ಬೆಳಗಾವಿ: ಬೆಳಗಾವಿಯಲ್ಲಿ ಎಂಬಿಬಿಎಸ್ ಓದಿದ್ದ ಡಾ.ಪ್ರತೀಕ್ ಜೋಶಿ ಮೃತಪಟ್ಟಿದ್ದಾರೆ.
2000 ದಿಂದ 2005 ಇಸವಿ ವರೆಗೆ ಬೆಳಗಾವಿಯಲ್ಲಿ ಡಾ. ಪ್ರತೀಕ್ ಜೋಶಿ ಅವರು ಎಂಬಿಬಿಎಸ್ ಓದಿದ್ದರು. ಸದ್ಯ ಅವರು ರಾಜಸ್ಥಾನದ ಬಾನವಲ್ ನಿವಾಸಿಯಾಗಿದ್ದರು. ಸೆಪ್ಟೆಂಬರ್ ನಲ್ಲಿ ಬೆಳಗಾವಿಗೆ ಬರುವ ಯೋಜನೆ ಹಾಕಿಕೊಂಡಿದ್ದು ಆಗ ಬರುವೆ ಎಂದು ಅವರು ತಮ್ಮ ಆಪ್ತರಿಗೂ ತಿಳಿಸಿದ್ದರು. ಆದರೆ ಅಷ್ಟರಲ್ಲೇ ಅವರು ಇದೀಗ ಅಹಮದಬಾದ್ ವಿಮಾನ ದುರಂತದಲ್ಲಿ ದುರ್ಮರಣ ಹೊಂದಿದ್ದಾರೆ.
ಸಹಪಾಠಿಗಳು ಹೇಳುವುದೇನು ?
ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬೆಳಗಾವಿ ಕೆಎಲ್ಇ ಹಳೇ ವಿದ್ಯಾರ್ಥಿಯಾಗಿದ್ದ ಪ್ರತೀಕ್ ಜೋಶಿ ಇಡೀ ಕುಟುಂಬ ಜೀವಬಿಟ್ಟಿದ್ದಾರೆ.
ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೂವರು ಮಕ್ಕಳ ಸಮೇತ ವೈದ್ಯ ದಂಪತಿ ದಾರುಣ ಅಂತ್ಯ ಕಂಡಿದ್ದಾರೆ. ರಾಜಸ್ಥಾನ ಮೂಲದ ಡಾ. ಪ್ರತೀಕ್ ಜೋಶಿ, ಪತ್ನಿ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನೂ, ಡಾ. ಪ್ರತೀಕ್ ಜೋಶಿ ಬೆಳಗಾವಿ ಕೆಎಲ್ಇ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು. 2000ದಿಂದ 2005ನೇ ಬ್ಯಾಚ್ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದರು.
ಪ್ರತೀಕ್ ದಾರುಣ ಅಂತ್ಯದ ಬಗ್ಗೆ ಕೆಎಲ್ಇ ಪ್ರಾಚಾರ್ಯೆ ಡಾ. ನಿರಂಜನಾ ಮಹಾಂತ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಪ್ರತೀಕ್ ಜೋಶಿ ಒಳ್ಳೆಯ ವಿದ್ಯಾರ್ಥಿ ಆಗಿದ್ದ. ಎಲ್ಲರ ಜೊತೆಗೂ ಬೆರೆಯುವ ಗುಣವನ್ನು ಪ್ರತೀಕ್ ಜೋಶಿ ಹೊಂದಿದ್ದ. ರಾಜಸ್ಥಾನ ಮೂಲದ ಡಾ. ಪ್ರತೀಕ್ ಬೆಳಗಾವಿಯ ಕೆಎಲ್ಇಯಲ್ಲಿ ಎಂಬಿಬಿಎಸ್ ಮಾಡಿದ್ದ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದ. ಜೀವನ ಕಟ್ಟಿಕೊಳ್ಳಲು ಕುಟುಂಬ ಸಮೇತ ಲಂಡನ್ಗೆ ಹೋಗುತ್ತಿದ್ದ. ನನ್ನ ವಿದ್ಯಾರ್ಥಿ ದಾರುಣ ಅಂತ್ಯ ಕಂಡಿದ್ದು ನಿಜಕ್ಕೂ ಬೇಸರ ತರಿಸಿದೆ. ಅವರ ಕುಟುಂಬಕ್ಕೆ ದೇವರು ಧೈರ್ಯ ನೀಡಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಸ್ನೇಹಿತನ ಕುಟುಂಬ ಮೃತಪಟ್ಟಿದ್ದಕ್ಕೆ ಪ್ರತೀಕ್ ಸ್ನೇಹಿತರಾದ ಡಾ. ಜ್ಯೋತಿ ಬೆಣ್ಣಿ, ಡಾ. ಮಾನ್ಸಿ ಗೋಸಾವಿ ಬೇಸರ ಹೊರ ಹಾಕಿದ್ದಾರೆ. ನನ್ನ ಬೆಂಚ್ ಪಕ್ಕವೇ ಕುಳಿತುಕೊಳ್ಳುತ್ತಿದ್ದ ಎಂದು ನೆನಪು ಮಾಡಿಕೊಂಡಿದ್ದಾರೆ. ಇದೇ ಸೆಪ್ಟೆಂಬರ್ನಲ್ಲಿ ನಮ್ಮ ಬ್ಯಾಚ್ನ ಬೆಳ್ಳಿ ಮಹೋತ್ಸವ ನಿಗದಿ ಆಗಿತ್ತು. ಆ ಕಾರ್ಯಕ್ರಮಕ್ಕೆ ಬರುವುದಾಗಿ ಕೂಡ ಡಾ. ಪ್ರತೀಕ್ ಜೋಶಿ ಹೇಳಿದ್ದರಂತೆ. ವಾಟ್ಸಪ್ ಗ್ರೂಪಿನಲ್ಲಿ ಪ್ರತೀಕ್ ಜೋಶಿ ನಿರಂತರ ಸಂಪರ್ಕದಲ್ಲಿದ್ದ. ಉತ್ತರ ಭಾರತದ ಪ್ರತೀಕ್ ನಮ್ಮ ಜೊತೆಗೆ ಬರೆಯುವ ಗುಣ ಹೊಂದಿದ್ದ. ಪ್ರತೀಕ್ ಇಲ್ಲದೇ ನಾವು ಬೆಳ್ಳಿ ಮಹೋತ್ಸವ ಮಾಡಬೇಕಿರುವುದು ಬೇಸರದ ಸಂಗತಿ ಎಂದು ಸಹಪಾಠಿಗಳು ಬೇರಸ ಹೊರ ಹಾಕಿದ್ದಾರೆ.