ಕಠ್ಮಂಡು : ನೇಪಾಳದ ನೂತನ ಹಂಗಾಮಿ ಪ್ರಧಾನಿ ಆಗಿರುವ ಸುಶೀಲಾ ಕಾರ್ಕಿ ಅವರು ಗೃಹ ಸಚಿವರು, ವಿದೇಶಾಂಗ ಹಾಗೂ ರಕ್ಷಣಾ ಸಚಿವರು ಸೇರಿದಂತೆ ಕೆಲವೇ ಸಚಿವರನ್ನು ಒಳಗೊಂಡ ಸಂಪುಟವನ್ನು ಭಾನುವಾರ ರಚಿಸಲಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಮೂಲಗಳು ತಿಳಿಸಿವೆ.
‘ಜೆನ್-ಝೀ’ ಪ್ರತಿಭಟನೆ ವೇಳೆ ಪ್ರಧಾನಿ ಕಚೇರಿಯ ಕಟ್ಟಡವೂ ಬೆಂಕಿಗೆ ಆಹುತಿಯಾಗಿರುವ ಕಾರಣ ಸಿಂಗದರ್ಬಾರ್ ಸಂಕೀರ್ಣದಲ್ಲಿ ಗೃಹ ಸಚಿವಾಲಯಕ್ಕಾಗಿ ನೂತನವಾಗಿ ನಿರ್ಮಿಸಿರುವ ಕಚೇರಿಯನ್ನೇ ಪ್ರಧಾನಿ ಕಚೇರಿಯನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ ಎಂದೂ ತಿಳಿದುಬಂದಿದೆ.
ಮಾರ್ಚ್ 5ಕ್ಕೆ ಚುನಾವಣೆ:
ನೇಪಾಳದ ಮುಂದಿನ ಸಾರ್ವತ್ರಿಕ ಚುನಾವಣೆಯು 2026ರ ಮಾರ್ಚ್ 5ರಂದು ನಡೆಯಲಿದೆ ಎಂದು ಅಧ್ಯಕ್ಷ ರಾಮಚಂದ್ರ ಪೌದಲ್ ಅವರ ಕಚೇರಿಯು ಘೋಷಿಸಿದೆ.
ಹಂಗಾಮಿ ಪ್ರಧಾನಿ ಸುಶೀಲಾ ಕಾರ್ಕಿ ಅವರ ಶಿಫಾರಸಿನ ಮೇರೆಗೆ ಶುಕ್ರವಾರ ತಡರಾತ್ರಿಯೇ ಸಂಸತ್ತನ್ನು ಅಧ್ಯಕ್ಷ ಪೌದೆಲ್ ವಿಸರ್ಜಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರ ಕಚೇರಿಯು ಪ್ರಕಟಣೆ ಹೊರಡಿಸಿದೆ. ‘ 2025ರ ಸೆಪ್ಟೆಂಬರ್ 12ರ ರಾತ್ರಿ 11 ರಿಂದ ಅನ್ವಯವಾಗುವಂತೆ ಸಂಸತ್ ಅನ್ನು ವಿಸರ್ಜಿಸಲಾಗುತ್ತಿದ್ದು, 2026ರ ಮಾರ್ಚ್ 5ಕ್ಕೆ ಸಾರ್ವತ್ರಿಕ ಚುನಾವಣೆಯನ್ನು ನಿಗದಿ ಪಡಿಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.
ಸಂಸತ್ ವಿಸರ್ಜನೆ ಅಸಂವಿಧಾನಿಕ: ರಾತ್ರೋರಾತ್ರಿ ಸಂಸತ್ತನ್ನು ವಿಸರ್ಜಿಸಿರುವ ನೇಪಾಳದ ಅಧ್ಯಕ್ಷರ ತೀರ್ಮಾನವನ್ನು ಇಲ್ಲಿನ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ವಕೀಲರ ಸಂಘಟನೆಗಳು ಖಂಡಿಸಿದ್ದು, ಇದು ಅಸಂವಿಧಾನಿಕ ನಡೆ ಹಾಗೂ ನಿರಂಕುಶಾಧಿಕಾರದ ಪ್ರತೀಕ ಎಂದು ಆರೋಪಿಸಿವೆ.
ಕಠ್ಮಂಡುವಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿಗೀಡಾದವರ ಸ್ಮರಣಾರ್ಥ ಜನರು ಶನಿವಾರ ಮೇಣದ ಬತ್ತಿ ಬೆಳಗಿಸಿದರು.