ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ವಿವಾದ ಎರಡು ದಶಕಗಳ ಹಿನ್ನೆಲೆ ಹೊಂದಿದೆ. ಮಹಾರಾಷ್ಟ್ರ ಈ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು ಸುಪ್ರೀಂಕೋರ್ಟಿನಲ್ಲಿ ತಾನೇ ಗೆಲ್ಲುವುದಾಗಿ ಕಾಲ ಕಾಲಕ್ಕೆ ಹೇಳುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಗಡಿ ವಿವಾದ ಸಂಬಂಧ ತನ್ನ ವಾದವನ್ನು ಮತ್ತಷ್ಟು ಬಲಿಷ್ಠ ಗೊಳಿಸಲು ಸ್ವತಃ ಮಹಾರಾಷ್ಟ್ರ ಸರಕಾರವೇ ಆಸಕ್ತಿ ವಹಿಸಿರುವುದು ಗಮನಿಸಬೇಕಾದ ಸಂಗತಿಯಾಗಿದ್ದು, ಮತ್ತಷ್ಟು ಬೆಳವಣಿಗೆ ನಡೆದಿದೆ.
ಕರ್ನಾಟಕದೊಂದಿಗಿನ ಗಡಿ ಸಮಸ್ಯೆ ಪರಿಹರಿಸಲು ಮಹಾರಾಷ್ಟ್ರ ಸರ್ಕಾರ ಉನ್ನತ ಅಧಿಕಾರಿಗಳ ಸಮಿತಿಯನ್ನು ಪುನರ್ರಚಿಸಿದೆ.
ಸರ್ಕಾರಿ ನಿರ್ಣಯದ (ಜಿಆರ್) ಪ್ರಕಾರ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪಕ್ಷಾತೀತವಾಗಿ ಒಮ್ಮತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿರುವುರಿಂದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದ ಸಮಿತಿಯನ್ನು ಪುನರ್ ರಚನೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಕಾಲಕಾಲಕ್ಕೆ ಹೊಸ ಸರ್ಕಾರಗಳು ಅಧಿಕಾರ ವಹಿಸಿಕೊಂಡ ಬಳಿಕ ಸಮಿತಿಯನ್ನು ಪುನರ್ ರಚನೆ ಮಾಡಲಾಗುತ್ತದೆ. 2022ರಲ್ಲಿ ಮಹಾಯುತಿ ಮೈತ್ರಿಕೂಟವು ಏಕನಾಥ ಶಿಂಧೆ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದಾಗ ಸಮಿತಿ ಪುನರ್ ರಚನೆ ಮಾಡಲಾಗಿತ್ತು.
ಈಗ, ಹೊಸ ಸರ್ಕಾರ ರಚನೆಯಾದ ಬಳಿಕ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ನೇತೃತ್ವದಲ್ಲಿ ಸಮಿತಿಯನ್ನು ಪುನರ್ ರಚನೆ ಮಾಡಲಾಗಿದೆ. 18 ಸದಸ್ಯರ ಸಮಿತಿ ಇದಾಗಿದೆ. ಇದರಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು, ಮಾಜಿ ಸಿಎಂ ನಾರಾಯಣ ರಾಣೆ, ಶರದ್ ಪವಾರ್ ಮತ್ತು ಪೃಥ್ವಿರಾಜ ಚೌಹಾಣ್ ಸೇರಿ ಹಲವರು ಇರಲಿದ್ದಾರೆ.
ಬೆಳಗಾವಿ, ನಿಪ್ಪಾಣಿ, ಖಾನಾಪುರ ಸೇರಿದಂತೆ ಕರ್ನಾಟಕದ ಪ್ರಮುಖ ನಗರ ಹಾಗೂ ಪಟ್ಟಣಗಳ ಮೇಲೆ ಮಹಾರಾಷ್ಟ್ರ ತನ್ನ ಹಕ್ಕನ್ನು ಪ್ರತಿಪಾದಿಸುತ್ತಾ ಬಂದಿದೆ. ಆದರೆ, ಕರ್ನಾಟಕ ಸರಕಾರ ಮಾತ್ರ ಮಹಾಜನ್ ವರದಿಯೇ ಅಂತಿಮ ಎಂದು ತನ್ನ ನಿಲುವನ್ನು ಗಟ್ಟಿಯಾಗಿ ಉಚ್ಚರಿಸುತ್ತ ಬಂದಿದೆ.