ಸಿಗರೇಟ್ ದುಡ್ಡು ಕೇಳಿದ್ದಕ್ಕೆ ಅಂಗಡಿಯವನ ಮೇಲೆ ಹಲ್ಲೆ; ನೋವಿನಿಂದ ಸಾವು..!
ಮೋಹನಗಾ ಜಾತ್ರೆ ಮುಗಿಸಿ ಮಧ್ಯರಾತ್ರಿ ಮದ್ಯದ ಅಮಲಿನಲ್ಲಿ ಕೊಲೆ ಮಾಡಿದ್ರಾ ಕಡೋಲಿ ಹುಡುಗರು..!
PSI ಮಂಜುನಾಥ ಅಲರ್ಟ್; ಮಧ್ಯರಾತ್ರಿ ನಾಲ್ವರು ಅರೆಸ್ಟ್..!
ಬೆಳಗಾವಿ: ಬೆಳಗಾವಿ ತಾಲೂಕಿಗೆ ಅಂಟಿಕೊಂಡಿರುವ ಗಡಿ ಗ್ರಾಮ ಮೋಹನಗಾ ಬ್ಯಾಟಿ ಜಾತ್ರೆ ಮುಗಿಸಿ ಮಧ್ಯರಾತ್ರಿ ಮರಳುತ್ತಿದ್ದ 4 ಜನ ಯುವಕರು ಸಿಗರೇಟ್ ಸೇದಿ ದುಡ್ಡು ಕೇಳಿದ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪರಿಣಾಮ ನೋವು ತಾಳಲಾರದೆ ಮಾಲಿಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ನಡೆದಿದೆ.
ಬೊಡಕೆನಟ್ಟಿ ಗ್ರಾಮದ 48 ವರ್ಷದ ಯಲ್ಲಪ್ಪ ದುರ್ಗಪ್ಪ ನಾಯಿಕ ಹಲ್ಲೆಗೊಳಗಾಗಿ ಮೃತಪಟ್ಟ ದುರ್ದೇವಿ.
ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ್ 22, ನಿಖಿಲ್ ಮಹೇಶ್ ಚೌಗಲೆ 22, ವಿವೇಕ್ ರಾಜೇಂದ್ರ ಚೌಗುಲೆ 22 ಮತ್ತು ಶ್ರೀಧರ್ ರತನ ಪಾಟಿಲ್ 21 ಈ ನಾಲ್ವರು ಹಲ್ಲೆ ಮಾಡಿದ ಆರೋಪಿಗಳು.
ಆಗಿದ್ದೇನು..?
ನಿನ್ನೆ ರಾತ್ರಿ ಮೋಹನಗಾ ಜಾತ್ರೆ ಮುಗಿಸಿ ಬರುತ್ತಿದ್ದ ಈ ನಾಲ್ವರು ಮಧ್ಯದ ಅಮಲಿನಲ್ಲಿ ಮಧ್ಯರಾತ್ರಿ ಸಿಗರೇಟ್ ಸೇದೋದಕ್ಕಾಗಿ ಬೋಡಕೆನಟ್ಟಿ ಗ್ರಾಮದಲ್ಲಿ ಬೈಕ್ ನಿಲ್ಲಿಸಿ, ಅಂಗಡಿ ಮುಚ್ಚುತ್ತಿದ್ದ ಮಾಲೀಕನನ್ನು ತಡೆದು ಸಿಗರೇಟ್ ತೆಗೆದುಕೊಂಡು ಅಲ್ಲೇ ಸೇದಿದ್ದಾರೆ. ನಂತರ ದುಡ್ಡು ಕೇಳಿದ ಅಂಗಡಿ ಮಾಲೀಕನೊಂದಿಗೆ ವಾಗ್ವಾದಕ್ಕಿಳಿದ ಸಮಯದಲ್ಲಿ ಮಾತಿನ ಚಕಮಕಿಯಲ್ಲಿ ಪರಸ್ಪರ ಒಡದಾಡಿಕೊಂಡಿದ್ದಾರೆ. ಆದರೆ ಈ ನಾಲ್ವರು ಮಾಡಿದ ಹಲ್ಲೆಗೆ ಮಾಲಿಕ ಯಲ್ಲಪ್ಪಾ ತೀವ್ರವಾಗಿ ಅಸ್ವಸ್ಥಗೊಂಡಿದ್ದ, ತಕ್ಷಣ ಆತನನ್ನು ಸ್ಥಳೀಯರು ವೈದ್ಯರಿಗೆ ತೋರಿಸಿ ಬೆಳಗಾವಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.
ಅಲರ್ಟ್ ಆದ ಪಿಎಸ್ಐ, ಮಧ್ಯರಾತ್ರಿ ಅರೆಸ್ಟ್ ಆದ ನಾಲ್ವರುಆರೋಪಿಗಳು..!
ಹಲ್ಲೆ ನಡೆದು ಅರ್ಧ ಗಂಟೆ ಒಳಗೆ ಅಂಗಡಿ ಮಾಲೀಕ ಸಾವನಪುತ್ತಿದ್ದಂತೆ ವಿಷಯ ತಿಳಿದ ತಕ್ಷಣ ಕಾಕತಿ ಪಿಎಸ್ಐ ಮಂಜುನಾಥ ನಾಯಿಕ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಎಲ್ಲಪ್ಪ ನಾಯಿಕ ಮಾಜಿ ತಾಲೂಕ ಪಂಚಾಯಿತಿ ಸದಸ್ಯ ಹಾಗೂ ಸತೀಶ ಜಾರಕಿಹೊಳಿ ಬೆಂಬಲಿಗ ನಿಂಗಪ್ಪ ನಾಯಕ ಅವರ ಸಹೋದರನಾಗಿದ್ದ.
ಯಲ್ಲಪ್ಪ ಸರಳ ಮತ್ತು ಸಜ್ಜನ ವ್ಯಕ್ತಿಯಾಗಿದ್ದರು. ಮಧ್ಯರಾತ್ರಿ ಅಂಗಡಿಗೆ ಯಾರೇ ಬಂದರೂ ಅರೇ ನಿದ್ದೆಯಲ್ಲಿ ಎದ್ದು ಸೇವೆ ಮಾಡುತ್ತಿದ್ದರು. ಈತನ ಸಾವಿನಿಂದ ಸಂಪೂರ್ಣ ಗ್ರಾಮ ಕಂಬನಿ ಮಿಡಿಯುತ್ತಿದ್ದು ಆಪ್ತರ ಬಳಗದ ಮಮ್ಮಲು ಮರುಗುತ್ತಿದೆ.


