ಖಾನಾಪುರ : ಬಡಜನರು ಮತ್ತು ದುರ್ಬಲರು ಹಸಿವಿನಿಂದ ಇರಬಾರದು ಮತ್ತು ಸರಕಾರದ ಯೋಜನೆಗಳ ಲಾಭ ನೇರವಾಗಿ ತಲುಪಬೇಕು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಖಾನಾಪುರ ನಗರದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕ್ಯಾಂಟೀನ್ ನಲ್ಲಿ ತಯಾರಿಸಿದ ಆಹಾರ ಪದಾರ್ಥಗಳ ಗುಣಮಟ್ಟತೆ ಹಾಗೂ ರುಚಿಯ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ದುಡಿಯುವ ವರ್ಗಕ್ಕೆ ಕೈಗೆಟುಕುವ ದರದಲ್ಲಿ, ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸುವ ಕಾಂಗ್ರೆಸ್ ಸರಕಾರದ ಸಂಕಲ್ಪವೇ ಇಂದಿರಾ ಕ್ಯಾಂಟೀನ್. ಕಡಿಮೆ ದರದಲ್ಲಿ ಊಟ ಮತ್ತು ಉಪಹಾರವನ್ನು ಒದಗಿಸುವ ಮೂಲಕ ಬಡವರಿಗೆ ಮತ್ತು ಕಾರ್ಮಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರದ ಯೋಜನೆಗಳ ಲಾಭವು ನೇರವಾಗಿ ಬಡವರಿಗೆ ತಲುಪಬೇಕು ಎಂಬುದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಧ್ಯೇಯವಾಗಿತ್ತು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಲ್ಯದಲ್ಲಿ ತಾವು ಅನುಭವಿಸಿದ ಹಸಿವಿನ ಸಂಕಟವನ್ನು ಗಮನದಲ್ಲಿಟ್ಟುಕೊಂಡು ಬಡಜನರು ಮತ್ತು ದುರ್ಬಲರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಸ್ಥಾಪಿಸಿದರು ಎಂದು ಚನ್ನರಾಡಜ ಹೇಳಿದರು.
ಆಯಾ ಕ್ಯಾಂಟೀನ್ಗಳಲ್ಲಿ ಎಷ್ಟು ಊಟ ಲಭ್ಯವಿದೆ ಎನ್ನುವ ಮಾಹಿತಿ ಡಿಸ್ಪ್ಲೇ ಬೋರ್ಡ್ನಲ್ಲಿ ಪ್ರಕಟಿಸಬೇಕಾಗುತ್ತದೆ. ಪ್ರತಿ ಕ್ಯಾಂಟೀನ್ನಲ್ಲೂ ಆಹಾರದ ಸುರಕ್ಷತೆಗಾಗಿ ಆರೋಗ್ಯಾಧಿಕಾರಿಗಳನ್ನು ನೇಮಿಸುವುದರ ಜೊತೆಗೆ ಕ್ಯಾಂಟೀನ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಒಂದು ಕ್ಯಾಂಟೀನ್ನಲ್ಲಿ ದಿನವೊಂದಕ್ಕೆ ಸುಮಾರು 500ಕ್ಕೂ ಹೆಚ್ಚು ಜನರಿಗೆ ಊಟ ಮತ್ತು ಉಪಹಾರ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಇಂದಿರಾ ಕ್ಯಾಂಟೀನ್ ಸರಕಾರದ ನಿಜವಾದ ಉದ್ದೇಶವನ್ನು ಸಾಧಿಸಲಿ, ಬಡವರಿಗೆ ಹೆಚ್ಚಿನ ಪ್ರಮಾಣದಲ್ಲಿ ಇದರ ಲಾಭ ದೊರಕಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
ಶಾಸಕ ವಿಠ್ಠಲ ಹಲಗೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.