ಕ್ಷುಲ್ಲಕ ಕಾರಣಕ್ಕಾಗಿ ಬೆಳಗಾವಿಯಲ್ಲಿ ಯುವಕನ ಭೀಕರ ಕೊಲೆ

ಬೆಳಗಾವಿಯಲ್ಲಿ ಯುವಕನ ಭೀಕರ ಕೊಲೆ
ಬೆಳಗಾವಿ :
ನಗರದ ಹಳೇ ಪಿಬಿ ರಸ್ತೆಯ ದಾಕೋಜಿ ಆಸ್ಪತ್ರೆ ಬಳಿ ಯುವಕನಿಗೆ ಕ್ಷುಲ್ಲಕ ಕಾರಣಕ್ಕೆ ಸೈಕಲ್ ಚೈನ್ ನಿಂದ ಹಲ್ಲೆ ಮಾಡಿ ಕೊಲೆಗೈಯಲಾಗಿದೆ.
ಹಲಗಾ ವಿಜಯನಗರದ ಮಹೇಶ್ ಜ್ಞಾನೇಶರ ಕಾಮನಾಚೆ (35) ಮೃತ ಯುವಕ.
ಯುವಕನ ತಾಯಿ ಹಾಗೂ ತಂದೆಯ ಎದುರೇ ಈ ಘಟನೆ ನಡೆದಿದೆ
ಎನ್ನಲಾಗಿದೆ. ಈತ ಖಾಸ್ ಬಾಗ್ ನಲ್ಲಿ ಮೆಕಾನಿಕ್ ಗ್ಯಾರೇಜ್ ನಡೆಸುತ್ತಿದ್ದ.
ನಿನ್ನೆ ರಾತ್ರಿ ಈತನ ಗ್ಯಾರೇಜ್ ಗೆ ಕಾರು ದುರಸ್ತಿ ಬಂದಿತ್ತು. ಆಗ ಆತ ಕಾರಿನ ಮಾಲೀಕರನ್ನು ಕೂಡಿಸಿಕೊಂಡು ಟ್ರಯಲ್ ಗೆ ನಡೆಸುತ್ತಿದ್ದಾಗ ಕಾರಿಗೆ ಬೈಕ್ ಡಿಕ್ಕಿ ಹೊಡೆದಿತ್ತು. ಆಗ ಇಬ್ಬರ ನಡುವೆ ಪರಸ್ಪರ ವಾಕ್ಸಮರ ನಡೆದಿತ್ತು.
ಯುವಕನ ತಾಯಿ ಹಾಗೂ ತಂದೆ ಅದೇ ಮಾರ್ಗವಾಗಿ ಆಸ್ಪತ್ರೆಗೆ ಹೋಗುವಾಗ ಘಟನೆ ನೋಡಿದ್ದಾರೆ. ಬೈಕ್ ಸವಾರ ಕೆಲ ಕಿಡಿಗೇಡಿಗಳನ್ನು ಸ್ಥಳಕ್ಕೆ ಕರೆಸಿ ಮಹೇಶ್ ಮೇಲೆ ಸೈಕಲ್ ಚೈನ್ ನಿಂದ ಹಲ್ಲೆಗೈದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಯುವಕ ಕೊನೆಗೂ ಮೃತಪಟ್ಟಿದ್ದಾನೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.