ಮೂಡಲಗಿ: ಉತ್ತರಾಖಂಡದ ಬದ್ರಿನಾಥ, ಗುಜರಾತನ ದ್ವಾರಕಾನಾಥ, ಒರಿಸ್ಸಾದ ಪುರಿ ಜಗನ್ನಾಥ, ತಮಿಳುನಾಡು, ರಾಮೇಶ್ವರಂ ಈ ನಾಲ್ಕು ಮಂದಿರುಗಳು ಭಾರತೀಯರ ಚಾರ್ ಧಾಮ್ ಯಾತ್ರಾ ಸ್ಥಳಗಳಾಗಿ ಪ್ರಖ್ಯಾತಿ ಹೊಂದಿವೆ. ಅವುಗಳಲ್ಲಿ ಉತ್ತರಾಖಂಡ ರಾಜ್ಯದ ಹಿಮಾಲಯದ ಮಡಿಲಲ್ಲಿ ನೆಲೆಗೊಂಡಿರುವ ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿರುವ, ಭಗವಾನ್ ಮಹಾವಿಷ್ಣುವಿನ ನಾಲ್ಕನೇ ನಿವಾಸ ಎಂದು ಕರೆಯಲ್ಪಡುವ ವಿಶ್ವಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಬದ್ರಿನಾಥ ದೇವಾಲಯಕ್ಕೆ ಮಂಗಳವಾರ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಮ್ಮ ಧರ್ಮಪತ್ನಿಯೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಸರ್ವ ಜನರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಬದ್ರಿನಾಥ ಯಾತ್ರೆ ಗಿರಿ ಪ್ರದೇಶಗಳ ಅತ್ಯಂತ ಕಡಿದಾದ ರಸ್ತೆಯಲ್ಲಿ ಕಷ್ಟದಾಯಕ ಪ್ರಯಾಣವಾಗಿದ್ದರೂ ಕೂಡಾ ಆಗಾಗ ಭೂಕುಸಿತಗಳು ಸಂಭವಿಸಿ ರಸ್ತೆ ಮಾರ್ಗಗಳು ನಿರ್ಬಂಧಿತವಾಗಬಹುದು ಮತ್ತು ಹೆಲಿಕ್ಯಾಪ್ಟರ್ ಮೂಲಕ ಪ್ರಯಾಣಿಸುವಾಗ ಹವಾಮಾನ ವೈಪರೀತ್ಯದಿಂದಾಗಿ ಅನೇಕ ಅವಘಡಗಳು ಕೂಡಾ ಸಂಭವಿಸುತ್ತವೆ. ಆದರೂ ಕೂಡ ಭಾರತೀಯ ಜನರು ತಮ್ಮ ನಂಬಿಕೆ ಶ್ರದ್ದೆಯ ಮೂಲಕ ಬದ್ರಿನಾಥ ದೇವಾಲಯಕ್ಕೆ ಭೇಟಿ ಕೊಡುವುದು ಹೆಚ್ಚಾಗುತ್ತಲಿದೆ. ಇದು ನಮ್ಮ ಜನ ದೇವರುಗಳ ಮೇಲೆ ಇಟ್ಟಿರುವ ನಂಬಿಕೆ ಶ್ರದ್ದಾ ಭಕ್ತಿಯ ಸಂಕೇತವಾಗಿದೆ.
ಬದ್ರಿನಾಥ ದೇವಸ್ಥಾನಕ್ಕೆ ಮಂಗಳವಾರ ಭೇಟಿ ಕೊಡುವ ಮೂಲಕ ನಾಡಿನ ಜನತೆಗೆ ಒಳತಾಗಲಿ ಎಂದು ಪ್ರಾರ್ಥಿಸುವ ಸದವಕಾಶ ನನ್ನದಾಗಿತ್ತು ಎಂದು ಸಂಸದ ಈರಣ್ಣ ಕಡಾಡಿ ಅವರು ತಮ್ಮ ಪ್ರವಾಸದ ಸಂತಸವನ್ನು ಹಂಚಿಕೊಂಡಿದ್ದಾರೆ.
ವಿಶ್ವ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ ಈರಣ್ಣ ಕಡಾಡಿ ದಂಪತಿ
