅಗಸ್ತ್ಯ ಕಬ್ಬೂರ ಅವರು ಸಿನಿಮಾಗಳು ಉತ್ತಮ ಅಭಿರುಚಿಯುಳ್ಳ ಕಥಾಹಂದರದೊಂದಿಗೆ ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು ಎಂದು ಹೇಳಿದರು.
ನಟಿ ಸುವರ್ಥಾ ಮಹಾಂತೇಶ ಅವರು ಉತ್ತರ ಕರ್ನಾಟಕದ ಪ್ರತಿಭೆಗಳು ಈಗ ಸಿನಿಮಾದತ್ತ ಸಾಗುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸಿ, ಬೆಂಬಲಿಸಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ ಎಸ್ ಸಿ ಪಾಟೀಲ್ ಅವರು ಜ್ಞಾನ, ಕೌಶಲ್ಯ, ಸೃಜನಶೀಲತೆ, ಓದಿನ ನಿರಂತರತೆ, ದೃಢ ನಿರ್ಧಾರ ಇವು ಸಾಧನೆಯ ಶಿಖರದ ಮೆಟ್ಟಿಲುಗಳು. ಇವು ಶಿಕ್ಷಣದ ಜೊತೆಗೆ ಬಂದಾಗ ಇಂದಿನ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಸಾಮರ್ಥ್ಯವನ್ನು ನೀಡುತ್ತದೆ. ವಿದ್ಯಾರ್ಥಿಗಳು ಕಾಲದ ಜೊತೆಗೆ ಹೆಜ್ಜೆ ಹಾಕಬೇಕು. ಆಗ ಬದುಕು ಸುಂದರವಾಗುತ್ತದೆ ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಡಾ. ಅರ್ಜುನ ಜಂಬಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಡಾ. ನಮಿತಾ ಪೋತರಾಜ ಸ್ವಾಗತಿಸಿದರು, ಉಪನ್ಯಾಸಕಿ ಲಾವಣ್ಯ ಗುಂಜಾಳ ನಿರೂಪಿಸಿದರು, ಆಸ್ಮಾ ದಾದಿಬಾಯಿ ವಂದಿಸಿದರು. ವಿದ್ಯಾರ್ಥಿನಿ ಲಕ್ಷ್ಮೀ ಹಿರೇಮಠ ನೃತ್ಯದ ಮೂಲಕ ಪ್ರಾರ್ಥಿಸಿದರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.