ಬೆಳಗಾವಿ : ಭಾಷೆ ಕೇವಲ ಸಂಪರ್ಕ ಕಲ್ಪಿಸುವುದು ಮಾತ್ರವಲ್ಲ ; ಅದು ಒಂದು ನಿರ್ದಿಷ್ಟ ಪರಿಸರದ ಸಂಪತ್ಭರಿತ ಸಂಸ್ಕೃತಿಯನ್ನು ಅರಿತುಕೊಳ್ಳುವ ಸಾಧನ ಎಂದು ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅಭಿಪ್ರಾಯಪಟ್ಟರು.
ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಹಿಂದಿ ವಿಭಾಗವು ಹಿಂದಿ ದಿವಸ್ ಆಚರಣೆಯ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.
ಹಿಂದಿ ಮಾತನಾಡುವವರ ಸಂಖ್ಯೆ ಮತ್ತು ಅದು ಒಳಗೊಂಡಿರುವ ಭೌಗೋಳಿಕತೆಯ ವ್ಯಾಪ್ತಿ ಹೆಚ್ಚಿದೆ. ನಮ್ಮ ಭಾಷೆಯ ಜೊತೆಗೆ ಇತರ ಭಾಷೆಗಳನ್ನು ಗೌರವಿಸೋಣ. ಒಂದು ಭಾಷೆ ಕಲಿಯುವುದರಿಂದ ಆ ಭಾಷೆಯ ಮೂಲ ಸಂಸ್ಕೃತಿಯ ಸೊಗಡನ್ನು ಯಥಾವತ್ತಾಗಿ ಅನುಭವಿಸಬಹುದು. ಇದು ಅನುವಾದಿಂದ ತಿಳಿದುಕೊಳ್ಳುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹಿಂದಿ ಹೆಚ್ಚು ರಾಜ್ಯಗಳನ್ನು ಜೋಡಿಸುವ ಭಾಷೆಯಾಗಿದೆ. ಹಿಂದಿ ಕಲಿಯುವುದರಿಂದ ಕೇಂದ್ರದ ಆಡಳಿತಾತ್ಮಕ ವಿಷಯಗಳನ್ನು ಕೂಲಂಕಷವಾಗಿ ಅರಿತುಕೊಳ್ಳಲು ಸಹಾಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್ ಸಿ ಪಾಟೀಲ್ ಅವರು ರಾಷ್ಟ್ರವ್ಯಾಪಿ ಬಹುತೇಕ ಹರಡಿಕೊಂಡಿರುವ ಹಿಂದಿಯನ್ನು ಒಂದು ಭಾಷೆಯಾಗಿ ಕಲಿಯುವುದು ಹೆಚ್ಚು ಲಾಭದಾಯಕವಾಗಿದೆ. ನಮ್ಮ ಜ್ಞಾನ ಭಂಡಾರ ಹೆಚ್ಚುತ್ತದೆ. ಅಲ್ಲಿಯ ಸಂಸ್ಕೃತಿ, ಇತಿಹಾಸ, ಪರಂಪರೆಗಳನ್ನು ನೇರವಾಗಿ ತಿಳಿದುಕೊಳ್ಳಬಹುದಾಗಿದೆ. ಬಹುತೇಕ ಉತ್ತರ ಭಾರತದ ರಾಜ್ಯಗಳನ್ನು ಸಂಪರ್ಕಿಸಲು ಹಿಂದಿ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದಿ ಭಾಷೆಯನ್ನು ಕಲಿಯುವುದರಿಂದ ಆ ಪರಿಸರದ ಭವ್ಯ ಪರಂಪರೆಯನ್ನು ನೈಜವಾಗಿ ತಿಳಿದುಕೊಳ್ಳಬಹುದಾಗಿದೆ ಎಂದರು.
ಬೆಳಗಾವಿಯ ಮರಾಠಾ ಮಂಡಲ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಗೃಹವಿಜ್ಞಾನ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಡಿ. ಎಂ. ಮುಲ್ಲಾ ಅವರು ಹಿಂದಿ ಔರ್ ರೋಜಗಾರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಹಿಂದಿ ಭಾಷೆ ಸುಂದರ, ಸರಳ ಹಾಗೂ ಹೃದಯವನ್ನ ಜೋಡಿಸುವ ಭಾಷೆಯಾಗಿದೆ. ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ಯ ಹೋರಾಟದಲ್ಲಿ ಎಲ್ಲ ಜನರನ್ನು ಜೋಡಿಸಲು ಹಿಂದಿ ಭಾಷೆಯನ್ನು ಮಾಧ್ಯಮವನ್ನಾಗಿ ಬಳಸಿಕೊಂಡರು. ಪ್ರಪಂಚದಲ್ಲಿ ಅತೀ ಹೆಚ್ಚು ಬಳಸುವ ಮೂರನೇ ಭಾಷೆಯಾಗಿದೆ. ಅನುವಾದ ಕ್ಷೇತ್ರದಲ್ಲಿ ಅತ್ಯುತ್ತಮ ಉದ್ಯೋಗ ಅವಕಾಶ ಕಲ್ಪಿಸಿದೆ. ವಿದೇಶದಲ್ಲಿ ಹಿಂದಿ ಭಾಷೆಯ ಬಗ್ಗೆ ಅಭಿಮಾನ, ಗೌರವ ಬೆಳೆಯುತ್ತಿದೆ ಎಂದರು.
ಹಿಂದಿ ವಿಭಾಗದ ಮುಖ್ಯಸ್ಥ ಎಂ.ಎಂ.ಮುತವಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೀಪಾ ಅಂಟಿನ ಪರಿಚಯಿಸಿದರು.
ವಿದ್ಯಾರ್ಥಿನಿ ಜ್ಯೋತಿ ಹುಬ್ಬಳಿಕರ ನಿರೂಪಿಸಿದರು, ವಿದ್ಯಾರ್ಥಿನಿಯರಾದ ಜ್ಯೋತಿ, ಸೌಂದರ್ಯ ಹಾಗೂ ರಕ್ಷಿತಾ ಪ್ರಾರ್ಥಿಸಿದರು. ಉಪನ್ಯಾಸಕಿ ಉಜ್ವಲಾ ಪಾಟೀಲ ವಂದಿಸಿದರು. ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.