ಬೈಂದೂರು : ಜನ ಸಾಮಾನ್ಯರ ದೃಷ್ಟಿಯಿಂದ ಕಾರ್ಯಕ್ರಮ ರೂಪಿಸಿ ಬದ್ದತೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೈಂದೂರು ವಿಧಾನ ಸಭಾ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರಗಳ ವಿತರಣೆ ಮತ್ತು ವಿವಿಧ ಸರ್ಕಾರಿ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯ ಅಭಿವೃದ್ಧಿ ಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಕ್ಷೇತ್ರದ ಅಭಿವೃದ್ಧಿ ಗೆ ಎಲ್ಲರೂ ಕೈಜೋಡಿಸೋಣ ಎಂದರು.
ಬೈಂದೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಗೋಪಾಲ್ ಪೂಜಾರಿ ಹಾಗೂ ಶಾಸಕ ಗುರುರಾಜ್ ಗಂಟಿಹೊಳೆ ಇಬ್ಬರು ಕ್ಷೇತ್ರದ ದೃಷ್ಟಿಯಿಂದ ಯಾವುದೇ ರಾಜಕೀಯ ಇಲ್ಲದೆ, ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದು ರಾಜಕಾರಣಿಗಳಿಗೆ ಬೇಕಿರುವ ಬದ್ಧತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಉಡುಪಿ ಜಿಲ್ಲೆ ಬುದ್ದಿವಂತರ, ಸಂವೇದನಾ ಶೀಲತೆ ಹೊಂದಿರುವ ಜಿಲ್ಲೆ. ಅಧಿಕಾರಿಗಳು ಉಡುಪಿ ಜಿಲ್ಲೆಗೆ ಕೆಲಸ ಮಾಡಲು ಬರಬೇಕು ಅಂದರೆ ಎರಡ್ಮೂರು ಬಾರಿ ಯೋಚನೆ ಮಾಡುತ್ತಾರೆ.ಉಡುಪಿ ಜಿಲ್ಲಾ ಉಸ್ತುವಾರಿ ನನಗೆ ಸಿಕ್ಕಿದ್ದು, ಶ್ರೀಕೃಷ್ಣ ನ ಆಶೀರ್ವಾದ ಸಿಕ್ಕಂತಾಯಿತು.ಇದು ನನ್ನ ಸೌಭಾಗ್ಯ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್, ಬಡವರಿಗೆ ಕಡಿಮೆ ದುಡ್ಡಿನಲ್ಲಿ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಈ ಕ್ಯಾಂಟೀನ್ ಆರಂಭಿಸಲಾಯಿತು. ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಮಧ್ಯಾಹ್ನದ ಊಟ, ಇಷ್ಟು ಕಡಿಮೆ ದುಡ್ಡಿನ ಲ್ಲಿ ಹೊಟ್ಟೆ ತುಂಬಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯನವರ ಅಂದಿನ ಸರ್ಕಾರದಲ್ಲಿ ಅಕ್ರಮ ಸಕ್ರಮ ಜಾರಿಗೆ ತಂದು, ಜನರಿಗೆ ಹತ್ತಿರ ಆಗುವಂತ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಸಿಕ್ಕಂತ ಅವಕಾಶಗಳನ್ನು ಸೂಕ್ತ ವಾಗಿ ಬಳಸಿಕೊಂಡಿದ್ದೇವೆ. ರಾಜಕೀಯ ಅಷ್ಟು ಸುಲಭವಲ್ಕ, ಜನಸೇವೆಯೇ ಜನಾರ್ದನನ ಸೇವೆ ಅಂದುಕೊಂಡಿದ್ದೇವೆ, ವೈಯಕ್ತಿಕ ಕೆಲಸವನ್ನು ಪಕ್ಕಕ್ಕಿಟ್ಟು ಮಾಡುತ್ತಿದ್ದೇವೆ. ಜನ ಪ್ರತಿನಿಧಿಗಳು ಜವಾಬ್ದಾರಿ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಅಂಗನವಾಡಿ ಆರಂಭಗೊಂಡು ಐವತ್ತು ವರ್ಷಗಳಾಯಿತು,ಇಂದಿರಾ ಗಾಂಧಿಯವರು ಶುರು ಮಾಡಿದರು, ಇದೇ ಅಕ್ಟೋಬರ್ ಎರಡನೇ ತಾರೀಖು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲಾಗುವುದು ಎಂದರು.
ಕ್ಯಾಂಟೀನ್ ಉದ್ಘಾಟಿಸಿ ವಾಪಸ್ ತೆರಳುವ ವೇಳೆ ಸ್ವಾಗತಿಸಲು ಸಾಲಾಗಿ ನಿಂತಿದ್ದ ವಿದ್ಯಾರ್ಥಿಗಳನ್ನು ಕಂಡ ಸಚಿವರು, ಮತ್ತೆ ಕಾರಿನಿಂದ ಕೆಳಗಿಳಿದು ಕ್ಯಾಂಟೀನ್ ಒಳಗೆ ಕರೆದೊಯ್ದು ಊಟ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಕಾರಿನಲ್ಲಿ ಕುಳಿತಾಗ ಸಚಿವರೊಂದಿಗೆ ಸೆಲ್ಫಿ ಕ್ಲಿಕಿಸಿಕೊಳ್ಳಲು ಬಂದಾಗ, ಬನ್ನಿ ಕ್ಯಾಂಟೀನ್ ನಲ್ಲಿ ತಿಂಡಿ ತಿನ್ನಿ ಎಂದು ವಿದ್ಯಾರ್ಥಿನಿಯರನ್ನು ಕೈಹಿಡಿದು ಒಳಗೆ ಕರೆದುಕೊಂಡು ಬಂದರು.
ಸಮಾರಂಭದಲ್ಲಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಮಾಜಿ ಶಾಸಕ ಗೋಪಾಲ್ ಪೂಜಾರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು,ಉದಯ್ ಕುಮಾರ್ ಶೆಟ್ಟಿ, ನಾಗರಾಜ್ ಗಾಣಿಗ, ಸದಾಶಿವ.ಡಿ, ಮೋಹನ್ ಪೂಜಾರಿ, ರಾಜು ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ, ಉಪ ವಿಭಾಗಧಿಕಾರಿ ರಶ್ಮಿ ಎಸ್.ಆರ್, ತಹಶಿಲ್ದಾರ ಪ್ರದೀಪ್ ಕುರುಡೇಕರ್, ಎಚ್.ರಾಮಚಂದ್ರಪ್ಪ, ಪಟ್ಟಣ ಪಂಚಾಯತ್ ಅಜಯ್ ಭಂಡಾರ್ಕರ್ ಉಪಸ್ಥಿತರಿದ್ದರು.
ಇಡೀ ವಿಶ್ವಕ್ಕೆ ಯೋಗ ಕಲಿಸಿದ್ದು ಭಾರತ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಯೋಗವೇ ನನ್ನ ಆರೋಗ್ಯದ ಗುಟ್ಟು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಹೇಳಿಕೆ
ಉಡುಪಿ: ಇಡೀ ವಿಶ್ವವೇ ಭಾರತದ ಆರೋಗ್ಯ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಪ್ರತಿಯೊಬ್ಬರು ಯೋಗವನ್ನು ನಿತ್ಯ ಪರಂಪರೆಯಾಗಿ ಅಳವಡಿಸಿಕೊಳ್ಳಬೇಕು, ಪ್ರತಿದಿನ ಕನಿಷ್ಠ 30 ನಿಮಿಷವಾದರೂ ಯೋಗ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಅಜ್ಜರಕಾಡುವಿನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಯೋಗದಿಂದ ಮಾತ್ರ ಮನಸ್ಸಿಗೆ ಉಲ್ಲಾಸ ಸಿಗುತ್ತದೆ ಎಂದರು.
ನಾನು ಕಳೆದ 25 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ನಾನು ದಿನಕ್ಕೆ 15 ಗಂಟೆ ಕೆಲಸ ಮಾಡುವ ಸಾಮರ್ಥ್ಯದ ಹಿಂದೆ ಯೋಗವಿದೆ. ಇದೇ ಜನವರಿ 14 ರಂದು ನನಗೆ ಅಪಘಾತ ಆಯಿತು, ಬೆನ್ನು ನೋವಿನಿಂದಾಗಿ ಇಂದು ಯೋಗ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ನಾನು ವಾರಕ್ಕೆ ಐದು ದಿನ ಯೋಗ ಮಾಡುತ್ತೇನೆ. ಇವತ್ತಿನ ಆಧುನಿಕ ಜಗತ್ತಿನಲ್ಲಿ ಯೋಗ ಬೇಕೇ ಬೇಕು. ಪ್ರತಿ ದಿನ 25 ರಿಂದ 50 ಸೂರ್ಯ ನಮಸ್ಕಾರ ಮಾಡುತ್ತಿದ್ದೆ. ಭುಜಂಗಾಸನ, ವೀರಭದ್ರಾಸನ, ಪ್ರಾಣಾಯಾಮ ನನ್ನ ಆರೋಗ್ಯದ ಗುಟ್ಟು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಉಡುಪಿ ಜಿಲ್ಲೆ ಎಸ್ಎಸ್ ಎಲ್ಸಿಯಲ್ಲಿ ಎರಡನೇ, ಪಿಯುಸಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಶೈಕ್ಷಣಿಕವಾಗಿ ಜಿಲ್ಲೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ದೇಶದ ಸಂಸ್ಕೃತಿ ಆಚಾರ, ವಿಚಾರವನ್ನು ಎಲ್ಲರೂ ಅಳವಡಿಸಿ ಕೊಳ್ಳಬೇಕು, ತಂದೆ ತಾಯಂದಿರು ನಮ್ಮ ಮಕ್ಕಳೇ ನಮಗೆ ಆಸ್ತಿ ಎನ್ನುತ್ತಾರೆ. ಮಕ್ಕಳು ಕೂಡ ನಮ್ಮ ತಂದೆ ತಾಯಿಯೇ ನಮ್ಮ ಆಸ್ತಿ ಎನ್ನುವಂತೆ ಆಗಲಿ ಎಂದು ಹೇಳಿದರು.
ಯೋಗವೆಂದರೆ ಕೇವಲ ವ್ಯಾಯಾಮ, ಪ್ರಾಣಾಯಾಮ ಮಾತ್ರ ಅಲ್ಲ, ಅದೊಂದು ಆರೋಗ್ಯಕರ ಜೀವನದ ವಿಧಾನ, ಯೋಗವಿದ್ದಲ್ಲಿ ರೋಗವಿಲ್ಲ, ಯೋಗವೇ ಭೋಗವಾದರೆ ಮನುಷ್ಯನ ಎಲ್ಲಾ ಚಟುವಟಿಕೆಗಳು ಸ್ವಾಭಿಮಾನದ ಸ್ವಾತಂತ್ರ್ಯವನ್ನು ಗಳಿಸುತ್ತದೆ. ನಮ್ಮ ಪ್ರಧಾನಿ ಮೋದಿ ಅವರು ಇಡೀ ವಿಶ್ವಕ್ಕೆ ಯೋಗದ ಮಹತ್ವದ ಬಗ್ಗೆ ಹೇಳಿಕೊಟ್ಟರು ಎಂದರು.
ಈ ವೇಳೆ ಶಾಸಕ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಪ್ರವಾಸ್ ರಾಜ್ ಕಾಂಚನ್, ರಮೇಶ್ ಕಾಂಚನ್, ಜಿಲ್ಲಾಧಿಕಾರಿ ಸ್ವರೂಪ. ಟಿ.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಡಿಎಫ್ ಒ ಗಣಪತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ, ಕ್ರೀಡಾ ಇಲಾಖೆ ಉಪ ನಿರ್ದೇಶಕ ರೋಷನ್ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಸಕ ಸುನೀಲ್ ಕುಮಾರ್ ಅವರಿಂದ ನೈತಿಕ ಪಾಠ ಕಲಿಬೇಕಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು
ಉಡುಪಿ: ಶಾಸಕ ಸುನೀಲ್ ಕುಮಾರ್ ಅವರಿಂದ ನೈತಿಕ ಪಾಠ ಕಲಿಯಬೇಕಿಲ್ಲ. ನೈತಿಕ ಅಧಿಕಾರ ಎಂದರೇನು?. ಅವರು ಮೊದಲು ನೈತಿಕತೆಯ ಬಗ್ಗೆ ತಿಳಿದುಕೊಂಡು ಮಾತನಾಡಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು ನೀಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಬಗ್ಗೆ ಮಾತನಾಡುವ ಸಚಿವರಿಗೆ ನೈತಿಕತೆ ಇಲ್ಲ ಎಂಬ ಸುನೀಲ್ ಕುಮಾರ್ ಅವರ ಆರೋಪಕ್ಕೆ ಶನಿವಾರ ಪ್ರತಿಕ್ರಿಯಿಸಿದ ಸಚಿವರು, ಉಸ್ತುವಾರಿ ಸಚಿವೆಗೆ ನೈತಿಕತೆ ಇಲ್ಲ ಅಂದರೆ ಏನು. ಸುನೀಲ್ ಕುಮಾರ್ ಬಹಳ ಚಂದ ಮಾತುಗಾರರು, ಅವರನ್ನು ಅವರೇ ಬುದ್ಧಿವಂತ, ಸರ್ವಜ್ಞ ಎಂದು ತಿಳಿದುಕೊಂಡಿದ್ದಾರೆ. ಬೇರೆಯವರನ್ನು ದಡ್ಡರು ಎಂದು ತಿಳಿದುಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ಸಚಿವರು ತಮ್ಮ ಇಲಾಖೆ ವ್ಯಾಪ್ತಿಗೆ
ಎಷ್ಟು ಅಂಗನವಾಡಿಗಳಿವೆ ಲೆಕ್ಕ ಕೊಡಿ ಎಂದು ಸುನೀಲ್ ಕುಮಾರ್ ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಸುಮಾರು 69,000 ಅಂಗನವಾಡಿ ಕಟ್ಟಡ ಇದೆ, 12,000 ಕಟ್ಟಡ ಬಾಡಿಗೆಯಲ್ಲಿದೆ. ಸುನೀಲ್ ಕುಮಾರ್ ಬಗ್ಗೆ ನಾನು ಎಲ್ಲಾ ಮಾತನಾಡಬೇಕಾ?. ನನ್ನ ಇಲಾಖೆ ಬಗ್ಗೆ ಕೇಳ್ತೀರಾ? ಬನ್ನಿ ನಿಮಗೆ ನಾನು ಎಲ್ಲಾ ಡೀಟೇಲ್ಸ್ ಕೊಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸವಾಲು ಹಾಕಿದರು.
ರಾಜ್ಯದಲ್ಲಿ ಅಂಗನವಾಡಿಗಳು ಎಷ್ಟಿವೆ. ಕಾರ್ಯಕರ್ತರು ಎಷ್ಟಿದ್ದಾರೆ ಎಲ್ಲಾ ನನಗೆ ಗೊತ್ತು. ಬಾಡಿಗೆ ಕಟ್ಟಡ ಎಷ್ಟು? ಸ್ವಂತ ಕಟ್ಟಡ ಎಷ್ಟು? ಹಳ್ಳಿಯಲ್ಲಿ ಎಷ್ಟಿದೆ! ಪೇಟೆಯಲ್ಲಿ ಎಷ್ಟಿದೆ ಎಷ್ಟು ಸೋರುತ್ತಿದೆ ಎಲ್ಲವೂ ಗೊತ್ತು. ನಿಮ್ಮ ಕ್ಷೇತ್ರದಲ್ಲಿ ಎಷ್ಟು ಇದೆ ಅನ್ನೋದು ಗೊತ್ತು ಎಂದರು.
ಪ್ರತಿಭಟನೆಗೆ ಪ್ರಾಮುಖ್ಯತೆ ಇದೆ, ವಿರೋಧ ಪಕ್ಷಕ್ಕೆ ಮಾಡಲು ಬೇರೆ ಕೆಲಸ ಇಲ್ಲ ಪ್ರತಿಭಟನೆ ಮಾಡಲಿ, ಜಿ ಎಸ್ ಟಿ ತರಲು ಆಗಿಲ್ಲ. ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಅದರ ವಿರುದ್ಧ ಪ್ರತಿಭಟನೆ ಮಾಡಲಿ, ಅಸಮರ್ಥ ಸಂಸದರ ಬಗ್ಗೆ ಪ್ರತಿಭಟನೆ ಮಾಡಲಿ ಎಂದರು.
ನರೇಗಾ ಹಣ ಬಿಡುಗಡೆಯಾಗಿಲ್ಲ, ಅದರ ಬಗ್ಗೆ ಪ್ರತಿಭಟನೆ ಮಾಡಲು ಸಾಧ್ಯವೇ, ಜನರ ದಿಕ್ಕು ತಪ್ಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಪಕ್ಷದ ಆಂತರಿಕ ಕಚ್ಚಾಟಗಳನ್ನು ಮುಚ್ಚಿಹಾಕಲು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಬಿಜೆಪಿಯ ಡ್ರಾಮಾ. ಬಿಜೆಪಿಯ ಕಾರ್ಯಕರ್ತರೇ ಬೇಸತ್ತು ಹೋಗಿದ್ದಾರೆ. ಹೋದಲ್ಲಿ ಬಂದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಜನರ ದಿಕ್ಕು ತಪ್ಪಿಸಲು ಹೋರಾಟ, ಪ್ರತಿಭಟನೆ ಮಾಡಿ, ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು.
ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಗೆ ಬಾಗಲಕೋಟೆಗೆ ಮೂರು ತಿಂಗಳು ಬ್ಯಾನ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾವ ವಾಗ್ಮಿಗಳನ್ನು, ಭಾಷಣಕಾರರನ್ನು ನಾವು ಟಾರ್ಗೆಟ್ ಮಾಡುತ್ತಿಲ್ಲ. ಯಾವುದೇ ವಿಷಯಗಳು ವಿಷಯಧಾರಿತವಾಗಿರಬೇಕು, ವಿಷಯಾಂತರ ಆಗಬಾರದು ಎಂದರು.
ಸಮಾಜದ ಕೋಮು ಸೌಹಾರ್ದತೆ ಕೆಡಿಸಬಾರದು ಹಿತಾಸಕ್ತಿ ಕಾಪಾಡಬೇಕು. ವಿಷ ಬೀಜ ಬಿತ್ತಿ ಸಮಾಜ ಒಡೆಯಬಾರದು. ಅಂತವರ ವಿರುದ್ಧ ಕಾನೂನು ಕ್ರಮ ಆಗುತ್ತದೆ. ಶ್ರೀಕಾಂತ ಶೆಟ್ಟಿ ಹಿಂದಿನ ಭಾಷಣಗಳನ್ನು ತೆಗೆದು ನೋಡಬೇಕು. ಆಗ ಎಲ್ಲ ವಿಚಾರ ಅರಿವಾಗುತ್ತೆ ಎಂದು ಹೇಳಿದರು.