ಬೆಳಗಾವಿ : ಅತ್ಯಂತ ಕಷ್ಟದಲ್ಲಿ ಓದಿ ದೇಶಕ್ಕೆ ಮಾದರಿ ಸಂವಿಧಾನ ನೀಡಿರುವ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಹೆಸರೇ ಅಭಿಮಾನದ ಸಂಕೇತ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಗೋಜಗಾ ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ ವಿಶ್ವರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಯ ಅಳವಡಿಕೆಯ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಇಂದು ಮಹಿಳೆಯರು ಸ್ವತಂತ್ರವಾಗಿ ಓಡಾಡುತ್ತಿದ್ದರೆ, ಹಕ್ಕಿನಿಂದ ಮಾತನಾಡುತ್ತಿದ್ದರೆ, ಮಹಿಳೆಯರಿಗೆ ಸಮಾನತೆ ಸಿಕ್ಕಿದ್ದರೆ ಅದು ಅಂಬೇಡ್ಕರ್ ಅವರ ಸಂವಿಧಾನದಿಂದ.
ಮಹಿಳೆಗೂ ಜೀವವಿದೆ, ಅಧಿಕಾರ ನಡೆಸುವ ಹಕ್ಕಿದೆ ಎಂದು ಪ್ರತಿಪಾದಿಸಿ, ಸಂವಿಧಾನದಲ್ಲಿ ಅವಕಾಶ ನೀಡಿದ ಅಂಬೇಡ್ಕರ್ ಅವರು ಆಧುನಿಕ ಬಸವಣ್ಣ ಎಂದು ಹೆಬ್ಬಾಳಕರ್ ಹೇಳಿದರು.
ಮುಂದಿನ ಪೀಳಿಗೆಗೆ ಅಂಬೇಡ್ಕರ್ ಅವರ ಜೀವನ ಆದರ್ಶವಾಗುವ ಉದ್ದೇಶದಿಂದ ಎಲ್ಲೆಡೆ ಅಂಬೇಡ್ಕರ್ ಮೂರ್ತಿ, ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಮಕ್ಕಳಿಗೆ ಮಹಾನ್ ವ್ಯಕ್ತಿಗಳು ಆದರ್ಶವಾಗಬೇಕು ಎನ್ನು ಕಾರಣದಿಂದ ಅಂಬೇಡ್ಕರ್ ಸೇರಿದಂತೆ ಎಲ್ಲ ಮಹಾನ್ ವ್ಯಕ್ತಿಗಳ ಪುತ್ಥಳಿ ನಿಲ್ಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಮಹೇಶ ಕಾಂಬಳೆ, ಶಿವಾಜಿ ಯಳಗೆ, ಪದ್ಮರಾಜ ಪಾಟೀಲ, ಕಲ್ಲಪ್ಪ ಕಾಂಬಳೆ, ಪರಶು ನಾಯ್ಕ್, ಪುಂಡಲೀಕ್ ಬಾಂದುರ್ಗೆ, ಲಲಿತಾ ಪಾಟೀಲ, ಶಂಕರ ಸುತಾರ್, ದುರ್ಗಪ್ಪ ದೇವಣ್ಣವರ, ರಾಜಶ್ರೀ ತೋರೆ, ವಿಷ್ಣು ಕಾಂಬಳೆ, ಪಿಡಿಒ ಜಂಬಗಿ, ಜ್ಯೋತಿಬಾ ಚೌಗುಲೆ, ಯುವರಾಜ ಪ್ರಭಾಕರ್ ಮುಂತಾದವರು ಉಪಸ್ಥಿತರಿದ್ದರು.
ಪಂತಬಾಳೇಕುಂದ್ರಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಬೆಳಗಾವಿ : ಪಂತ ಬಾಳೇಕುಂದ್ರಿ ಗ್ರಾಮದ ಪರಮಾನಂದ ನಗರದ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
57.70 ಲಕ್ಷ ರೂ,ಗಳ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಗೊಳ್ಳಲಿವೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಅಭಿವೃದ್ಧಿ ಯೋಜನೆಗಳನ್ನು ತರುತ್ತಿದ್ದಾರೆ. ಮೂಲಭೂತ ಸೌಲಭ್ಯಗಳ ಜೊತೆಗೆ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು.
ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಮಾಡುತ್ತಿರುವ ಲಕ್ಷ್ಮೀ ಹೆಬ್ಬಾಳಕರ್ ಅವರ ಕೈ ಬಲಪಡಿಸುವ ಕೆಲಸವನ್ನು ಕ್ಷೇತ್ರದ ಜನರು ಮಾಡಬೇಕು. ಸದಾ ಅವರೊಂದಿಗೆ ನಿಲ್ಲಬೇಕು. ಅಂದಾಗ ಮತ್ತಷ್ಟು ಅಭಿವೃದ್ಧಿ ಮಾಡಲು ಅವರಿಗೆ ಶಕ್ತಿ ಬರುತ್ತದೆ ಎಂದು ಅವರು ತಿಳಿಸಿದರು.
ಮಲ್ಲಪ್ಪ ಸುಣಗಾರ, ಈರಪ್ಪ ನಾವಲಗಿ, ಗುಲಾಬಿ ಕೋಲಕಾರ್, ಬಿ.ವಿ.ಅಂಗಡಿ, ಮಹಾರುದ್ರ ಬಡಿಗೇರ್, ಸಿದ್ದಪ್ಪ ಮೂಡಲಗಿ, ಅಡಿವೆಪ್ಪ ಮದನಭಾವಿ, ಮಹೇಶ್ ಮುಚ್ಚಂಡಿ, ಕಲ್ಲಮ್ಮ ಪುಡಕಲಕಟ್ಟಿ, ಶಾಂತಾ ಕೋತಿನ್ ಮುಂತಾದವರು ಉಪಸ್ಥಿತರಿದ್ದರು.
ಹೊನ್ನಿಹಾಳದಲ್ಲಿ ವಿವಿಧ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ
ಬೆಳಗಾವಿ : ಹೊನ್ನಿಹಾಳ ಗ್ರಾಮದಲ್ಲಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಕೆಯ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಸುಮಾರು 2 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಗುಣಮಟ್ಟದ ರಸ್ತೆ, ಚರಂಡಿ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಕೆ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಕಳೆದ 7 ವರ್ಷದಲ್ಲಿ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಹಿಂದೆ ರಸ್ತೆ, ಗಟಾರ ವ್ಯವಸ್ಥೆಗಳಿಲ್ಲದೆ ಜನರು ದಿನನಿತ್ಯದ ಚಟುವಟಿಕೆಗಳಿಗೆ ಪರದಾಡುವ ಪರಿಸ್ಥಿತಿ ಕ್ಷೇತ್ರದಾದ್ಯಂತ ಇತ್ತು. ಆದರೆ ಇಂದು ಯಾವ ಪ್ರದೇಶವೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿಲ್ಲ. ಹಾಗಾಗಿ ಪಕ್ಷಭೇದ ಮರೆತು ಎಲ್ಲರೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಬೆನ್ನಿಗೆ ನಿಲ್ಲಬೇಕು ಎಂದು ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಸುರೇಖಾ ಕಟಬುಗೋಳ, ಪ್ರಕಾಶ ಕಡ್ಯಾಗೋಳ, ಶಿವಾನಂದ ಮಠದ, ಲಕ್ಷ್ಮಣ ಮಲ್ಲಮ್ಮಗೋಳ, ಗುಂಡು ತಳವಾರ, ರಾಜು ತಳವಾರ, ಯಶವಂತ ಕಾಕಾ, ಗಣಪತಿ ಸುಳಗೇಕರ್, ಶಿವನಪ್ಪ ಕೆಂಗೇರಿ, ಸುರೇಶ ಕೆಂಗೇರಿ, ಮಹಾದೇವ್ ತಳವಾರ್, ದಾದಾಫೀರ್ ಸಾಂಬ್ರೇಕರ್, ಸುರೇಶ ಕಟಬುಗೋಳ, ಮಹೇಶ ಜೋಗನ್ನವರ್, ರಾಕೇಶ್ ಪಾಟೀಲ, ಅಪ್ಸರ್, ಉಳವಪ್ಪ ಮಲ್ಲಣ್ಣವರ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ರಚನಾತ್ಮಕ ಕೆಲಸಗಳ ಮೂಲಕ ನಿರಂತರ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳಿ: ಚನ್ನರಾಜ ಹಟ್ಟಿಹೊಳಿ
ಪಂತನಗರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ
ಬೆಳಗಾವಿ : ಪಂತ ಬಾಳೇಕುಂದ್ರಿ ಗ್ರಾಮದ ಶ್ರೀ ಪಂತನಗರ ರಹವಾಸಿಗಳ ಕ್ಷೇಮಾಭಿವೃದ್ಧಿ ಸಂಘವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಉದ್ಘಾಟಿಸಿದರು.
ಪಂತನಗರದ ನಿವಾಸಿಗಳು ಬಹಳಷ್ಟು ಶ್ರಮ ಜೀವಿಗಳು, ದೇಶಕ್ಕಾಗಿ ಸಾಕಷ್ಟು ತ್ಯಾಗ, ಕೊಡುಗೆ ನೀಡಿದ್ದಾರೆ. ಇಲ್ಲಿನ ಶೇ.70ಕ್ಕಿಂತ ಹೆಚ್ಚಿನ ಜನರು ನಿವೃತ್ತ ಸೈನಿಕರು, ಉಳಿದವರು ಕೂಡ ಶಿಕ್ಷಕರಾಗಿ, ಬೇರೆ ಬೇರೆ ರೀತಿಯ ಸರಕಾರಿ ಸೇವೆಯಲ್ಲಿದ್ದವರು. ಇಲ್ಲಿನ ಅಭಿವೃದ್ಧಿಗಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದು ಚನ್ನರಾಜ ಹೇಳಿದರು.
ಸುಮಾರು 2.5ಕಿಮೀ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವುದಕ್ಕಾಗಿ 50 ಲಕ್ಷ ರೂ. ಅನುದಾನ ಮಂಜೂರು ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.
ಈ ಸಂಘ ನಿಮ್ಮಲ್ಲಿರುವ ಒಗ್ಗಟ್ಟಿನ ಪ್ರತೀಕ, ಪರಸ್ಪರರ ಮೇಲಿರುವ ಕಾಳಜಿ, ಗೌರವ, ಪ್ರೀತಿ, ವಿಶ್ವಾಸದ ಸಂಕೇತ ಎಂದು ನಾನು ಭಾವಿಸುತ್ತೇನೆ. ಇಲ್ಲಿನ ಹೆಚ್ಚಿನವರು ನಿವೃತ್ತಿ ಜೀವನ ನಡೆಸುತ್ತಿರುವವರು, ಹಾಗಾಗಿ ಪ್ರತಿಯೊಬ್ಬರಿಗೂ ಬೇರೆಯವರ ಸಹಾಯ, ಸಹಕಾರ ಅಗತ್ಯ. ಈ ಸಂಘದ ಮೂಲಕ ಇಲ್ಲಿನ ಪ್ರತಿಯೊಬ್ಬರಲ್ಲಿ, ನಿಮ್ಮೊಂದಿಗೆ ನಾವಿದ್ದೇವೆ, ನಮ್ಮೊಂದಿಗೆ ನೀವಿದ್ದೀರಿ ಎನ್ನುವ ಸಂದೇಶ ಸಾರುವ ಜೊತೆಗೆ, ಎಲ್ಲರಲ್ಲಿ ಆತ್ಮ ವಿಶ್ವಾಸ ಮೂಡಿಸುವ, ಧೈರ್ಯ ತುಂಬುವ ಕೆಲಸ ಮಾಡಿದ್ದೀರಿ. ಎಲ್ಲರ ಸುರಕ್ಷತೆಯ, ಪರಸ್ಪರ ಸಾಮರಸ್ಯದ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊತ್ತಿದ್ದೀರಿ. ಒಟ್ಟಾಗಿ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ, ರಚನಾತ್ಮಕ ಕೆಲಸಗಳ ಮೂಲಕ ನಿರಂತರ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳಬಹುದು ಎಂದು ಚನ್ನರಾಜ ಹೇಳಿದರು.
ನಿಮ್ಮ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ, ಅವರಿಗೆ ಜೀವನ ವಿಧಾನ ಕಲಿಸುವ ಕೆಲಸವನ್ನು ಸಹ ಸಂಘದ ವತಿಯಿಂದ ಮಾಡಬೇಕು. ಮಕ್ಕಳಲ್ಲಿ ಜೀವನಕ್ಕೆ ಬೇಕಾದಂತಹ ಕೌಶಲ್ಯಗಳನ್ನು ಬೆಳೆಸುವಂತಹ ಕೆಲಸವನ್ನು ಸಹ ಇಲ್ಲಿ ಯೋಜಿಸಬಹುದು. ಕ್ಷಣದಿಂದ ಕ್ಷಣಕ್ಕೆ ಬೆಳೆಯುತ್ತಿರುವ, ಬದಲಾಗುತ್ತಿರುವ ಈ ಸ್ಫರ್ಧಾತ್ಮಕ ಜಗತ್ತಿನಲ್ಲಿ ನಿಮ್ಮ ಮಕ್ಕಳು ಈಜಿ ದಡ ಸೇರಬೇಕಾದರೆ ಅವರನ್ನು ಚಿಕ್ಕವರಿದ್ದಾಗಲೇ ಆ ಮಟ್ಟಿಗೆ ಸಜ್ಜುಗೊಳಿಸುವ ಕೆಲಸವನ್ನು ಸಹ ನೀವು ಯೋಚಿಸಬಹುದು. ಹಾಗೆಯೇ, ನಿವೃತ್ತರು ಸದಾ ಕ್ರಿಯಾಶೀಲರಾಗಿರುವ ದಿಸೆಯಲ್ಲಿ ಏನೆಲ್ಲ ಮಾಡಬಹುದೋ ಅದನ್ನು ಕೂಡ ಯೋಚಿಸಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂತಹ ಸಂಘಗಳಿದ್ದಾಗ ನಿಮ್ಮ ಪ್ರದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ, ಎರಡು ಕೈಗಳಿಗಿಂತ ಹತ್ತು ಕೈಗಳು ಸೇರಿದಾಗ, ನೂರು ಕೈಗಳು ಸೇರಿದಾಗ ಅದರ ಪರಿಣಾಮವೇ ಬೇರೆಯಾಗುತ್ತದೆ.
ಗಾಗಿ ಈ ಸಂಘದ ರೂವಾರಿಗಳನ್ನು ನಾನು ಅಭಿನಂದಿಸುತ್ತೇನೆ, ಎಲ್ಲರೂ ಇದಕ್ಕೆ ಸಹಕಾರ ನೀಡುವ ಮೂಲಕ ವಯಕ್ತಿಕ ಬೆಳವಣಿಗೆಗೆ, ತನ್ಮೂಲಕ ಸಂಘದ, ನಿಮ್ಮ ಪಂತ ನಗರದ ಬೆಳವಣಿಗೆಗೆ ಕಾರಣೀಕರ್ತರಾಗುತ್ತೀರಿ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಬಹಳಷ್ಟು ಅಭಿವೃದ್ಧಿ ಮಾಡಬೇಕೆಂದು ಲಕ್ಷ್ಮೀ ಹೆಬ್ಬಾಳಕರ್ ಅವರು ಕಳೆದ 7-8 ವರ್ಷಗಳಿಂದಲೂ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ.
7 ವರ್ಷದ ಹಿಂದೆ ಹೋಲಿಸಿದರೆ ಈಗ ಕ್ಷೇತ್ರದ ಚಿತ್ರಣ ಸಾಕಷ್ಟು ಬದಲಾವಣೆಯಾಗಿದೆ. ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯ ಒಂದು ಹಂತ ಬಹುತೇಕ ಮುಗಿದಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ತರುವ ಮತ್ತೊಂದು ಹಂತದ ಅಭಿವೃದ್ಧಿಯನ್ನು ಕೈಗೊಳ್ಳಲಿದ್ದಾರೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ, ಅವರು ನಿಮ್ಮೊಂದಿಗೆ ನಿಂತ ಹಾಗೆಯೇ ನೀವು ಕೂಡ ಸದಾ ಅವರೊಂದಿಗೆ, ನನ್ನ ಅಭಿವೃದ್ಧಿಯ ಕೆಲಸಗಳೊಂದಿಗೆ ನಿಲ್ಲುತ್ತೀರಿ ಎಂದು ಆಶಿಸುತ್ತೇನೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಘಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು, ಸಂಘದ ಅಧ್ಯಕ್ಷ ರಾಮಪ್ಪ ಹಟ್ಟಿ, ಉಪಾಧ್ಯಕ್ಷ ಶಂಕರಾನಂದ ಮದಿಹಳ್ಳಿ, ಸಂಘದ ಪದಾಧಿಕಾರಿಗಳು, ಮಾಜಿ ಸೈನಿಕರ ಕಲ್ಯಾಣ ಸಂಘದ ಸರ್ವ ಸದಸ್ಯರು, ಡಾ.ಎಸ್.ರಾಧಾಕೃಷ್ಣ ಗುರುಬಳಗ ಮತ್ತು ಪಂತ ನಗರದ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.