ನವದೆಹಲಿ: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೈದೈಕೀಯ ಕಾರಣಗಳನ್ನು ನೀಡಿ ಸೋಮವಾರ(ಜು.21) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಉಪರಾಷ್ಟ್ರಪತಿ ಚುನಾವಣೆಗೆ ಕೆಲವೇ ದಿನಗಳಲ್ಲಿ ರಂಗೇರುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ಹೊಸ ಉಪರಾಷ್ಟ್ರಪತಿ ನೇಮಕದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಅವರ ನಿರ್ಧಾರವೇ ಅಂತಿಮವಾಗಲಿದ್ದು ಮುಂದಿನ ಉಪರಾಷ್ಟ್ರಪತಿ ಯಾರಾಗಬಹುದು ಎಂಬ ತೀವ್ರ ಕುತೂಹಲ ದೇಶದ ಜನರಲ್ಲಿ ವ್ಯಕ್ತವಾಗಿದೆ.
ರಾಜೀನಾಮೆ, ನಿಧನ, ಪದಚ್ಯುತಿ ಅಥವಾ ಇನ್ಯಾವುದೇ ಕಾರಣದಿಂದ ಉಪ ರಾಷ್ಟ್ರಪತಿ ಸ್ಥಾನ ತೆರವಾದಲ್ಲಿ, ಆ ಸ್ಥಾನವನ್ನು ಭರ್ತಿ ಮಾಡಲು ಸಾಧ್ಯವಾದಷ್ಟು ಬೇಗ ಚುನಾವಣೆ ನಡೆಸಬೇಕೆಂದು ಸಂವಿಧಾನವು ಹೇಳುತ್ತದೆ.
ಈ ಬಗ್ಗೆ ಸಂವಿಧಾನದ 68ನೇ ವಿಧಿಯ 2ನೇ ಷರತ್ತಿನಲ್ಲಿ ವಿವರಿಸಲಾಗಿದೆ.
ಆಯ್ಕೆಯಾದ ವ್ಯಕ್ತಿಯು ಅಧಿಕಾರ ವಹಿಸಿಕೊಂಡ ದಿನದಿಂದ ಐದು ವರ್ಷಗಳ ಪೂರ್ಣ ಅವಧಿಗೆ ಅಧಿಕಾರದಲ್ಲಿರಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ.
ಆದರೆ, ಉಪ ರಾಷ್ಟ್ರಪತಿ ಹುದ್ದೆಯಲ್ಲಿದ್ದವರು ಅವಧಿ ಮುಗಿಯುವ ಮೊದಲು ನಿಧನರಾದರೆ ಅಥವಾ ರಾಜೀನಾಮೆ ನೀಡಿದರೆ ಅಥವಾ ರಾಷ್ಟ್ರಪತಿಯಾಗಿ ಆಯ್ಕೆಯಾದರೆ, ಮುಂದಿನ ಉಪ ರಾಷ್ಟ್ರಪತಿ ಆಯ್ಕೆಯಾಗುವವರೆಗೆ ಅವರ ಕರ್ತವ್ಯಗಳನ್ನು ಯಾರು ನಿರ್ವಹಿಸುತ್ತಾರೆ ಎಂಬ ಬಗ್ಗೆ ಸಂವಿಧಾನದಲ್ಲಿ ವಿವರಿಸಿಲ್ಲ.
ಉಪ ರಾಷ್ಟ್ರಪತಿ ಹುದ್ದೆಯು ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾಗಿದೆ. ಅವರ ಅಧಿಕಾರವಧಿ ಐದು ವರ್ಷಗಳ ಕಾಲ ಇರುತ್ತದೆ. ಅವಧಿ ಮುಗಿದ ನಂತರ ಮುಂದಿನ ಉಪ ರಾಷ್ಟ್ರಪತಿ ಆಯ್ಕೆಯಾಗುವರೆಗೂ ಅವರು ಅಧಿಕಾರದಲ್ಲಿ ಮುಂದುವರಿಯಬಹುದಾಗಿದೆ.
ಸಂವಿಧಾನದಲ್ಲಿರುವ ಏಕೈಕ ನಿಬಂಧನೆಯು ರಾಜ್ಯಸಭೆಯ ಸಭಾಪತಿಯಾಗಿ ಉಪ ರಾಷ್ಟ್ರಪತಿಯ ಕಾರ್ಯವನ್ನು ವಿವರಿಸುತ್ತದೆ. ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದ ಸಂದರ್ಭ, ಉಪ ಸಭಾಪತಿ ಅಥವಾ ರಾಷ್ಟ್ರಪತಿಗಳು ಅಧಿಕಾರ ನೀಡಿದ ರಾಜ್ಯಸಭೆಯ ಸದಸ್ಯ ಅವರ ಕಾರ್ಯವನ್ನು ನಿರ್ವಹಿಸುತ್ತಾರೆ.
ಉಪ ರಾಷ್ಟ್ರಪತಿಗಳು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿಗೆ ಸಲ್ಲಿಸುವ ಮೂಲಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಬಹುದು. ರಾಜೀನಾಮೆಯು ಅಂಗೀಕರಿಸಲ್ಪಟ್ಟ ದಿನದಿಂದ ಜಾರಿಗೆ ಬರುತ್ತದೆ.
ಜಗದೀಪ್ ಧನಕರ್ ರಾಜೀನಾಮೆಯಿಂದಾಗಿ ತೆರವಾಗುವ ಉಪರಾಷ್ಟ್ರಪತಿ ಹುದ್ದೆಗೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.
ರಾಜ್ಯಸಭಾ ಉಪ ಸಭಾಪತಿಯೂ ಆದ ಜನತಾದಳ (ಯುನೈಟೆಡ್) ಸಂಸದ ಹರಿವಂಶ್ ಅವರು 2020ರಿಂದ ಉಪ ಸಭಾಪತಿ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ವಿಶ್ವಾಸವನ್ನು ಗಳಿಸಿದ್ದಾರೆ. ಈ ಕಾರಣಕ್ಕೆ ಅವರು ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.
‘ಮುಂದಿನ ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಉತ್ತಮ ಘನತೆಯುಳ್ಳ ಹಾಗೂ ವಿವಾದಾತ್ಮಕ ವಲ್ಲದ ವ್ಯಕ್ತಿಯನ್ನು ಪಕ್ಷವು ಆಯ್ಕೆ ಮಾಡಲಿದೆಯೆಂದು ನಂಬಿದ್ದೇನೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೈದ್ಯಕೀಯ ಕಾರಣಗಳನ್ನು ನೀಡಿ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
74 ವರ್ಷದ ಧನಕರ್ ಅವರು 2022ರ ಆಗಸ್ಟ್ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅಧಿಕಾರದ ಅವಧಿ 2027ರ ವರೆಗೂ ಇತ್ತು. ರಾಜ್ಯಸಭೆಯ ಸಭಾಪತಿಯೂ ಆಗಿರುವ ಅವರು ಸೋಮವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಕಲಾಪದಲ್ಲಿ ಪಾಲ್ಗೊಂಡಿದ್ದರು.