ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೂ ಸಹಾ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ಮತ್ತು ಬಾಳೆ ಹಣ್ಣು ವಿತರಿಸಲು ಸರಕಾರ ತೀರ್ಮಾನಿಸಿದೆ.
ಕಳೆದ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಬಾಳೆಹಣ್ಣು/ಚಿಕ್ಕಿ ವಿತರಿಸಲಾಗುತ್ತಿತ್ತು. ಆದರೆ ಅಜೀಂ ಪ್ರೇಮ್ ಜೀ ಪ್ರತಿಷ್ಠಾನ ಮೂರು ವರ್ಷಗಳ ಅವಧಿಗೆ ವಾರದ ಉಳಿದ ನಾಲ್ಕು ದಿನಗಳಿಗೆ ಮೊಟ್ಟೆ ನೀಡಲು 1,500 ಕೋಟಿ ರೂ.ಗಳ ಒಪ್ಪಂದವನ್ನು ಸರಕಾರದೊಂದಿಗೆ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 6 ದಿನಗಳ ಕಾಲ ಮಕ್ಕಳಿಗೆ ಪೂರಕ ಪೌಷ್ಟಿಕಾಂಶ ವಿತರಣೆ ನಡೆಯುತ್ತಿದೆ.
ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 1,98,270, ಒಂದರಿಂದ 5ನೇ ತರಗತಿ ವರೆಗೆ 23,39,133, ಹಿರಿಯ ಪ್ರಾಥಮಿಕ 14,69,809, ಪ್ರೌಢ ಶಾಲೆಗಳಲ್ಲಿ 11,54,178 ಮಕ್ಕಳು ಹೀಗೆ ಒಟ್ಟು 51,61,390 ವಿದ್ಯಾರ್ಥಿಗಳು ಪೂರಕ ಪೌಷ್ಟಿಕ ಯೋಜನೆಯ ಫಲಾನುಭವಿಗಳಿದ್ದಾರೆ.
ಪೂರಕ ಪೌಷ್ಟಿಕಾಂಶ ರೂಪದಲ್ಲಿ ಮಕ್ಕಳಿಗೆ ವಿತರಿಸುವ ಮೊಟ್ಟೆಯೂ ಉತ್ತಮ ಗುಣಮಟ್ಟ ಹೊಂದಿರಬೇಕು, ಕನಿಷ್ಠ 50 ಗ್ರಾಂ ತೂಕ ಇರಬೇಕು. ಮೊಟ್ಟೆ ಸೇವಿಸದ ಮಕ್ಕಳಿಗೆ ಪ್ರತಿದಿನ 2 ಬಾಳೆಹಣ್ಣು ನೀಡಬೇಕು. ಪ್ರತಿದಿನ ಬೆಳಗ್ಗಿನ ಪ್ರಾರ್ಥನೆ ವೇಳೆ 10 ನಿಮಿಷಗಳ ಕಾಲ ಮೊಟ್ಟೆ ಹಾಗೂ ಬಾಳೆಹಣ್ಣಿನ ಮಹತ್ವದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಂತೆ ಮುಖ್ಯ ಶಿಕ್ಷಕರಿಗೆ ಶಾಲಾ ಆಯುಕ್ತರು ಸೂಚನೆ ನೀಡಬೇಕು ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.
ಪ್ರತಿ ವಾರ ಕನಿಷ್ಠ 10 ಪೋಷಕರನ್ನು ಯಾದೃಚ್ಛಿಕೀಕರಣದ ಮೂಲಕ ಶಾಲಾ ಮುಖ್ಯಸ್ಥರು ಮಕ್ಕಳೊಂದಿಗೆ ಬಿಸಿಯೂಟ ಸೇವಿಸಲು ಆಹ್ವಾನಿಸಬೇಕು. ಈ ನಿಯಮ ತತ್ಕ್ಷಣವೇ ಜಾರಿಗೆ ಬರಬೇಕು. ಮಕ್ಕಳ ದಿನಾಚರಣೆ ದಿನದಂದು ಮಕ್ಕಳ ಪೋಷಕರನ್ನು ಮಧ್ಯಾಹ್ನದ ಊಟಕ್ಕೆ ಆಹ್ವಾನಿಸಲು ಸೂಚಿಸಲಾಗಿದೆ.
ಬೋಧನಾ ಸಮಯದಲ್ಲಿ ಶಿಕ್ಷಕರನ್ನು ಸಭೆಗೆ ಕರೆಯಬೇಡಿ:
ಶಾಲೆ ನಡೆಯುವ ಅಂದರೆ ಬೋಧನಾ ಸಮಯದಲ್ಲಿ ಶಾಲಾ ಮುಖ್ಯ ಶಿಕ್ಷಕರನ್ನು ಯಾವುದೇ ಸಭೆ- ಸಮಾರಂಭಗಳಿಗೆ ಮೇಲಧಿಕಾರಿಗಳು ಆಹ್ವಾನಿಸಕೂಡದು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಶಾಲಾ ಬೋಧನಾ ಸಮಯವನ್ನು ಹೊರತು ಪಡಿಸಿ ಮುಖ್ಯ ಶಿಕ್ಷಕರ ಸಭೆಗಳನ್ನು ಆನ್ಲೈನ್ ಮೂಲಕ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.