ಬೆಂಗಳೂರು: ಕಳೆದ ಕೆಲವು ದಿನಗಳಿಂದ ವಿಪರೀತ ತಾಪಮಾನದ ಬೇಗೆಯಲ್ಲಿದ್ದ ಬೆಂಗಳೂರು ನಗರಕ್ಕೆ ಬುಧವಾರ ಸಂಜೆ ದಿಢೀರ್ ಮಳೆ ಅಪ್ಪಳಿಸಿದೆ. ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಯು ನಗರದ ತಾಪಮಾನವನ್ನು ತಂಪಾಗಿಸಿದೆಯಾದರೂ, ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.
ಮಳೆಯ ನಡುವೆ ಸಂಭವಿಸಿದ ಅತ್ಯಂತ ದುರದೃಷ್ಟಕರ ಘಟನೆಯೆಂದರೆ, ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಈ ದುರಂತದಲ್ಲಿ ಆರು ವರ್ಷದ ಬಾಲಕಿ ಸೇರಿದಂತೆ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ಗೋಡೆಯ ಬಳಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಪೈಕಿ ಕೆಲವರು ಕೇರಳದಿಂದ ಸ್ಟಡಿ ಟೂರ್ (ಶೈಕ್ಷಣಿಕ ಪ್ರವಾಸ) ಗಾಗಿ ನಗರಕ್ಕೆ ಬಂದಿದ್ದ ವಿದ್ಯಾರ್ಥಿಗಳಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಇತರ ಏಳು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನಾ ಸ್ಥಳದ ಮಾಹಿತಿ ಪಡೆದು ಮೃತರ ಸಂಖ್ಯೆಯನ್ನು ಖಚಿತಪಡಿಸಿದ್ದಾರೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಸಿಎಂ ಘೋಷಿಸಿದ್ದಾರೆ.
ಆಲಿಕಲ್ಲು ಮಳೆಯಿಂದ ಬಿಳಿಯಾದ ನಗರ
ನಗರದ ಹಲವೆಡೆ ಭಾರಿ ಪ್ರಮಾಣದ ಆಲಿಕಲ್ಲು ಮಳೆಯಾಗಿದ್ದು, ಕಂಠೀರವ ಕ್ರೀಡಾಂಗಣದ ಆವರಣವು ಸಂಪೂರ್ಣವಾಗಿ ಹಿಮದ ಹಾಸಿಗೆಯಂತೆ ಕಂಡುಬಂದಿದೆ. ನಗರದ ರಸ್ತೆಗಳು ಮಂಜುಗಡ್ಡೆಯಿಂದ ಆವೃತವಾಗಿ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಆಲಿಕಲ್ಲುಗಳಿಂದ ಆವೃತವಾಗಿರುವ ದೃಶ್ಯಗಳು ಎದ್ದು ಕಾಣುತ್ತಿದ್ದವು. ಹಠಾತ್ ಚಂಡಮಾರುತವು ನಗರದ ದೊಡ್ಡ ಭಾಗಗಳನ್ನು ಬಿಳಿ ಮಂಜುಗಡ್ಡೆಯ ಹಾಳೆಯಾಗಿ ಪರಿವರ್ತಿಸಿತು. ಇದು ತೀಕ್ಷ್ಣವಾದ ಹವಾಮಾನ ಬದಲಾವಣೆಯತ್ತ ಗಮನ ಸೆಳೆಯಿತು.
ಮಳೆಯ ಆರ್ಭಟಕ್ಕೆ ಸರ್ಕಾರಿ ಕಟ್ಟಡಗಳೂ ಹೊರತಾಗಿಲ್ಲ. ವಿಧಾನಸೌಧದ ಕಾರಿಡಾರ್ಗಳಿಗೆ ಮಳೆ ನೀರು ನುಗ್ಗಿದ್ದು, ವಿಪಕ್ಷದ ನಾಯಕ ಆರ್. ಅಶೋಕ ಅವರ ಕಚೇರಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ರಿಚ್ಮಂಡ್ ಟೌನ್ ಮತ್ತು ಶಾಂತಿನಗರದ ಹಲವು ಕಡೆಗಳಲ್ಲಿ ಸೊಂಟದವರೆಗೆ ನೀರು ನಿಂತಿತ್ತು. ನಗರದ ಪ್ರಮುಖ ಜಂಕ್ಷನ್ಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ತಬ್ದಗೊಂಡಿತ್ತು. ಮಲ್ಲೇಶ್ವರಂ, ಶಾಂತಿನಗರ ಮತ್ತು ಶೇಷಾದ್ರಿಪುರಂ ಸೇರಿದಂತೆ ನಗರದಾದ್ಯಂತ ಕನಿಷ್ಠ 50ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಕೆಲವೇ ಗಂಟೆಗಳಲ್ಲಿ ನಗರವು ಬಿಸಿಲಿನ ಬೇಗೆಯಿಂದ ಜಲಾವೃತ ಸ್ಥಿತಿಗೆ ಬದಲಾಗಿದ್ದು, ನಾಗರಿಕರು ಸಂಕಷ್ಟ ಎದುರಿಸುವಂತಾಯಿತು.
