ಬೆಳಗಾವಿ : ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳಿಗೆ ಬೇಸತ್ತಿರುವ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ ಅದೇ ದಿನ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರೂ ಆಶ್ಚರ್ಯ ಇಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ತಮ್ಮದೇ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದರು.
ಸೋಮವಾರ (ಜೂ.23) ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಆಳಂದ ಶಾಸಕ ಬಿ.ಆರ್.ಪಾಟೀಲ ಅವರು ಮಾಡಿದ ಭ್ರಷ್ಟಾಚಾರ ಆರೋಪ ಸತ್ಯವಿದೆ. ನನಗೂ ಅಂಥದ್ದೇ ಪರಿಸ್ಥಿತಿ ಬಂದಿದೆ. ಒಂದೂ ಕೆಲಸ ಆಗುತ್ತಿಲ್ಲ. ಇದನ್ನು ಖಂಡಿಸಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ’ ಎಂದು ಶಾಸಕ ರಾಜು ಕಾಗೆ ಕಿಡಿ ಕಾರಿದರು.
ಶಾಸಕ ಬಿ.ಆರ್.ಪಾಟೀಲ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ ಮತ್ತು ಅವರಿಗಾದ ಸ್ಥಿತಿಯೇ ನನಗೂ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ 25 ಕೋಟಿ ವಿಶೇಷ ಅನುದಾನದಲ್ಲಿ ಇನ್ನೂ 13 ಕೋಟಿ ರೂ.ಗಳ ಸಮುದಾಯ ಭವನ ಕಾಮಗಾರಿಗಳ ವರ್ಕ್ ಆರ್ಡರ್ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದು, ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ಬಿಡುಗಡೆ ಮಾಡಲೂ ಹಣ ಕೇಳುತ್ತಿದ್ದಾರೆ ಎಂದು ದೂರಿದರು.
ಗುತ್ತಿಗೆದಾರರು ಗುತ್ತಿಗೆ ಪಡೆದುಕೊಂಡು ನನ್ನಿಂದ ಗುದ್ದಲಿ ಪೂಜೆ ನೆರವೇರಿಸಿ ಕೊಳ್ಳುತ್ತಾರೆ. ಆದರೆ ಒಂದು ವರ್ಷ ಕಳೆದರೂ ಕೂಡ ಕಾಮಗಾರಿ ಪ್ರಾರಂಭಿಸದೆ ಸತಾಯಿಸುತ್ತಾರೆ. ಗುತ್ತಿಗೆದಾರರ ಈ ನಡುವಳಿಕೆಯ ಪರಿಣಾಮ ಸಾರ್ವಜನಿಕರು ನನ್ನನ್ನು ಸತಾಯಿಸುತ್ತಾರೆ ಎಂದ ಅವರು ಗುತ್ತಿಗೆದಾರರ ಮೇಲೆ ಇಲಾಖೆ ಅಧಿಕಾರಿಗಳು ನಿಯಂತ್ರಣ ಹೊಂದಿರುವುದಿಲ್ಲ. ಹೀಗಾಗಿ ಗುತ್ತಿಗೆದಾರರು ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದು, ಮಳೆಗಾಲದಲ್ಲಿ ಡಾಂಬರೀಕರಣ ಮಾಡಬಾರದು. ಆದರೆ ಗುತ್ತಿಗೆದಾರರು ಉದ್ದೇಶಪೂರ್ವಕವಾಗಿಯೇ ಮಳೆಗಾಲದಲ್ಲಿ ಡಾಂಬರೀಕರಣಕ್ಕೆ ಮುಂದಾಗುತ್ತಾರೆ. ಇದರ ಪರಿಣಾಮ ಕೆಲವೇ ತಿಂಗಳಗಳಲ್ಲಿಯೇ ರಸ್ತೆಗಳು ಹದಗೆಡುತ್ತಿವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕೆಲವೇ ತಿಂಗಳ ಹಿಂದೆ ಪೂರ್ಣಗೊಂಡ ಉಗಾರ-ಶಿರಗುಪ್ಪಿ ಮಧ್ಯದ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ ಎಂದರು.
ಶಾಸಕ ರಾಜು ಕಾಗೆ ಮಂಗಸೂಳಿ ಗ್ರಾಮದಲ್ಲಿ ಅಲ್ಪ ಸಂಖ್ಯಾತ ಇಲಾಖೆಯಡಿ ಮಂಜೂರಾದ ದರ್ಗಾ ಅಭಿವೃದ್ಧಿ, ಜಲ ಜೀವನ ಮಿಶನ್ ಯೋಜನೆಯ ಪೈಪ್ ಲೈನ್, ಮಂಗಸೂಳಿ – ಅರಗ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮತ್ತು ಪಬ್ಲಿಕ್ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ್ದ 4 ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿದರು.