ಬೆಳಗಾವಿ : ಮಹಿಳೆ ಮತ್ತು ಅವರ ಮಗಳನ್ನು ಮಠದಲ್ಲಿ ರಾತ್ರಿ ಹೊತ್ತು ಉಳಿದುಕೊಳ್ಳಲು ಹೇಳಿದ್ದಾರೆ ಎಂದು ಆರೋಪಿಸಿ ಮೂಡಲಗಿ ತಾಲೂಕು ಶಿವಾಪುರ-ಹ ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿ ಅವರನ್ನು ಗ್ರಾಮದ ಕೆಲವರು ಶನಿವಾರ ರಾತ್ರಿ ಮಠದಿಂದ ಹೊರ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆ ತಾಳಿಕೋಟಿಯ ಮಹಿಳೆ ಹಾಗೂ ಅವರ 15 ವರ್ಷದ ಪುತ್ರಿ ಶನಿವಾರದಂದು ಅಡವಿ ಸಿದ್ದೇಶ್ವರ ಮಠಕ್ಕೆ ಬಂದಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಮಠದ ಒಂದು ರೂಮಿನಲ್ಲಿ ಮಲಗಿದ್ದರು. ಆಗ ಮಠಕ್ಕೆ ಬಂದ ಕೆಲವರು ತಾಯಿ ಮತ್ತು ಮಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಮಠದಲ್ಲಿರ ನಿಮಗೇನು ಕೆಲಸ ಇದೆ. ರಾತ್ರಿ ಏಕೆ ಉಳಿದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಸ್ವಾಮೀಜಿ ಅವರನ್ನು ತರಾಟೆ ತೆಗೆದುಕೊಂಡರು. ಇದು ಅಕ್ರಮ ಸಂಬಂಧ ಎಂದು ಆರೋಪಿಸಿದರು.
ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್ಐ ರಾಜು ಪೂಜೇರಿ ಮಠಕ್ಕೆ ಭೇಟಿ ನೀಡಿದರು. ಜನರನ್ನು ಸ್ಥಳದಿಂದ ಕಳುಹಿಸಿ ಮಹಿಳೆ ಹಾಗೂ ಮಗಳನ್ನು ಮೂಡಲಗಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸೇರಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಡವಿಸಿದ್ದರಾಮ ಸ್ವಾಮೀಜಿ, ಗ್ರಾಮದ ಕೆಲವರು ನನ್ನ ಮೇಲೆ ಹುನ್ನಾರ ನಡೆಸಿದ್ದಾರೆ. ಮಹಿಳೆ ಹಾಗೂ ಅವರ ಪುತ್ರಿ ಮಾತ್ರವಲ್ಲ. ಅವರು ಕುಟುಂಬದವರೆಲ್ಲ 15 ವರ್ಷಗಳಿಂದ ನಮ್ಮ ಭಕ್ತರು. ನಾನು ಅಂಕಲಗಿ ಮಠದಲ್ಲಿ ಇದ್ದಾಗಲೂ ಬರುತ್ತಿದ್ದರು. ಈಗ ಶಿವಾಪುರಕ್ಕೂ ಬರುತ್ತಾರೆ. ಶನಿವಾರ ಸಂಜೆಯಾಗಿದ್ದರಿಂದ ದೂರದ ತಾಳಿಕೋಟೆಗೆ ಹೋಗಲು ಸಾಧ್ಯವಿರಲಿಲ್ಲ. ಆದ್ದರಿಂದ ಮಠದಲ್ಲಿ ವಸತಿಗೆ ಅವಕಾಶ ನೀಡಿದೆ. ರಾತ್ರಿ ಪ್ರಸಾದ ಮುಗಿಸಿ ಅವರು ಕೋಣೆಗೆ ಮಲಗಲು ಹೋದರು. ಅಷ್ಟರೊಳಗೆ ಒಂದು ಗುಂಪು ಹಲ್ಲೆ ಮಾಡಿದೆ. ಮಠದ ಅಭಿವೃದ್ಧಿ ಸಹಿಸದೇ ನನ್ನನ್ನು ಊರು ಬಿಡಿಸುವ ಹುನ್ನಾರ ನಡೆಸಿದ್ದಾರೆ. ನನ್ನ ಮೇಲಿನ ದ್ವೇಷಕ್ಕೆ ಮಹಿಳೆಗೆ ಅನ್ಯಾಯ ಮಾಡಬಾರದು. ನನ್ನ ತಪ್ಪು ಕಂಡುಬಂದರೆ ಶಿಕ್ಷೆ ಅನುಭವಿಸುತ್ತೇನೆ. ಆರೋಪ ಮಾಡಿದವರು ಸಾಕ್ಷಿ ನೀಡಬೇಕು ಎಂದು ಆಗ್ರಹಿಸಿದರು.