19 ಜುಲೈ 1893 ನಂದು ಜಪಾನಿನಿಂದ ಹೊರಟ SS EMPRESS ಎನ್ನುವ ಹಡಗು ಎರಡು ವಾರಗಳ ಪ್ರಯಾಣದ ನಂತರ 25 ಜುಲೈ ನಂದು ಕೆನಡಾದ ವ್ಯಾಂಕೂವರ್ ಬಂದರನ್ನು ತಲುಪುತ್ತದೆ. ಆ ಹಡಗಿನಿಂ ಇಳಿದ ಇಬ್ಬರು ಭಾರತೀಯರು ಸ್ನೇಹಪೂರ್ವಕವಾಗಿ ಅಪ್ಪಿಕೊಂಡು ಬೀಳ್ಕೊಟ್ಟು ತಮ್ಮ ತಮ್ಮ ಗುರಿಯತ್ತ ಸಾಗುತ್ತಾರೆ. ಒಬ್ಬರ ಗುರಿ..ಭಾರತದಲ್ಲಿ ಉಕ್ಕಿನ ಕೈಗಾರಿಕೆಯನ್ನು ಸ್ಥಾಪಿಸುವ ಬಗ್ಗೆ, ಇನ್ನೊಬ್ಬರದು ಇಡೀ ವಿಶ್ವಕ್ಕೆ ಸನಾತನ ಭಾರತದ ಶ್ರೇಷ್ಠತೆಯ ಬಗ್ಗೆ ಅರಿವು ಮಾಡಿಕೊಡುವುದು. ಒಬ್ಬರು ಭಾರತೀಯ ಕೈಗಾರಿಕಾ ಪಿತಾಮಹ ಜೆಮ್ಸೆಟ್ಜಿ ಟಾಟಾರವರು, ಇನ್ನೊಬ್ಬರು ವಿಶ್ವಕ್ಕೆ ಸನಾತನ ಧರ್ಮದ ಸಾರವನ್ನು ಪಸರಿಸಲು ಹೊರಟಿದ್ದ ಸ್ವಾಮಿ ವಿವೇಕಾನಂದರು. ಪ್ರಯಾಣದ ಸಮಯದಲ್ಲಿ ಇವರಿಬ್ಬರ ನಡುವೆ ನಡೆದ ಸಂವಾದ ಮತ್ತು ಚರ್ಚೆಯಫಲವಾಗಿ ಮುಂದಿನ ಕೆಲ ವರ್ಷಗಳ ನಂತರ ಬೆಂಗಳೂರಿನಲ್ಲಿ ವೈಜ್ಞಾನಿಕಾ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಕಾರಣವಾಗುತ್ತದೆ.
ಸ್ವಾಮಿ ವಿವೇಕಾನಂದರು ವ್ಯಾಂಕೋವರಿನಿಂದ ರೈಲಿನಲ್ಲಿ ಚಿಕಾಗೋ ನಗರಕ್ಕೆ ಪ್ರಯಾಣ ಬೆಳಸುತ್ತಾರೆ. World Parliament of Religions ಎನ್ನುವ ಧಾರ್ಮಿಕ ಮಹೋತ್ಸವದಲ್ಲಿ ಭಾಗವಹಿಸುವ ಉತ್ಸಾಹ ಕಣಕಣದಲ್ಲೂ ಪುಟಿದೇಳುತ್ತಿತ್ತು. ಅಮೆರಿಕಾದಲ್ಲಿ New Religion Movement ನ ಆಯೋಜನೆಯಲ್ಲಿ ನಡೆಯುತ್ತಿದ್ದ ಒಂದು ವಿನೂತನ ಧಾರ್ಮಿಕ ಪ್ರಯೋಗವದು, ಅಮೆರಿಕದ ಅಸ್ತಿತ್ವದ 400 ವರ್ಷಗಳ ಸಂಭ್ರಮದ ಅಂಗವಾಗಿ ನಡೆಯಲಿದ್ದ ಧಾರ್ಮಿಕ ಕಾರ್ಯಕ್ರಮ. ರೋಮನ್ ಕ್ಯಾಥೋಲಿಕ್ ಧರ್ಮದ ಕಟ್ಟಳೆಗಳಿಂದ ದೂರಾಗಿ ತಮ್ಮದೇ ಆದ ಹೊಸ ಕ್ರಿಶ್ಚಿಯನ್ ಮತವನ್ನು ಸ್ಥಾಪಿಸಿದ್ದ Swedenborgian ಎನ್ನುವ ” ನೂತನ ಮತಕೂಟ ” ಇದರ ನಿರ್ವಹಣೆಯನ್ನು ವಹಿಸಿಕೊಂಡಿದ್ದರು. ವಿಶ್ವದಾದ್ಯಂತ ಹರಡಿರುವ ಎಲ್ಲಾ ಜಾತಿ, ಮತ ಮತ್ತು ಧರ್ಮಗಳನ್ನು ಮೇಳೈಸಿ ನಡೆಯಲಿದ್ದ ಈ ಸಮಾವೇಶಕ್ಕೆ ಸುಮಾರು 7000 ಧಾರ್ಮಿಕ ಗುರುಗಳನ್ನು ಆಮಂತ್ರಿಸಲಾಗಿತ್ತು.
ವ್ಯಾಂಕೂವರಿನಿಂದ ಚಿಕಾಗೋಕ್ಕೆ ಪ್ರಯಾಣಿಸುತ್ತಿರುವಾಗ ರೈಲಿನಲ್ಲಿ ಸ್ವಾಮಿ ವಿವೇಕಾನಂದರಿಗೆ ಕೇಟ್ ಸ್ಯಾನ್ಬೋರ್ನ್ ಎನ್ನುವ ಮಹಿಳೆಯ ಪರಿಚಯವಾಗುತ್ತದೆ. ಸುಮಾರು ಐವತ್ತೈದು ವರ್ಷದ ಈ ಮಹಿಳೆ ಉಪನ್ಯಾಸಕಿ, ಬರಹಗಾರ್ತಿ ಮತ್ತು ಸಮಾಜ ಸೇವಕಿ. ಮೊದಲ ನೋಟಕ್ಕೇ ವಿವೇಕಾನಂದರ ವ್ಯಕ್ತಿತ್ವಕ್ಕೆ ಮಾರುಹೋಗುತ್ತಾರೆ, ಅವರ ಭಾಷಾ ಪ್ರಾವಿಣ್ಯಕ್ಕೆ ಅಚ್ಚರಿಗೊಳ್ಳುತ್ತಾರೆ, ಜ್ಞಾನದ ಅಗಾಧತೆಗೆ ಮರುಳಾಗುತ್ತಾರೆ. ಚಿಕಾಗೋದಲ್ಲಿ ಸಮಾರಂಭ ಮುಗಿದ ಮೇಲೆ ಬೋಸ್ಟನ್ ನಗರ ಸಮೀಪದ ತಮ್ಮ ತೋಟದ ಮನೆಗೆ ಬರಲು ನಿಮಂತ್ರಣ ಕೊಟ್ಟು ತಮ್ಮ ವಿಳಾಸ ಪತ್ರವನ್ನು ಕೊಡುತ್ತಾರೆ.
ಚಿಕಾಗೋ ತಲುಪಿದ ವಿವೇಕಾನಂದರಿಗೆ ಆಘಾತಗಳ ಸರಮಾಲೆಯೇ ಕಾದಿರುತ್ತದೆ. ಮೊದಲನೆಯದು ಸಮ್ಮೇಳನವನ್ನು ಜುಲೈನಿಂದ ಸೆಪ್ಟಂಬರಿಗೆ ಮುಂದೂಡಲಾಗಿರುತ್ತದೆ, ಅಂದರೆ ಎರಡು ತಿಂಗಳುಗಳು ಅಮೆರಿಕಾದಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೆ ಅವರನ್ನು ಬೆಚ್ಚಿಬೀಳಿಸಿದ ಇನ್ನೊಂದು ವಿಷಯವೆಂದರೆ ಈ ಸಮ್ಮೇಳನದಲ್ಲಿ ಭಾಗವಹಿಸಲು ಅವರ ದೇಶದ ಪ್ರತಿಷ್ಟಿತ ಸಂಸ್ಥೆಗಳ, ವ್ಯಕ್ತಿಗಳ ಪರಿಚಯ ಮತ್ತು ಪರವಾನಗಿಯ ಪತ್ರ ಹೊಂದಿರಬೇಕು, ಇಲ್ಲದಿದ್ದರೆ ನೊಂದಣಿ ಮಾಡಿಕೊಳ್ಳುವುದಿಲ್ಲ. ಅಷ್ಟಕ್ಕೂ ನೊಂದಣಿಯ ದಿನಾಂಕವಾಗಲೇ ಮಿಗಿದು ಹೋಗಿರುತ್ತದೆ. ಇದೆಲ್ಲಕ್ಕಿಂತ ಆಘಾತಕಾರಿ ವಿಷಯವೆಂದರೆ ಸ್ವಾಮಿಗಳ ಬಳಿ ಕೆಲವೇ ದಿನಗಳಿಗಾಗುವಷ್ಟು ಹಣ ಮಾತ್ರ ಉಳಿದಿತ್ತು. ಪ್ರೇಕ್ಷಕನಾಗಿ ಸಮ್ಮೇಳನದಲ್ಲಿ ಭಾಗವಹಿಸಲಾದರೂ ಎರಡು ತಿಂಗಳು ಅಮೆರಿಕದಲ್ಲಿ ಉಳಿದು ಕೊಳ್ಳಬೇಕು, ಅಷ್ಟು ದಿನಗಳಿಗಾಗುವಷ್ಟು ಹಣವಂತೂ ಅವರ ಹತ್ತಿರ ಇರಲಿಲ್ಲ. ಚಿಕಾಗೋದಂತಹ ದುಬಾರಿ ನಗರದಲ್ಲಿರುವುದಕ್ಕಿಂತ ಬೋಸ್ಟನ್ನಿಗೆ ಹೋದರೆ ಸ್ವಲ್ಪ ಹಣ ಉಳಿಸಬಹುದೆಂಬ ಕೆಲವರ ಸಲಹೆಯಂತೆ ಅಲ್ಲಿಗೆ ಪ್ರಯಾಣ ಬೆಳಸಿದರು.
ಎಲ್ಲೆಡೆ ನಿರಾಸೆಯ ದಟ್ಟ ಮೋಡಗಳು. ವಿಶ್ವಮಟ್ಟದಲ್ಲಿ ವೇದ ಉಪನಿಷತ್ತುಗಳ, ಹಿಂದೂ ಧರ್ಮದ ಅಗಾಧತೆಯನ್ನು ಜಗತ್ತಿಗೆ ಪರಿಚಯಿಸುವ ಮಹದಾಸೆ ಅಸಾಧ್ಯವಾಗುತ್ತಿರುವುದು ಗೋಚರಿಸುತ್ತಿತ್ತು. ಮುಂದೇನು ಮಾಡುವುದು ಎನ್ನುವ ಆಘಾತದಲ್ಲಿದ್ದವರಿಗೆ ಕೇಟ್ ಸ್ಯಾನ್ಬೋರ್ನರ ನೆನಪು ಬಂತು. ಕೆಲವೇ ಘಂಟೆಗಳಲ್ಲಿ ಬೋಸ್ಟನ್ ನಗರದ ಹೊರವಲಯದಲ್ಲಿದ್ದ ಕೇಟ್ ಅವರ “Breezy Meadows” ತೋಟದ ಮನೆಯ ಮುಂದೆ ಪ್ರತ್ಯಕ್ಷರಾದರು. ಕೇಟ್ ತುಂಬಾ ಸಂತೋಷದಿಂದ ಅವರನ್ನು ಬರಮಾಡಿಕೊಂಡರು. ಹತಾಶಗೊಂಡ ಅವರ ಮುಖ ಸೋಲಿನ ಕಥೆಯನ್ನು ಹೇಳುತ್ತಿತ್ತು. ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಕಳವಳಗೊಂಡ ಕೇಟ್ ಮೊದಲು ಅವರಿಗೆ ಸ್ನಾನ, ಊಟದ ವ್ಯವಸ್ಥೆ ಮಾಡಿ, ಸ್ವಲ್ಪ ಚೇತರಿಸಿಕೊಂಡ ಮೇಲೆ ವಿವೇಕಾನಂದರಿಂದ ನಡೆದ ವಿಷಯವನ್ನು ಕೂಲಂಕುಷವಾಗಿ ತಿಳಿದುಕೊಂಡರು. ಪರಿಚಯ ಪತ್ರವಿಲ್ಲದಿದ್ದರೆ ಸಮ್ಮೇಳನದಲ್ಲಿ ಪ್ರವೇಶವಿಲ್ಲ ಎನ್ನುವುದು ಅವರಿಗೂ ಗೊತ್ತಿದ್ದ ವಿಷಯ. ಉಪನ್ಯಾಸಕಿಯಾದುದರಿಂದ ಅವರಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ಅನೇಕ ಪ್ರೊಫೆಸರುಗಳ ಪರಿಚಯವಿರುತ್ತದೆ. ಅದರಲ್ಲಿ ಗ್ರೀಕ್ ಭಾಷೆ ಕಲಿಸುತ್ತಿದ್ದ ಜಾನ್ ಹೆನ್ರಿ ರೈಟ್ ಎನ್ನುವವರು ಸಂಸ್ಕೃತ ಭಾಷೆಯನ್ನೂ ಕಲಿತಿದ್ದರು, ಹಾಗಾಗಿ ಭಾರತದ ಮತ್ತು ಭಾರತೀಯರ ಬಗ್ಗೆ ಒಳ್ಳೆಯ ಅಭಿಪ್ರಾಯವಿರುತ್ತದೆ, ವಿವೇಕಾನಂದರಿಗೆ ಪರಿಚಯ ಪತ್ರ ಇವರಿಂದ ಸಿಗಬಹುದು ಎಂದು ಲೆಕ್ಕಹಾಕಿದ ಕೇಟ್ ವಿವೇಕಾನಂದನಂದರಿಗೆ ಅವರನ್ನು ಪರಿಚಯ ಮಾಡಿಕೊಡುತ್ತಾರೆ. ವಿವೇಕಾನಂದರನ್ನು ನೋಡುತ್ತಲೇ ಪ್ರೊಫೆಸರ್ ರೈಟ್ ಅವರ ಧೀಮಂತ ವ್ಯಕ್ತಿತ್ವಕ್ಕೆ ಮಾರು ಹೋಗುತ್ತಾರೆ. ಅವರನ್ನು ಮೂರು ದಿನಗಳ ಕಾಲ ತಮ್ಮ ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ. ಆ ಅವಧಿಯಲ್ಲಿ ಕೆಲವು ಉಪನ್ಯಾಸ ಸಭೆಗಳನ್ನು ಏರ್ಪಡಿಸಿ ಬೋಸ್ಟನ್ನಿನ ಗಣ್ಯವ್ಯಕ್ತಿಗಳಿಗೆ ಆಮಂತ್ರಣ ನೀಡುತ್ತಾರೆ. ವಿವೇಕಾನಂದರಿಗಿರುವ ಭಾಷಾ ಪ್ರಾವೀಣ್ಯತೆ, ಭಾಷಣದ ಶೈಲಿ ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸುತ್ತದೆ. ಮೊಟ್ಟಮೊದಲ ಬಾರಿಗೆ ಅಲ್ಲಿನ ನಿವಾಸಿಗಳಿಗೆ ಸನಾತನ ಧರ್ಮ ತತ್ವಗಳ ಪರಿಚಯವಾಗುತ್ತದೆ
ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಆಸೆಯನ್ನು ಬಿಟ್ಟಿದ್ದ ವಿವಾಕಾನಂದರಲ್ಲಿ ಪ್ರೋತ್ಸಾಹ ತುಂಬುತ್ತಾರೆ ಪ್ರೊಫೆಸರ್ ರೈಟ್.
‘ನಿಮ್ಮಂತಹವರಿಂದ ಪರಿಚಯದ ಪತ್ರಬೇಕೇ ಅವರಿಗೆ….To ask for your credentials is like asking the Sun to state it’s right to shine…ಸೂರ್ಯನ ಪ್ರಖರತೆಗೆ ಪರವಾನಗಿ ಬೇಕೇ?’
ಎಂದು ಹೇಳುತ್ತಲೇ ಸಮ್ಮೇಳನದ ಅಧ್ಯಕ್ಷ ಜಾನ್ ಬರ್ರೋಸ್ ರವರಿಗೆ ಪರಿಚಯ ಪತ್ರ ಬರೆದು ಕೊಡುತ್ತಾರೆ. ಆ ಪತ್ರದಲ್ಲಿ…
“ವಿವೇಕಾನಂದರೊಬ್ಬರೇ ನಮ್ಮ ಎಲ್ಲಾ ಹಾರ್ವರ್ಡ್ ಪ್ರೊಫೆಸರುಗಳಿಗೆ ಸಮ. ಇವರನ್ನು ನೀವು ಸಮಾರಂಭದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರೆ, ಒಬ್ಬ ಮೇಧಾವಿಯ ಪರಿಚಯದ ಲಾಭ ನಿಮಗಾರಿಗೂ ಸಿಗದು…ಹಾಗಾದರೆ ಅದು ನಿಮ್ಮ ದುರಾದೃಷ್ಟ ”
ಎಂದು ಬರೆಯುತ್ತಾರೆ. ವಿವೇಕಾನಂದರಿಗೆ ನೀವು ಚಿಕಾಗೋಕ್ಕೆ ಹೊರಡಿ ಎಂದು ಬೀಳ್ಕೊಡುತ್ತಾರೆ. ಇದಾದ ಹಲವಾರು ವರ್ಷಗಳವರೆಗೂ ಇವರಿಬ್ಬರ ನಡುವಿನ ಗಾಢವಾದ ಸ್ನೇಹ ಮುಂದುವರೆಯುತ್ತದೆ. ಇಬ್ಬರೂ ಪತ್ರಗಳ ಮುಖಾಂತರ ಸಂಪರ್ಕವಿಟ್ಟುಕೊಂಡಿದ್ದರು. ಪತ್ರದಲ್ಲಿ ವಿವೇಕಾನಂದರು ಇವರನ್ನು ” Dear Adhyapak” ಎಂದೇ ಸಂಭೋದಿಸುತ್ತಿದ್ದರು.
2 ಸೆಪ್ಟೆಂಬರ್1893… ಸ್ವಾಮಿ ವಿವೇಕಾನಂದರು ಬೋಸ್ಟನ್ನಿನಿಂದ ಚಿಕಾಗೋಕ್ಕೆ ಹೊರಡುತ್ತಾರೆ, ಆದರೆ ಅವಘಡಗಳ ಸರಮಾಲೆ ಇನ್ನೂ ಅವರ ಬೆನ್ನು ಬಿಟ್ಟಿರಲಿಲ್ಲ….9/11..ಸಮಾರಂಭದ ಉದ್ಘಾಟನೆ ಇನ್ನೂ ಏಳು ದಿನಗಳ ದೂರವಿತ್ತು…
ಕಾರಣ ಮತ್ತು ಪರಿಣಾಮ
Parliament of Religions ನಿಗದಿತ ಸಮಯದಂತೆ ಜುಲೈ 1893 ಯಲ್ಲಿ ನಡೆದಿದ್ದರೆ ಬಹುಷಃ ಪರಿಚಯ ಪತ್ರವಿಲ್ಲದೆ, ಯಾರ ಪರಿಚಯವೂ ಇಲ್ಲದೆ ಸಮ್ಮೇಳನದಲ್ಲಿ ಭಾಗವಹಿಸದೆ ನಿರಾಸೆಯಿಂದ ಭಾರತಕ್ಕೆ ಮರುಳುತ್ತಿದ್ದರೇನೋ, ಭಾಗವಹಿಸಿಧ್ಧರೂ ಸಹಾ ಅಂತಹ ಒಂದು ಅದ್ಭುತವಾದ ಭಾಷಣ ಮಾಡಲಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಸಮಾರೋಹದಲ್ಲಿ ನೆರೆದಿದ್ದ 7000 ಪ್ರತಿನಿಧಿಗಳಲ್ಲಿ , ಸಮ್ಮೇಳನದ ಅಧ್ಯಕ್ಷ ಜಾನ್ ಬರ್ರೋಸ್ ಇವರನ್ನೇ ಪ್ರತ್ಯೇಕವಾಗಿ ಕರೆದು ಶ್ಲಾಘನೆಯ ಹೊಳೆಯನ್ನೇ ಹರಿಸಿ, ನೀವು ಒಟ್ಟು ಆರು ಸಲ ಭಾಷಣ ಮಾಡಬೇಕೆಂಬ ವಿಶೇಷ ಆಮಂತ್ರಣ ನೀಡುತ್ತಿದ್ದರೇ? ಸಮ್ಮೇಳನ ಮುಗಿದ ಮೇಲೂ ಸುಮಾರು ಮೂರೂವರೆ ವರ್ಷಗಳ ಕಾಲ ಅಮೆರಿಕಾದಲ್ಲಿ ಉಳಿಯುತ್ತಿದ್ದರೇ? ಅಷ್ಟೊಂದು ಅಮೆರಿಕನ್ನರ ಆರಾಧ್ಯ ದೈವವಾಗುತ್ತಿದ್ದರೇ? ಇದೇ ಕರ್ಮಯೋಗದ ” ಕಾರಣ ಮತ್ತು ಪರಿಣಾಮ ” ಇದ್ದಿರಬಹುದು. ಬೋಸ್ಟನ್ನಿನಿಂದ ಕೇಟ್ , ಪ್ರೊಫೆಸರ್ ರೈಟ್ ಮತ್ತು ಅವರ ಕುಟುಂಬದವರಿಗೆ ವಿದಾಯ ಹೇಳಿ ರೈಲಿನಲ್ಲಿ ಸಮ್ಮೇಳನಕ್ಕೆಂದು ಚಿಕಾಗೋಗೆ ಹೊರಟ ವಿವೇಕಾನಂದರಿಗೆ ಇನ್ನೊಂದು ಸುತ್ತಿನ ಅವಘಡವೋ, ಸಂಚಿತ ಕರ್ಮಫಲವೋ ಅಥವಾ ಅವರನ್ನು ಪ್ರವಾದಿಗಳ ಮಟ್ಟಕ್ಕೇರಿಸುವ ಅಗೋಚರ ಶಕ್ತಿಗಳ ಸಂಚೋ..ಗೊತ್ತಿಲ್ಲ, ಆಟವಂತೂ ಶುರುವಾಗಿತ್ತು.
ಚಿಕಾಗೋದಲ್ಲಿ ಪ್ರೊಫೆಸರ್ ರೈಟ್ ರವರ ಸ್ನೇಹಿತರೊಬ್ಬರ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿದ್ದರು. ಅವರ ಮನೆಯ ವಿಳಾಸ ಮತ್ತು ಪರಿಚಯ ಪತ್ರವನ್ನು ಮತ್ತು ಹಣವನ್ನು ಒಂದು ಲಕೋಟೆಯಲ್ಲಿ ಹಾಕಿ ಕೊಟ್ಟಿದ್ದರು, ಆದರೆ ರೈಲಿನಿಂದ ಇಳಿಯುವಾಗ ಆ ಲಕೋಟಿ ಎಲ್ಲೋ ಬಿದ್ದು ಹೋಗಿಬಿಟ್ಟಿತು. ಈಗೇನು ಮಾಡುವುದು? ದಿಕ್ಕೇ ತೋಚದಂತಾಯಿತು. ಆ ರಾತ್ರಿಯನ್ನು ಅಲ್ಲೇ ನಿಂತಿದ್ದ ಒಂದು ರೈಲ್ವೇ ಬೋಗಿಯಲ್ಲಿ ಕಳೆದರು. ಬೆಳಗ್ಗೆ ಎದ್ದವರಿಗೆ ತಾಳಲಾರದ ಹಸಿವು, ಕೈಯಲ್ಲಿ ಬಿಡಿಗಾಸಿಲ್ಲ. ಹತಾಶರಾಗಿ ಚಿಕಾಗೋ ನಗರದ ಬೀದಿಗಳಲ್ಲಿ ಸುತ್ತಾಡಿ, ಆಹಾರಕ್ಕೆ ಭಿಕ್ಷೆ ಬೇಡಲೂ ಯೋಚಿಸಿದರು, ಆದರೆ ಅವರ ದಿರಿಸಿನಿಂದಾಗಿ ಹಾದು ಹೋಗುವವರೆಲ್ಲಾ ಅನುಮಾನದಿಂದ ನೋಡುತ್ತಾ ಹೋಗುತ್ತಿದ್ದರು, ಹಾಗಾಗಿ ಇನ್ನೂ ಅವಮಾನಿತನಾಗುವುದು ಬೇಡ ಎಂದು ಅಲ್ಲೇ ಮನೆಯೊಂದರ ಮುಂದಿನ ಮರದ ನೆರಳಿನಲ್ಲಿ ಕುಸಿದು ಕುಳಿತರು, ಹಸಿವಿನಿಂದ, ಹತಾಶೆಯಿಂದ, ನಿರಾಶೆಯಿಂದ, ಇದು ಪ್ರಾರಬ್ದ ಕರ್ಮವೇ, ಸಂಚಿತ ಕರ್ಮವೇ…ಅವರ ಅಮ್ಮನ ನೆನಪು ಬಂದು, ದುಖಃ ಒತ್ತರಿಸಿ ಬಂತು. ಅದೇ ಸಮಯಕ್ಕೆ ಆ ಮನೆಯ ಕಿಟಕಿಯಿಂದ ಇವರನ್ನು ನೋಡುತ್ತಾ ಕುಳಿತಿದ್ದರು ಒಬ್ಬ ಮಹಿಳೆ…
ಮುಂದೆ ಇವರ “Dear Mother” ಎಂದು ನೂರಾರು ಪತ್ರಗಳ ಸಂಭೋದಿತೆ, ಆ ಮನೆಯನ್ನೇ ವಿವೇಕಾನಂದರ ಅಮೆರಿಕದ ಮುಖ್ಯಾಲಯವನ್ನಾಗಿ ಮಾಡಿದ ಮಾತೆ, ಮುಂದೆ ಅಮೆರಿಕಾದ ಮೂಲೆ ಮೂಲೆಗಳಲ್ಲಿ ಮಾಡಿದ ಉಪನ್ಯಾಸಕ್ಕೆ ಸಿಗುತ್ತದ್ದ ಸಂಭಾವನೆಗೆ ತಿಜೋರಿಯಾಗಿ, ನೊಂದ ಮನಸ್ಸಿಗೆ ಸಾಂತ್ವಾನ ಹೇಳುವ ಮೈತ್ರಿಯಾಗಿ, ತಪ್ಪು ಮಾಡಿ ಒಪ್ಪಿಕೊಂಡಾಗ ಧರಿತ್ರಿಯಾಗಿ…ವಿವೇಕಾನಂದರನ್ನು ಮಗುವಿನಂತೆ ಪೋಷಿಸಿದ ದೇವಿ ಸ್ವರೂಪಿ ಶ್ರೀಮತಿ ಎಲ್ಲೆನ್ ಹೇಲ್…
ವಿವಾಕಾನಂದರಿಗಾಗೇ ಕಾಯುತ್ತಿದ್ದರೇನೋ ಎನ್ನುವಂತೆ ಕುಳಿತಿದ್ದರು ಕಿಟಿಕಿಯಿಂದ ನೋಡುತ್ತಾ, ಸ್ವಲ್ಪಹೊತ್ತು ನೋಡಿ ಮನೆಯಿಂದ ಹೊರಬಂದರು. ವಿವೇಕಾನಂದನಂದರ ಮುಖವನ್ನೇ…ಈಗ ಬಂದೆಯಾ ಎನ್ನುವಂತೆ ನೋಡಿದರು. ಬಾ…ಒಳಗೆ ಎಂದು ಸ್ವಾಗತಿಸಿ ಕರೆದುಕೊಂಡು ಹೋದರು.
10 ಸೆಪ್ಟೆಂಬರ್ 1893, ಚಿಕಾಗೋದ ಡಿಯರ್ಬಾನ್ ಏವ್ ರಸ್ತೆಯ ಬಂಗಲೆಯ ಒಡತಿ ಶ್ರೀಮತಿ ಎಲ್ಲೆನ್ ಹೇಲ್ ತಮ್ಮ ಮನೆಯ ಮುಂದೆ ಕುಳಿತಿದ್ದ ವಿವೇಕಾನಂದರನ್ನು ಒಳಗೆ ಕರೆದುಕೊಂಡು ತಮ್ಮ ಪತಿ ಜಾರ್ಜ್ ಹೇಲ್ ರವರಿಗೆ ಪರಿಚಯಿಸುತ್ತಿದ್ದ ಹಾಗೇ, ಮಕ್ಕಳು ಮೇರಿ, ಹ್ಯಾರಿಯೆಟ್ ಕೂಡ ಬಂದು ವಂದಿಸುತ್ತಾರೆ.
“ಈ ಅಪಚರಿತನನ್ನು ನೀವು ಹೇಗೆ ಸ್ವಾಗತಿಸಿದಿರಿ ಎಂದರೆ ನನಗೂ ಈ ಮನೆಯ ಸದಸ್ಯರುಗಳಿಗೂ ನಾವು ಹಿಂದೂಗಳು ನಂಬುವ ಪೂರ್ವಜನ್ಮದ ಋಣಾನುಬಂಧವಿದ್ದಿರಬಹುದೇನೋ ಎನಿಸಿತು..” ಎಂದು ಆರು ವರ್ಷಗಳ ನಂತರ ವಿವೇಕಾನಂದರು ಮೇರಿ ಹೇಲ್ ರವರಿಗೆ ಪತ್ರದಲ್ಲಿ ಭಾವುಕರಾಗಿl ಬರೆಯುತ್ತಾರೆ.
ಇವರು ಸಮ್ಮೇಳನಕ್ಕೇ ಬಂದವರಿರಬೇಕೆಂಬ ಊಹೆ ಸರಿಯೆಂದು ತಿಳಿದು ಮನೆಯವರೆಲ್ಲಾ ಹರ್ಷಿಸುತ್ತಾರೆ. ನಾವು ಹಿಂದೂ ತತ್ವಗಳನ್ನು ಓದಿದ್ದೇವೆ ಆದರೆ ಇದೇ ಮೊದಲ ಸಲ ಒಬ್ಬ ಹಿಂದೂ ಸ್ವಾಮಿಯನ್ನು ನೋಡುತ್ತಿರುವುದು ಎಂದು ಅತಿಥಿ ಸತ್ಕಾರದಲ್ಲಿ ತೊಡಗುತ್ತಾರೆ. ಸಮ್ಮೇಳನದಲ್ಲಿ ತಮ್ಮ ಹೆಸರು ನೊಂದಣಿಯಾಗಿಲ್ಲ ಎಂದು ವಿವೇಕಾನಂದರು ಹೇಳಿದಾಗ ಶ್ರೀಮತಿ ಹೇಲ್ ಖುದ್ದಾಗಿ ಅವರನ್ನು ಸಮ್ಮೇಳನದ ಆಡಳಿತ ವರ್ಗದವರೊಂದಿಗೆ ಪರಿಚಯಿಸಿ ಅವರ ಹೆಸರನ್ನು ನೊಂದಾಯಿಸುತ್ತಾರೆ.
ಮರುದಿನ, 11 ಸೆಪ್ಟೆಂಬರ್ ಸಮ್ಮೇಳನದ ಉಧ್ಗಾಟನೆಯ ದಿನದ ಮಧ್ಯಾಹ್ನದ ಭಾಷಣಕಾರರಾಗಿ ಅರ್ಧ ಗಂಟೆಯ ಅವಧಿಯನ್ನು ಕೊಡಲಾಗಿದೆ ಎಂದೂ ತಿಳಿಸುತ್ತಾರೆ. ಅಂತೂ ಇಲ್ಲಿವರೆಗೆ ಪಟ್ಟ ಕಷ್ಟವೆಲ್ಲಾ ಸಾರ್ಥಕವಾಯಿತು ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಾರೆ.
11 ಸೆಪ್ಟೆಂಬರ್ ಬೆಳಗ್ಗೆ ವಿವೇಕಾನಂದರನ್ನು ಹೇಲ್ ದಂಪತಿಗಳು ಚಿಕಾಗೋದ ಪ್ರಸಿದ್ಧ Art Palace Auditorium ಕಲಾ ಮಂದಿರಕ್ಕೆ ಕರದುಕೊಂಡು ಹೋಗುತ್ತಾರೆ. ಆಗಲೇ ಸುಮಾರು ಏಳುಸಾವಿರ ಧಾರ್ಮಿಕ ವ್ಯಕ್ತಿಗಳ ಸಮಾವೇಷ ನಡದಿರುತ್ತದೆ. ಭಾರತದಿಂದ ಬ್ರಹ್ಮೊ ಸಮಾಜದ P C ಮಜುಂದಾರನ್ನು ಬಿಟ್ಟರೆ ಒಬ್ಬರೂ ಪರಿಚಯವದರಿರುವುದಿಲ್ಲ. ಅಂತಹ ಬೃಹತ್, ವೈವಿಧ್ಯಮಯ ಸಮಾವೇಶವನ್ನು ನೋಡಿ ದಂಗಾಗಿ ಬಿಡುತ್ತಾರೆ.
ಮಧ್ಯಾಹ್ನದ ಸಮಾವೇಶದಲ್ಲ .ವಿವೇಕಾನಂದರ ಭಾಷಣದ ಸರದಿ ಬಂತು. ಅಧ್ಯಕ್ಷ ಜಾನ್ ಬರ್ರೋಸರು ವಿವೇಕಾನಂದರನ್ನು ಸಮಾವೇಶಕ್ಕೆ ಪರಿಚಯಿಸುತ್ತಾರೆ. ಸ್ವಾಮಿ ವಿವೇಕಾನಂದರು ಸ್ವಲ್ಪ ಮಟ್ಟದ ಅಧೀರತೆಯಿಂದಲೇ ವೇದಿಕೆಯನ್ನೇರುತ್ತಾರೆ. ನೆರೆದ ಜನಸ್ತೋಮಕ್ಕೆ ತಲೆ ಬಾಗಿಸಿ ಕೈಮುಗಿದು, ಕಣ್ಣು ಮುಚ್ಚಿಕೊಂಡು ದೇವಿ ಸರಸ್ವತಿಯನ್ನು ಸ್ಮರಿಸುತ್ತಾರೆ, ಕಣ್ಣು ತೆರೆದವರೇ..
” ನನ್ನ ಪ್ರೀತಿಯ ಅಮೇರಿಕಾದ ಸಹೋದರಿಯರೇ..ಸಹೋದರರೇ ”
ಕಂಚಿನ ಕಂಠದ ಧ್ವನಿ ಹೊರಡುತ್ತಲೇ…ಸಭೆಯಲ್ಲಿ ವಿದ್ಯುತ್ ಸಂಚಲನವಾಗುತ್ತದೆ. ಏಳುಸಾವಿರ ಜನ ಎದ್ದು ನಿಂತು ಸುಮಾರು ಎರಡು ನಿಮಿಷಗಳ ಕಾಲ ಸತತವಾಗಿ ಗಡಚಿಕ್ಕುವ ಕರತಾಡನ ಮಾಡುತ್ತಾರೆ. ಕಿಂಚಿತ್ತು ಅಧೀರತೆಯಿಂದ ಬಂದವರಿಗೆ ಇಂತಹ ನಭೂತೋ ನಭವಿಷ್ಯತಿ.. ಸ್ವಾಗತ ಅವರನ್ನು ಅಚಂಭಿತಗೊಳಿಸಿ, ಪ್ರೋತ್ಸಾಹಿಸಿ, ಕಣ ಕಣದಲ್ಲೂ ಚೈತನ್ಯದ ಹೊಳೆಯನ್ನು ಹರಿಸುತ್ತದೆ. ಚಪ್ಪಾಳೆಯ ಸದ್ದಡಗುವುದನ್ನೇ ಕಾಯ್ದು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ..
ಸಮಾರಂಭಲ್ಲಿ ನೆರೆದಿದ್ದವರಲ್ಲಿ ಅತಿ ಚಿಕ್ಕವರಾದ ಮೂವತ್ತು ವರ್ಷದ ಈ ವ್ಯಕ್ತಿ ಪ್ರಪಂಚದ ಅತಿ ಪ್ರಾಚೀನ..ಸನಾತನ ಧರ್ಮದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದಾರೆ. ಹಾಗೆ ನೋಡಿದರೆ, ಅವರ ಪ್ರಾರಂಭದ ಸಾಲಿನಲ್ಲಿ ಏನು ಅಂತಹ ವಿಷೇಶವೇನೂ ಇರಲಿಲ್ಲ.. ಅಮೆರಿಕದ ಸಹೋದರ, ಸಹೋದರಿಯರೇ..
ಈ ವಾಕ್ಯವನ್ನು ಈಗಲೂ ಅಂದರೆ ಘಟನೆ ನಡೆದ 125 ವರ್ಷಗಳ ನಂತರವೂ ನೆನಸಿಕೊಂಡರೆ ಹೆಮ್ಮೆಯಿಂದ ಎದೆ ಉಬ್ಬುವುದು ಏಕೆ ಎಂದರೆ ಅವರ ವಾಕ್ಯದ ಪ್ರಾಮಾಣಿಕತೆಯಿಂದ. ಧ್ವನಿಯಲ್ಲಿದ್ದ ಉತ್ಕಟತೆ, ಆದರತೆ ಮತ್ತು ಅಪ್ಯಾಯಮಾನತೆಯಿಂದ. ಹಿರಿಯರು ಕಿರಿಯರೆನ್ನದೆ ಎಲ್ಲರನ್ನೂ ಹೆಸರಿಡಿದು ಕರೆಯುವ ವಾಡಿಕೆ ಇರುವ ಆ ನಾಡಿನಲ್ಲಿ ಭಾರತೀಯ ಸಂಸ್ಕಾರವನ್ನು ಪರಿಚಯಿಸಿದ್ದರು. ಅದರಲ್ಲೇ ಇರುವುದು ಕಿವಿ ಗಡಚಿಕ್ಕುವ ಕರತಾಡನದ ವಿಶೇಷತೆ.
✍️… Wing Cdr Sudarshan


