ಕಾಗವಾಡ : ಹೆಸ್ಕಾಂ ಉಗಾರ ಖುರ್ದ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ದುರ್ಯೋಧನ ಮಾಳಿ ಎಂಬುವರು ರೈತರೊಬ್ಬರಿಂದ ಲಂಚ ಪಡೆದಿದ್ದಾರೆ ಎನ್ನಲಾದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ಹರಿದಾಡಿದೆ.
ಶಿರಗುಪ್ಪಿಯ ರೈತ ವಿದ್ಯುತ್ ಪರಿವರ್ತಕ ಮತ್ತು ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ರೂ. 3 ಸಾವಿರ ಲಂಚ ಪಡೆಯುವಾಗ ರೈತರೆ ವಿಡಿಯೊ ಮಾಡಿದ್ದಾರೆ. ಅಧಿಕಾರಿ ಟೇಬಲ್ ಮೇಲೆ ಕುಳಿತು ಹಣ ಎಣಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು ವಿಡಿಯೊದಲ್ಲಿದೆ. ಈ ತಕ್ಷಣಕ್ಕೆ ನಿಮ್ಮ ಕೆಲಸ ಮಾಡಿಸಿ ಕೊಡುತ್ತೇನೆ ಎಂದು ಅಧಿಕಾರಿ ಹೇಳಿದ ಮಾತುಗಳು ವಿಡಿಯೊದಲ್ಲಿವೆ.
ಆದರೆ, ಈ ಬಗ್ಗೆ ರೈತ ದೂರು ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟಿದ್ದಾರೆ. ಇದು ಯಾವಾಗ ನಡೆದಿದೆ ಎಂಬ ಬಗ್ಗೆಯೂ ರೈತ ಯಾವುದೇ ಮಾಹಿತಿ ನೀಡಿಲ್ಲ.
ದುರ್ಯೋಧನ ಮಾಳಿ ಅವರ ಮೇಲೆ ಆರೋಪ ಕೇಳಿ ಬಂದ ತಕ್ಷಣ ಅವರನ್ನು ಅಮಾನತು ಮಾಡಲಾಗಿದೆ. ಇಲಾಖಾ ತನಿಖೆಗೆ ನಡೆಯಲಿದೆ ಎಂದು ಬೆಳಗಾವಿ ಹೆಸ್ಕಾಂ ಮುಖ್ಯ ಎಂಜಿನಿಯರ್ (ಪ್ರಭಾರಿ)
ಪ್ರವೀಣಕುಮಾರ ಚಿಕ್ಕಾಡೆ ತಿಳಿಸಿದ್ದಾರೆ.