ಬೆಳಗಾವಿ: ಸತತ ಓದು, ಅಧ್ಯಯನವಿಲ್ಲದೆ ಕೃತಿ ಬರೆಯಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಹೇಳಿದ್ದಾರೆ.
ರಂಗಸೃಷ್ಟಿ ಸಾಂಸ್ಕೃತಿಕ ಸಂಘ (ರಿ), ಬೆಳಗಾವಿ ವತಿಯಿಂದ ಡಾ. ಪಿ. ಜಿ. ಕೆಂಪಣ್ಣವರ ಅವರ ‘ಜಿನ ದೀವಿಗೆ’ ಹಾಗೂ ಶಿರೀಷ ಜೋಶಿ ಅವರ ‘ಮರಾಠಿಯೊಳಗೊಂದು ಕನ್ನಡ ಗತವೈಭವ’ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಬಿಡುಗಡೆಯಾಗಿರುವ ಎರಡೂ ಕೃತಿಗಳು ಅತ್ಯಂತ ತಳಸ್ಪರ್ಶಿಯಾಗಿ ಬರೆದವುಗಳಾಗಿವೆ. ಬಹಳಷ್ಟು ಅಧ್ಯಯನ ಮಾಡಿ ಬರೆದವುಗಳಾಗಿವೆ ಎಂದು ಅವರು ಹೇಳಿದರು.
ಧರ್ಮ ಸಹಿಷ್ಣುತೆ ಎಂದರೆ ಏನು ಎನ್ನುವುದನ್ನು ಜೈನ ಧರ್ಮೀಯರಿಂದ ಕಲಿತುಕೊಳ್ಳಬೇಕು ಎಂದ ಅವರು, ಕನ್ನಡ ಸಾರಸ್ವತ ಲೋಕಕ್ಕೆ ಜೈನ ಧರ್ಮೀಯರ ಕೊಡುಗೆ ಸಾಕಷ್ಟಿದೆ ಎಂದರು.
ಸಾಹಿತಿ ಎಲ್. ಎಸ್. ಶಾಸ್ತ್ರಿ ಮಾತನಾಡಿ, ಕನ್ನಡ- ಮರಾಠಿ ಬಾಂಧವ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ಕೃತಿಯಾಗಿರುವ ಮರಾಠಿಯೊಳಗೊಂದು ಕನ್ನಡ ಗತವೈಭವ ಮರಾಠಿ ಭಾ಼ಷೆಗೂ ಅನುವಾದವಾಗಬೇಕೆಂದರು
ಇಬ್ಬರು ಲೇಖಕರೂ ಬಹಳಷ್ಟು ಅಧ್ಯಯನ ಮಾಡಿದವರಾಗಿದ್ದು, ಮೌಲಿಕ ಕೃತಿಗಳನ್ನು ನೀಡಿದ್ದಾರೆ ಎಂದರು.
ಹಿರಿಯ ಲೇಖಕಿ ಡಾ. ಗುರುದೇವಿ ಹುಲೆಪ್ಪನವರಮಠ ಮತ್ತು ಪ್ರಾಧ್ಯಾಪಕ ಡಾ. ಎಚ್. ಬಿ. ಕೋಲ್ಕಾರ ಕೃತಿಗಳ ಕುರಿತು ಮಾತನಾಡಿದರು.
ರಂಗಸೃಷ್ಟಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಮೇಶ ಜಂಗಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಕೆ.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಕೃತಿಕಾರರಾದ ಡಾ.ಪಿ.ಜಿ.ಕೆಂಪಣ್ಣವರ ಹಾಗೂ ಶಿರೀಷ ಜೋಶಿ ಮಾತನಾಡಿದರು. ಶರಣಯ್ಯ ಮಠಪತಿ ಸ್ವಾಗತಿಸಿ, ನಿರೂಪಿಸಿದರು. ಶುಭಾ ಶ್ರೀನಾಥ್ ಜೋಶಿ ವಂದಿಸಿದರು.