ಬೆಳಗಾವಿ : ನವ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿ, ರಕ್ಷಣಾ ಸಚಿವಾಲಯದ ಆದೇಶದಂತೆ ಬೆಳಗಾವಿ ದಂಡುಮಂಡಳಿ ವ್ಯಾಪ್ತಿಯಡಿ ಬರುವ ನಾಗರಿಕ ಕ್ಷೇತ್ರವನ್ನು ಗುರುತಿಸಿದ್ದು, ಇದನ್ನು ಶೀಘ್ರ ಮಹಾನಗರ ಪಾಲಿಕೆ ಬೆಳಗಾವಿಗೆ ಹಸ್ತಾಂತರಿಸುವ ಕ್ರಮದ ಬಗ್ಗೆ ಚರ್ಚಿಸಲಾಯಿತು ಎಂದು ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಬೆಳಗಾವಿ ದಂಡುಮಂಡಳಿ ವ್ಯಾಪ್ತಿಯಡಿ ಗುರುತಿಸಲಾದ ನಾಗರಿಕ ಕ್ಷೇತ್ರವನ್ನು ಗುರುತಿಸಿದ್ದು ಹಾಗೂ ಇದನ್ನು ಮಹಾನಗರ ಪಾಲಿಕೆ ಬೆಳಗಾವಿಗೆ ಹಸ್ತಾಂತರಿಸುವ ಕುರಿತಾದ ಸಮಗ್ರವಾದ ಮಾಹಿತಿಯನ್ನು ಈಗಾಗಲೇ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ನವ-ದೆಹಲಿ ರಕ್ಷಣಾ ಇಲಾಖೆ ಕಾರ್ಯದರ್ಶಿಗಳು, ಇವರಿಗೆ ಕಳುಸಿರುವ ವಿಚಾರವನ್ನು ಸಂಸದರು ಕೇಂದ್ರ ಸಚಿವರಲ್ಲಿ ಪ್ರಸ್ತಾಪಿಸಿ, ಆದಷ್ಟು ಶೀಘ್ರ ಈ ಹಸ್ತಾಂತರ ಕಾರ್ಯ ನಡೆಯುವಂತೆ ನೋಡಿಕೊಳ್ಳಲು ಕೋರಿದರು.
ಬೆಳಗಾವಿಯಲ್ಲಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯ ಕೈಗಾರಿಕೆಗಳನ್ನು ಸ್ಥಾಪಿಸಲು ಜಮೀನು ಇತ್ಯಾದಿಗಳ ಸೌಲಭ್ಯ ಲಭ್ಯವಿರುವ ಪ್ರಯುಕ್ತ ಈ ನಿಟ್ಟಿನಲ್ಲಿಯೂ ಸಹ ವಿಷಯವನ್ನು ಅವಲೋಕಿಸುವಂತೆ ಕೋರಲಾಯಿತು.
ಚರ್ಚೆಗನುಗುಣವಾಗಿ ಪ್ರಸ್ತಾಪಿತ ವಿಷಯಗಳ ಕುರಿತು ಅವಲೋಕಿಸಿ, ಶೀಘ್ರ ಕ್ರಮವನ್ನು ಜರುಗಿಸುವುದಾಗಿ ಕೇಂದ್ರ ರಕ್ಷಣಾ ಸಚಿವರು ಭರವಸೆ ನೀಡಿದ್ದಾಗಿ ಜಗದೀಶ ಶೆಟ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.