ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ಪುಂಡಾಟಿಕೆ ನಡೆಸಲು ಮುಂದಾಗಿರುವ ಎಂಇಎಸ್ ಗೆ ಬ್ರೇಕ್ ಹಾಕುವಂತೆ ಕಿತ್ತೂರು ಕರ್ನಾಟಕ ಸೇನೆಯ ಪದಾಧಿಕಾರಿಗಳು ಮಹಾದೇವ ತಳವಾರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳಿಗೆ, ಮಹಾನಗರ ಪಾಲಿಕೆ ಆಯುಕ್ತರಿಗೆ ಮತ್ತು ಮೇಯರ್ , ಉಪಮೇಯರ್ ರವರಿಗೆ ಮನವಿ ಸಲ್ಲಿಸಿದರು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿಗ 2022 ರಂತೆ ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯಾದ್ಯಂತ ಕನ್ನಡ ಕಡ್ಡಾಯ ಅನುಷ್ಠಾನ ಪ್ರಕ್ರಿಯೆ ಜೋರಾಗಿದ್ದು ಅಧಿಕಾರಿಗಳು ಅದನ್ನು ಅನುಷ್ಠಾನಗೊಳಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಎಂಇಎಸ್ ಪುಂಡರಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಅವರ ವಾಹನಗಳಿಗೆ ಕನ್ನಡ ಅಂಕಿ ಸಂಖ್ಯೆ ಮತ್ತು ಕನ್ನಡದಲ್ಲಿ ಬರೆಯಿಸಿದ್ದನ್ನು ಖಂಡಿಸಿ ಬೆಳಗಾವಿ ಮೇಯರ್ ಮಂಗೇಶ್ ಪವಾರ್ ಅವರನ್ನು ಭೇಟಿ ಮಾಡಿ ಕನ್ನಡ ಕಡ್ಡಾಯಗೊಳಿಸುವುದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿರುವ ಕೆಲ ಅಧಿಕಾರಿಗಳು ಎಂಇಎಸ್ ಪುಂಡರಿಗೆ ಮಾಹಿತಿ ನೀಡಿ ಕನ್ನಡ ಕಡ್ಡಾಯ ತಡೆಗಟ್ಟಲು ಹುನ್ನಾರ ನಡೆಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕನ್ನಡ ಕಡ್ಡಾಯ ಅನುಷ್ಠಾನ ನಿಲ್ಲಿಸಬಾರದು . ರಾಜ್ಯದ ಅಧಿಕೃತ ಭಾಷೆಯಾದ ಕನ್ನಡದಲ್ಲಿ ವ್ಯವಹರಿಸಬೇಕು ಎಲ್ಲ ಕಾರ್ಯ ಚಟುವಟಿಕೆಗಳು ಕನ್ನಡದಲ್ಲಿ ನಡೆಯಬೇಕೆಂದು ಆಗ್ರಹಿಸಿದ್ದಾರೆ.
ಕನ್ನಡ ವಿರೋಧಿ ಅನುಸರಿಸುತ್ತಿರುವ ನಾಡದ್ರೋಹಿ ಅಧಿಕಾರಿಗಳನ್ನು ಗುರುತಿಸಿ ರಾಜ್ಯದ ಬೇರೆ ಬೇರೆ ಮಹಾನಗರ ಪಾಲಿಕೆಗಳಿಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ದೇವೇಂದ್ರ ತಳವಾರ, ಸಂತೋಷ ತಳ್ಳಿಮನಿ, ಮಾರುತಿ ದೊಡ್ಡ ಲಕ್ಕಪ್ಪಗೋಳ, ಭರಮಣ್ಣಾ ಕಾಂಬಳೆ , ವಾಸು ಬಸನಾಯ್ಕರ್, ಸಿದ್ರಾಯ ನಾಯಿಕ ಇತರರು ಉಪಸ್ಥಿತರಿದ್ದರು.