Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಿತ್ತು ಅಂಕುಶ: ಸಂಘ ಚಟುವಟಿಕೆ ನಿರ್ಬಂಧ: ಹೊಸ ನಿಯಮ ರೂಪಿಸಲು ಸಚಿವ ಸಂಪುಟ ತೀರ್ಮಾನ

ಬೆಂಗಳೂರು: ಸರ್ಕಾರಿ ಶಾಲೆ, ಕಾಲೇಜು, ಆಟದ ಮೈದಾನಗಳು ಮತ್ತು ಸರ್ಕಾರಿ ಸಂಸ್ಥೆಗಳ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂಬ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪತ್ರ ಆಧರಿಸಿ, ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘ–ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅಂಕುಶ ಹಾಕಲು ಸರ್ಕಾರ ನಿರ್ಧರಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಚರ್ಚೆ ನಡೆದಿದೆ. ನಿರ್ಬಂಧ ವಿಧಿಸುವ ವಿಷಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಹೆಸರನ್ನು ಉಲ್ಲೇಖಿಸುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರಿ ಶಾಲಾ–ಕಾಲೇಜು ಆವರಣದಲ್ಲಿ ಸಂಘ–ಸಂಸ್ಥೆಗಳ ಚಟುವಟಿಕೆಗೆ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಿದ್ದ ಆದೇಶವನ್ನು ಬಳಸಿಕೊಂಡು ಹೊಸ ನಿಯಮಗಳನ್ನು ರೂಪಿಸಲು ಸಚಿವ ಸಂಪುಟ ನಿರ್ಣಯಿಸಿದೆ. ಇದು ಜಾರಿಯಾದರೆ, ಸರ್ಕಾರದ ಆಸ್ತಿ, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳಲ್ಲಿ ಆರ್‌ಎಸ್‌ಎಸ್‌ ಸೇರಿದಂತೆ ಖಾಸಗಿ ಸಂಸ್ಥೆಗಳು ಯಾವುದೇ ಚಟುವಟಿಕೆ ನಡೆಸುವುದಕ್ಕೆ ನಿರ್ಬಂಧ ಬೀಳಲಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು, ‘ನಾವು ತರಲು ಬಯಸಿರುವ ನಿಯಮಗಳು ಸಾರ್ವಜನಿಕ ಸ್ಥಳಗಳು, ಸರ್ಕಾರಿ ಶಾಲೆಗಳು, ಕಾಲೇಜುಗಳು, ಸರ್ಕಾರಿ ಸಂಸ್ಥೆಗಳ ಆವರಣಗಳು ಮತ್ತು ಅನುದಾನಿತ ಸಂಸ್ಥೆಗಳಿಗೆ ಸಂಬಂಧಿಸಿವೆ. ಗೃಹ ಇಲಾಖೆ, ಕಾನೂನು ಇಲಾಖೆ ಮತ್ತು ಶಿಕ್ಷಣ ಇಲಾಖೆ ಹೊರಡಿಸಿದ ಹಿಂದಿನ ಆದೇಶಗಳನ್ನು ಒಟ್ಟುಗೂಡಿಸಿ ಹೊಸ ನಿಯಮಗಳನ್ನು ರೂಪಿಸಲಿದ್ದೇವೆ. ಮುಂದಿನ ಎರಡು– ಮೂರು ದಿನಗಳಲ್ಲಿ, ಹೊಸ ನಿಯಮಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆ ಬರೆದ ಪತ್ರದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ, ಅದೂ ಸೇರಿ ಸಾಕಷ್ಟು ದೂರುಗಳು ಬಂದಿವೆ. ಮಾಧ್ಯಮಗಳಲ್ಲೂ ಟೀಕೆಗಳು ಬಂದಿವೆ. ಈ ಬಗ್ಗೆ ಕಾನೂನಿನ ಸ್ಪಷ್ಟತೆ ಇರಲಿಲ್ಲ. ಆದ್ದರಿಂದ ವಿವರವಾಗಿ ನಿಯಮ ರೂಪಿಸಲು ತೀರ್ಮಾನಿಸಲಾಗಿದೆ. ಸರ್ಕಾರ ಅನುಮತಿ ಇಲ್ಲದೇ ಯಾವುದೇ ಚಟುವಟಿಕೆ ನಡೆಸುವುದನ್ನು ಅತಿಕ್ರಮ ಪ್ರವೇಶ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.

ತಮಿಳುನಾಡು ಮಾದರಿ ಅನುಸರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆ ಮಾದರಿಯನ್ನು ಅನುಸರಿಸಲಾಗಿದೆಯೇ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಲಿಲ್ಲ.

ಆರ್‌ಎಸ್‌ಎಸ್ ಚಟುವಟಿಕೆಯನ್ನು ನಿಷೇಧಿಸಲು ಕಠಿಣ ಕಾನೂನನ್ನೇ ರೂಪಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇರಿದ ಒತ್ತಡಕ್ಕೆ ಸಂಪುಟ ಸಭೆಯಲ್ಲಿ ಬಹುಪಾಲು ಸಚಿವರಿಂದ ಬೆಂಬಲ ಸಿಗಲಿಲ್ಲ ಎಂದು ಮೂಲಗಳು ಹೇಳಿವೆ. ಆ ರೀತಿ ಕಾನೂನು ಮಾಡಲು ಸಾಧ್ಯವಿಲ್ಲ. ಇರುವ ನಿಯಮಗಳನ್ನೇ ಪರಿಷ್ಕರಿಸಿ ಸರ್ಕಾರಿ ಆದೇಶವನ್ನು ಹೊರಡಿಸೋಣ. ಈ ಬಗ್ಗೆ ನಿಮ್ಮ ತಂದೆಯವರ ಬಳಿ ಒಮ್ಮೆ ಚರ್ಚಿಸಿ. ಅನಗತ್ಯವಾಗಿ ಆರ್‌ಎಸ್‌ಎಸ್ ಅನ್ನು ಹೀರೊ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿ ಹೇಳಿದರೆಂದು ಮೂಲಗಳು ತಿಳಿಸಿವೆ.‌

ನಾವು ನಿರ್ಬಂಧ ಅಥವಾ ನಿಷೇಧ ಹೇರುವುದರಿಂದ ಸೈದ್ಧಾಂತಿಕವಾಗಿ ಅವರಿಗೆ (ಆರ್‌ಎಸ್‌ಎಸ್‌) ಅನುಕೂಲವೇ ಆಗುತ್ತದೆ. ಅದು ಮತ್ತಷ್ಟು ಪ್ರಬಲವಾಗಿ ಬೆಳೆಯುವುದಕ್ಕೆ ಅವಕಾಶ ನೀಡುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಖಾಸಗಿ ಸಂಘ–ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನುಬದ್ಧವಾಗಿ ನಡೆಸಲು ಅನುಮತಿ ನೀಡುವ ಕುರಿತು ಎಚ್‌.ಕೆ.ಪಾಟೀಲ ಮಾಹಿತಿ ನೀಡಿದರು

ಸರ್ಕಾರ, ಸರ್ಕಾರಿ ಸ್ವಾಮ್ಯದ ನಿಗಮ, ಮಂಡಳಿ, ಶಾಲಾ–ಕಾಲೇಜು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು, ತೆರೆದ ಸ್ಥಳಗಳು ಮತ್ತು ಇತರೆ ಆಸ್ತಿ, ಜಾಗಗಳು ನಾಗರಿಕ ಬಳಕೆಗೆ ನಿಗದಿಯಾಗಿವೆ. ಇವುಗಳನ್ನು ಸಾರ್ವಜನಿಕರು ಬಳಸಲು ಯಾವುದೇ ಅಡಚಣೆ, ಬೆದರಿಕೆ ಉದ್ಭವಿಸದಂತೆ ಕ್ರಮ ವಹಿಸುವುದು ಅತ್ಯಗತ್ಯ. ಅದೇ ರೀತಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ, ಸಾರ್ವಜನಿಕ ಸಾರ್ವತ್ರಿಕ ಅಸಮಾಧಾನಗಳನ್ನು ನಿವಾರಿಸುವುದು ಅವಶ್ಯವಾಗಿದೆ.

ಹಲವು ಖಾಸಗಿ ಸಂಸ್ಥೆಗಳು, ಸಂಘಗಳು ತಮ್ಮ ಚಟುವಟಿಕೆ, ಪ್ರಚಾರ, ತರಬೇತಿ, ಉತ್ಸವ, ಮೆರವಣಿಗೆ, ಸದಸ್ಯರ ಮತ್ತು ಬೆಂಬಲಿಗರ ಸಭೆ ನಡೆಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳು, ಸರ್ಕಾರದ ಆಸ್ತಿಗಳು, ಜಮೀನುಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳನ್ನು ಸರ್ಕಾರ ಅಥವಾ ಸಂಬಂಧಿತ ಇಲಾಖೆಯಿಂದ ಮುಂಚಿತವಾಗಿ ಅನುಮತಿ ಪಡೆಯದೇ, ಮಾಹಿತಿ ನೀಡದೇ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇಂತಹ ಚಟುವಟಿಕೆಗಳನ್ನು ಅಕ್ರಮ ಪ್ರವೇಶ ಎಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದ ಸರ್ಕಾರದ ಯಾವುದೇ ಆಸ್ತಿ, ಸ್ಥಳದ ಬಳಕೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಯಂತ್ರಿಸುವ ಸಲುವಾಗಿ ಯಾವುದೇ ಸಂಘಟನೆ, ಸಂಸ್ಥೆ, ಸಂಘವು ಆಯಾ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯಬೇಕು.

ಯಾವುದೇ ಚಟುವಟಿಕೆಯಿಂದ ಸಾರ್ವಜನಿಕರಿಗೆ ಅನನುಕೂಲವಾದರೆ ಹಾಗೂ ಸಂಬಂಧಿಸಿದ ಸಂಸ್ಥೆಗಳ ಆವರಣ, ಜಾಗದಲ್ಲಿ ನಡೆಯುವ ಚಟುವಟಿಕೆಗಳಿಂದ ಆ ಸಂಸ್ಥೆಗಳ ಮೂಲ ಧ್ಯೇಯಕ್ಕೆ ಧಕ್ಕೆ ಉಂಟಾಗುವುದಾದರೆ ಅಂತಹ ಚಟುವಟಿಕೆಗಳ ಆಯೋಜನೆಗೆ ಸಕ್ಷಮ ಪ್ರಾಧಿಕಾರಗಳು ಅನುಮತಿ ನೀಡಬಾರದು‌.

ಸರ್ಕಾರಿ ಶಾಲಾ– ಕಾಲೇಜುಗಳು, ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಆವರಣ; ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ಉದ್ಯಾನಗಳು, ಆಟದ ಮೈದಾನಗಳು, ಇತರೆ ತೆರೆದ ಸ್ಥಳಗಳು; ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ

ಸಾರ್ವಜನಿಕ ರಸ್ತೆಗಳು, ಸರ್ಕಾರದ ಇತರೆ ಆಸ್ತಿ/ ಸ್ಥಳಗಳು; ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಎಸ್‌ಪಿಗಳು

(ಮೇಲೆ ನಮೂದಿಸಿದ ಇಲಾಖೆ, ಸಕ್ಷಮ ಪ್ರಾಧಿಕಾರಗಳು ಅನುಮತಿ ನೀಡುವ ಸಂದರ್ಭದಲ್ಲಿ ಸಂವಿಧಾನ ಬದ್ಧವಾದ ನಾಗರಿಕರ ಹಕ್ಕುಗಳಿಗೆ ಚ್ಯುತಿ ಉಂಟಾಗದಂತೆ ಎಚ್ಚರಿಕೆ ವಹಿಸಲು ಅನುವಾಗುವಂತೆ ಸೂಕ್ತ ಮತ್ತು ವಿವರವಾದ ಮಾರ್ಗಸೂಚಿಯನ್ನು ಆಯಾ ಇಲಾಖೆಗಳೇ ಹೊರಡಿಸುವುದು.

ಸರ್ಕಾರಿ ಶಾಲಾ, ಕಾಲೇಜುಗಳ ಆವರಣ ಮತ್ತು ಆಟದ ಮೈದಾನದಲ್ಲಿ ಕಬಡ್ಡಿ, ಕ್ರಿಕೆಟ್‌ ಮತ್ತು ಇತರ ಕ್ರೀಡೆಗಳು, ಯೋಗಾಭ್ಯಾಸ ಹಾಗೂ ಸಾಂಸ್ಕೃತಿಕ ಚಟುವಟಿಕೆ ನಡೆಸಬೇಕಾದರೂ ಇನ್ನು ಮುಂದೆ ಪೂರ್ವಾನುಮತಿ ಕಡ್ಡಾಯ. ರಾಜ್ಯದಲ್ಲಿ ಹಲವು ಕ್ರೀಡಾ ಸಂಸ್ಥೆಗಳು ಕ್ರೀಡಾ ತರಬೇತಿ ಮತ್ತು ಪಂದ್ಯಗಳನ್ನು ನಡೆಸುವುದಕ್ಕೆ ಮುನ್ನ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಸಾಂಸ್ಕೃತಿಕ ಸಂಘ– ಸಂಸ್ಥೆಗಳೂ ತಮ್ಮ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಅನುಮತಿ ಪಡೆಯಬೇಕಾಗುತ್ತದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಂಗ್ಲಾದೇಶದ ಹೆಸರಲ್ಲಿ ವಿದೇಶಿ ಅಡಕೆ ಅಕ್ರಮ ಆಮದು ಪತ್ತೆ ; ₹2500 ಕೋಟಿ ನಷ್ಟದ ಶಂಕೆ : ನಮ್ಮ ಬೆಳೆಗಾರರ ಮೇಲೆ ಪರಿಣಾಮ ಏನು..?ಅಮೆರಿಕ ಸೈನಿಕನನ್ನು ಕೊಂದ್ರೆ ಅಥವಾ ಸೆರೆ ಹಿಡಿದ್ರೆ 30 ಸಾವಿರ ಡಾಲರ್ ಬಹುಮಾನ : ಮಹಿಳೆಯರಿಗೆ ದುಪ್ಪಟ್ಟು ಹಣ; ಇರಾನ್‌ ಘೋಷಣೆನಾಲ್ಸಾರ್‌ ನಂತರ ಬೆಂಗಳೂರಿನ ಪ್ರತಿಷ್ಠಿತ ಕಾನೂನು ಕಾಲೇಜಿನಿಂದಲೂ ಘಟಿಕೋತ್ಸವಕ್ಕೆ ಸಿಜೆಐ ಆಹ್ವಾನಕ್ಕೆ ವಿರೋಧದೇವಸ್ಥಾನದಲ್ಲಿ ಕಾಲ್ತುಳಿತ : 7 ಮಂದಿ ಸಾವು, ಹಲವರಿಗೆ ಗಾಯವಂದೇ ಮಾತರಂಗೆ ಅಪಮಾನ ಆರೋಪ ; ಸೋನಿಯಾ ಗಾಂಧಿ ವಿರುದ್ಧ ದೂರುಒಳಚರಂಡಿ ಕಾಮಗಾರಿ ವೇಳೆ 18 ವರ್ಷದ ಕಾರ್ಮಿಕನಿಗೆ ಸಿಕ್ಕಿತು 98 ಕೋಟಿ ರೂ. ಮೌಲ್ಯದ ನಿಧಿ….!ಕರ್ನಾಟಕದ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕ ಹೆಚ್ಚಳ46 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿ ಬಂಧನಕನ್ನಡ ಸಾಹಿತ್ಯ ಕಣಜವನ್ನು ಶ್ರೀಮಂತಗೊಳಿಸಿದವರು ಡಾ. ಸರಜೂ ಕಾಟ್ಕರ್ : ಡಾ. ಬಸವರಾಜ ಜಗಜಂಪಿಮೇಕೆ ಬೇಟೆಗೆ ಮಾಂಸದ ಅಂಗಡಿಗೆ ನುಗ್ಗಿದ ಹೆಬ್ಬಾವು; ಕುತ್ತಿಗೆಗೆ ಸುತ್ತಿಕೊಂಡು ಆಟವಾಡಿದ ಕುಡುಕ!