ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಬುಧವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿ ವಿಜಯ ನೇತೃತ್ವದ ಟಿವಿಕೆ (TVK) ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಬೆನ್ನಲ್ಲೇ ಪ್ರತಿಪಕ್ಷ ಎಐಎಡಿಎಂಕೆಯಲ್ಲಿ (AIADMK) ಬಂಡಾಯದ ಸ್ಫೋಟಗೊಂಡಿದ್ದು, ಪಕ್ಷದ ಹಿರಿಯ ನಾಯಕರ ವಿರುದ್ಧ ಇಪಿಎಸ್ ಕಠಿಣ ಕ್ರಮ ಕೈಗೊಂಡಿದ್ದಾರೆ.
ಪಕ್ಷದ ಹೈಕಮಾಂಡ್ ಸೂಚನೆಯನ್ನು ಧಿಕ್ಕರಿಸಿ ವಿಜಯ ಸರ್ಕಾರದ ಪರವಾಗಿ ಮತ ಚಲಾಯಿಸಿದ 25 ಶಾಸಕರ ನಡೆಗೆ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಪ್ರಭಾವಿ ನಾಯಕರಾದ ಎಸ್ಪಿ ವೇಲುಮಣಿ ಮತ್ತು ಸಿ.ವಿ. ಶಣ್ಮುಗಂ ಅವರನ್ನು ತಮ್ಮ ಹುದ್ದೆಗಳಿಂದ ತಕ್ಷಣವೇ ವಜಾಗೊಳಿಸಲಾಗಿದೆ. ಇವರ ಜೊತೆಗೆ ಪಕ್ಷದ ಆದೇಶ ಉಲ್ಲಂಘಿಸಿದ ಕಾರಣಕ್ಕಾಗಿ ಸಿ. ವಿಜಯಭಾಸ್ಕರ ಮತ್ತು ನಾಥಮ್ ಆರ್. ವಿಶ್ವನಾಥನ್ ಅವರನ್ನೂ ಹುದ್ದೆಗಳಿಂದ ಕಿತ್ತೊಗೆಯಲಾಗಿದೆ.
‘ಇಪಿಎಸ್ ಪತ್ರ ನಕಲಿ’ – ಶಣ್ಮುಗಂ ಗಂಭೀರ ಆರೋಪ
ಹುದ್ದೆಯಿಂದ ವಜಾಗೊಳ್ಳುವ ಮೊದಲೇ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸಿ.ವಿ. ಶಣ್ಮುಗಂ, ಇಪಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. “ವಿಶ್ವಾಸಮತಕ್ಕೂ ಮುನ್ನ ಪಕ್ಷ ಹೊರಡಿಸಿದ್ದ ‘ವಿಪ್’ ಮಾನ್ಯತೆ ಬಗ್ಗೆ ಸಂಶಯವಿದೆ. ಸದನದ ನಾಯಕ ಅಥವಾ ಸಚೇತಕರನ್ನು ಆಯ್ಕೆ ಮಾಡಲು ಪಕ್ಷದ ಶಾಸಕರ ಸಭೆಯನ್ನೇ ಕರೆದಿಲ್ಲ. ಇಪಿಎಸ್ ಸ್ಪೀಕರ್ ಅವರಿಗೆ ಸಲ್ಲಿಸಿರುವ ಪತ್ರವೇ ನಕಲಿ,” ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಎಐಎಡಿಎಂಕೆ ಇಬ್ಭಾಗ?
ಸದ್ಯದ ಮತದಾನದ ಲೆಕ್ಕಾಚಾರದ ಪ್ರಕಾರ, ಇಪಿಎಸ್ ಬಣದಲ್ಲಿ ಕೇವಲ 22 ಶಾಸಕರು ಉಳಿದುಕೊಂಡರೆ, ಬಂಡಾಯ ಬಣದಲ್ಲಿ 25 ಶಾಸಕರು ಗುರುತಿಸಿಕೊಂಡಿದ್ದಾರೆ. ಈ ಬೆಳವಣಿಗೆಯು ಎಐಎಡಿಎಂಕೆಯಲ್ಲಿ ಮತ್ತೊಂದು ದೊಡ್ಡ ಒಡಕನ್ನು ಸ್ಪಷ್ಟಪಡಿಸಿದ್ದು, ತಮಿಳುನಾಡಿನ ರಾಜಕೀಯ ಸಮೀಕರಣವೇ ಬದಲಾಗುವ ಮುನ್ಸೂಚನೆ ನೀಡಿದೆ.
ಕೇವಲ ನಾಲ್ಕು ದಿನಗಳ ಹಿಂದೆ ಅಧಿಕಾರಕ್ಕೇರಿದ್ದ ವಿಜಯ ನೇತೃತ್ವದ ಸರ್ಕಾರಕ್ಕೆ ಈ ವಿಶ್ವಾಸಮತ ಪರೀಕ್ಷೆ ಮೊದಲ ದೊಡ್ಡ ಸವಾಲಾಗಿತ್ತು. ಸದನದಲ್ಲಿ ಮಂಡಿಸಲಾದ ವಿಶ್ವಾಸಮತ ನಿರ್ಣಯದ ಪರವಾಗಿ 144 ಮತಗಳು ಚಲಾವಣೆಯಾದರೆ, ವಿರೋಧವಾಗಿ ಕೇವಲ 22 ಮತಗಳು ಬಂದವು. ಆ ಮೂಲಕ ಸರ್ಕಾರವು ಸುಲಭವಾಗಿ ಗೆಲುವು ಸಾಧಿಸಿತು. ಕಾಂಗ್ರೆಸ್, ವಿಸಿಕೆ (VCK), ಎಡಪಕ್ಷಗಳು ಮತ್ತು ಐಯುಎಂಎಲ್ (IUML) ಪಕ್ಷಗಳು ವಿಜಯ ಸರ್ಕಾರಕ್ಕೆ ಬೆಂಬಲ ನೀಡಿದರೆ ನಾಟಕೀಯ ಬೆಳವಣಿಗೆಯಲ್ಲಿ ಎಐಎಡಿಎಂಕೆಯ 25 ಬಂಡಾಯ ಶಾಸಕರು ಸಹ ವಿಜಯ ನೇತೃತ್ವದ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದಾರೆ.
ಪ್ರಮುಖ ವಿಪಕ್ಷವಾದ ಡಿಎಂಕೆ (59 ಶಾಸಕರು) ಅಶ್ವಪೇಟ ನಡೆಸುತ್ತಿರುವ ಕುದುರೆ ವ್ಯಾಪಾರವನ್ನು ವಿರೋಧಿಸಿ ಸದನದಿಂದ ಹೊರನಡೆದವು. ಪಿಎಂಕೆ (4 ಶಾಸಕರು) ಮತ್ತು ಬಿಜೆಪಿಯ ಒಬ್ಬ ಶಾಸಕ ಮತದಾನದಿಂದ ದೂರ ಉಳಿದರು.
ಕುದುರೆ ವ್ಯಾಪಾರ ಆರೋಪ ತಳ್ಳಿಹಾಕಿದ ಸಿಎಂ ವಿಜಯ
ವಿರೋಧ ಪಕ್ಷಗಳು ಮಾಡಿದ ಕುದುರೆ ವ್ಯಾಪಾರದ ಆರೋಪಗಳನ್ನು ಮುಖ್ಯಮಂತ್ರಿ ವಿಜಯ ಬಲವಾಗಿ ನಿರಾಕರಿಸಿದ್ದಾರೆ. “ನಮ್ಮ ಸರ್ಕಾರವು ಜಾತ್ಯತೀತ ತತ್ವಗಳ ಮೇಲೆ ನಡೆಯಲಿದೆ. ಹಿಂದಿನ ಸರ್ಕಾರಗಳು ಜಾರಿಗೆ ತಂದಿದ್ದ ಜನಕಲ್ಯಾಣ ಯೋಜನೆಗಳನ್ನು ನಿರಂತರವಾಗಿ ಮುಂದುವರಿಸಲಾಗುವುದು,” ಎಂದು ಅವರು ಸದನದಲ್ಲಿ ಭರವಸೆ ನೀಡಿದರು.
