ಬೆಳಗಾವಿ: ನಾನು ರಾಜಕೀಯಕ್ಕೆ ಬಂದಾಗ ವಿರೋಧಿಸಿದವರೇ ಜಾಸ್ತಿ, ನನ್ನನ್ನು ಕೆಣಕಿದರೆ ಬಿಡುವುದಿಲ್ಲ, ಯಾರಾದರೂ ನನ್ನ ಆತ್ಮಗೌರವಕ್ಕೆ ದಕ್ಕೆ ತಂದರೆ ಸುಮ್ಮನಿರುವುದಿಲ್ಲ. ಕ್ಷೇತ್ರದ ಜನರೇ ಉತ್ತರಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಾಂಬ್ರಾ ಗ್ರಾಮದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಧ್ಯಾನ ಕೇಂದ್ರದ ನೂತನ ಕಟ್ಟಡದ ಚೌಕಟ್ ಅಳವಡಿಸುವ ಪೂಜೆಯನ್ನು ನೆರವೇರಿಸಿ ಮಾತನಾಡಿದ ಸಚಿವರು, ರಾಜಕಾರಣಿಗಳನ್ನು ದೂರ ಇಡುವ ಹೊತ್ತಿನಲ್ಲಿ ಕ್ಷೇತ್ರದ ಜನರು ಮನೆಗೆ ಮಗಳು ಬಂದಳೆಂದು ಸೀರೆ ಕೊಟ್ಟು ಗೌರವಿಸುತ್ತಿದ್ದಾರೆ. ನನ್ನಂತಹ ಭಾಗ್ಯಶಾಲಿ ಯಾರೂ ಇಲ್ಲ ಎಂದರು.
ಹಿಂದೂ ಸಂಸ್ಕೃತಿಯಲ್ಲಿ ಶ್ರಾವಣ ಸೋಮವಾರ ಸ್ವರ್ಗದ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ. ಶ್ರಾವಣ ಸೋಮವಾರದಂದೇ ಇಂಥ ಒಳ್ಳೆ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಸಾಂಬ್ರಾ ಜಾತ್ರೆಯ ಸಂದರ್ಭದಲ್ಲಿ 5 ಕೋಟಿ ರೂಪಾಯಿ ಕೊಟ್ಟಿದ್ದೇನೆ. ನಗರದ ಮಾದರಿಯಲ್ಲಿ ಈ ಪ್ರದೇಶ ಇಂದು ಬೆಳೆದಿದೆ. 7 ವರ್ಷ ಹಿಂದೆ ಗ್ರಾಮ ಹೇಗಿತ್ತು, ಇಂದು ಹೇಗಾಗಿದೆ ಎನ್ನುವುದನ್ನು ನೀವೆಲ್ಲ ನೋಡುತ್ತಿದ್ದೀರಿ ಎಂದು ಹೇಳಿದರು.
ಪ್ರತಿ ಊರಲ್ಲಿ ದೇವಸ್ಥಾನ, ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ದೇವರಲ್ಲಿ ವಿಶ್ವಾಸವಿಟ್ಟು ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಇಡೀ ರಾಜ್ಯದಲ್ಲಿ ಕ್ಷೇತ್ರವನ್ನು ಗುರುತಿಸುವಂತೆ ಮಾಡಿದ್ದೇನೆ ಎಂದು ಸಚಿವರು ಹೇಳಿದರು.
ನಮ್ಮ ಸಂಸ್ಕೃತಿಯೇ ಹಾಗೆ, ಕಷ್ಟ ಇರಲಿ, ಸುಖ ಇರಲಿ ದೇವರನ್ನು ನೆನೆಸುತ್ತೇವೆ. ಕ್ಷೇತ್ರದಲ್ಲಿ ಜನರ ಮನಸ್ಸನ್ನು ಗೆಲ್ಲುವ ಅವಕಾಶ ಸಿಕ್ಕಿದೆ. ಶಾಶ್ವತವಾಗಿ ಉಳಿಯುವ ಕೆಲಸ ಮಾಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸದಿಂದ ಮುಕ್ತಿ ಕೊಡಿಸಲಾಗಿದೆ. ಅವರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಗೃಹಲಕ್ಷ್ಮೀ ಯೋಜನೆ ಹಣವನ್ನು ಶ್ರಾವಣದ ಕೊನೆಯ ಸೋಮವಾರಕ್ಕೂ ಮೊದಲು ಸಂದಾಯ ಮಾಡಲಾಗುವುದು. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಆರೋಗ್ಯಕರ ರಾಜಕಾರಣ ಮಾಡುತ್ತಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
50 ಲಕ್ಷ ರೂಪಾಯಿ ಅನುದಾನ
ಮಹೋನ್ನತ ಧ್ಯೇಯವನ್ನಿಟ್ಟುಕೊಂಡು ಆರಂಭವಾದ ಬ್ರಹ್ಮಕುಮಾರಿ ಸಂಸ್ಥೆಗೆ ಸುಸಜ್ಜಿತ ಸಭಾಭವನ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ 50 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಸಚಿವರು ಘೋಷಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ರವಿಶಂಕರ ಗುರೂಜಿ, ರಾಜಯೋಗಿನಿ ಅಂಬಿಕಾ, ಶಂಕರಗೌಡ ಪಾಟೀಲ್, ಈರಪ್ಪ ಸುಳೇಭಾವಿ, ಸ್ನೇಹಲ್ ಪೂಜೇರಿ, ಸುರೇಶ್ ಪಾಟೀಲ್, ರಚನಾ ಗಾವಡೆ, ಉಳವಪ್ಪ ಮಲ್ಲನ್ನವರ್, ಬೃಹ್ಮಕುಮಾರಿ ಸುಲೋಚನಾ, ಬಸು ದೇಸಾಯಿ, ನಾಗೇಶ್ ದೇಸಾಯಿ, ಸುರೇಶ ಕಾಳೋಜಿ, ಮಹೇಂದ್ರ ಗೋಟೆ ಉಪಸ್ಥಿತರಿದ್ದರು.
ಜನರು ಕೊಟ್ಟ ಅಧಿಕಾರಕ್ಕೆ ನ್ಯಾಯ ಒದಗಿಸುವುದೇ ನನ್ನ ಉದ್ದೇಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
* ಕಲ್ಮೇಶ್ವರ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ಸಚಿವರು
ಬೆಳಗಾವಿ: ಜನರು ಕೊಟ್ಟ ಅಧಿಕಾರವನ್ನು ಸೂಕ್ತವಾಗಿ ಬಳಸಿಕೊಂಡು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು. ಅಧಿಕಾರ ಇದ್ದಷ್ಟು ದಿನ, ಜೀವ ಇರುವಷ್ಟು ದಿನ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕೊಂಡಸಕೊಪ್ಪ ಗ್ರಾಮದಲ್ಲಿ ಸಚಿವರು ಒದಿಸಿರುವ ಸುಮಾರು 50 ಲಕ್ಷ ರೂಪಾಯಿಗಳ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಕಲ್ಮೇಶ್ವರ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಕಲ್ಮೇಶರ ದೇವಸ್ಥಾನವನ್ನು ಭವ್ಯವಾಗಿ ನಿರ್ಮಿಸಲಾಗುತ್ತಿದೆ. ಮುಂದಿನ ಶ್ರಾವಣದ ವೇಳೆಗೆ ದೇವಸ್ಥಾನದ ಉದ್ಘಾಟನೆ ಆಗಲಿ ಎಂಬುದೇ ನನ್ನ ಆಶಯವಾಗಿದೆ ಎಂದು ಹೇಳಿದರು.
ಭಾರತದ, ಹಿಂದು ಸಂಸ್ಕೃತಿಯಲ್ಲಿ ಶ್ರಾವಣ ಸೋಮವಾರಕ್ಕೆ ತುಂಬಾ ಪಾವಿತ್ರ್ಯತೆ ಇದೆ. ನಾನು ದೈವ ಭಕ್ತಳು, ಯಾವತ್ತೂ ಜಾತಿ ಭೇದ ಮಾಡಿದವಳಲ್ಲ, ಎಲ್ಲಾ ಜಾತಿ ವರ್ಗದವರಿಗೂ ಅವರ ದೇವಸ್ಥಾನಗಳಿಗೆ ಹಣ ನೀಡಿರುವೆ, ಒಂದೇ ಗ್ರಾಮದಲ್ಲಿ ಮೂರು ದೇವಸ್ಥಾನಗಳಿಗೆ ತಲಾ ಒಂದು ಕೋಟಿ ರೂಪಾಯಿ ನೀಡಿರುವೆ ಎಂದು ಹೇಳಿದರು.
ನನಗೆ ಧೈರ್ಯವೇ ನನ್ನ ಮತದಾರರು, ನನ್ನನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿಕೊಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಾದ್ಯಂತ 140 ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿರುವೆ. ನಮಗೆ ದೇವಸ್ಥಾನ ಎಂದರೆ ಭಕ್ತಿ, ಭಯ ಎರಡೂ ಇದೆ. ಕಷ್ಟಕಾಲದಲ್ಲಿ ನಾವು ನೆನೆಯುವುದೇ ದೇವರನ್ನು, ಎಲ್ಲಾ ಗ್ರಾಮಗಳಲ್ಲೂ ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಜನರ ಪ್ರೀತಿ ವಿಶ್ವಾಸ, ಆಶೀರ್ವಾದ ನನ್ನ ಮೇಲಿರಲಿ. ದೇವರ ಮೇಲಿನ ಭಕ್ತಿ, ಜನರ ಆಶೀರ್ವಾದ ನನ್ನ ಮೇಲೆ ಇದ್ದ ಪರಿಣಾಮ ಅಷ್ಟು ದೊಡ್ಡ ಅಪಘಾತದ ನಡುವೆಯೂ ಬದುಕಿ ಬಂದಿರುವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುತ್ನಾಳದ ಶ್ರೀ ಶಿವಾನಂದ ಶಿವಾಚಾರ್ಯರು, ಬಡೇಕೊಳ್ಳಮಠದ ಶ್ರೀ ನಾಗೇಂದ್ರ ಮಹಾಸ್ವಾಮಿಗಳು, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಲಕ್ಷ್ಮಣ ಪಾಟೀಲ, ಮಡಿವಾಳಪ್ಪ ಪಾಟೀಲ್, ಅರ್ಜುನ್ ಪಾಟೀಲ್, ಶ್ರೀಕಾಂತ್ ಪಾಟೀಲ್, ಕಲ್ಲಪ್ಪ ಪಾಟೀಲ್, ಶೋಭಾ ಪಾಟೀಲ್, ಶೋಭಾ ಡೋಂಗ್ರೆ, ವಿಠ್ಠಲ ಸಾಂಬ್ರೇಕರ್, ಮಾರುತಿ ವಾಳಕೆ, ಭೀಮಾ ದೇವನ್ನವರ, ಕೃಷ್ಣ ಸನದಿ, ಬಾಳು ಪಾಟೀಲ್, ಮನೋಹರ್ ಮುಚ್ಚಂಡಿ, ಪದ್ಮರಾಜ ಪಾಟೀಲ್ ಉಪಸ್ಥಿತರಿದ್ದರು.