ಬೆಳಗಾವಿ : ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ ಮಾಲೀಕ ಶಿವಾನಂದ ನೀಲಣ್ಣನವರ್ಗೆ ಸೇರಿದ ಎರಡು ಕಚೇರಿ ಮೇಲೆ ದಾಳಿ ಅಧಿಕಾರಿಗಳು ಗುರುವಾರ ಸಂಜೆ ದಾಳಿ ನಡೆಸಿದ್ದಾರೆ.
ಬೆಳಗಾವಿಯ ಶಿವ ಬಸವ ನಗರದಲ್ಲಿ ಇರುವ ಕಚೇರಿಯ ಮೇಲೆ ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರಮಣ ನಾಯಕ್ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು, ಡಿಸಿಪಿ ನಾರಾಯಣ ಭರಮನಿ, ಎಸಿಪಿ ಸಂತೋಷ ಸತ್ಯನಾಯಿಕ ಅವರ ಮುಂದಾಳತ್ವದಲ್ಲಿ ಈ ದಾಳಿ ನಡೆದಿದೆ. ಶಿವಂ ಅಸೋಸಿಯೇಟ್ ಕಚೇರಿಯಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ ಕಾರ್ಯ ನಡೆಸಲಾಗಿದೆ. ಮಾಜಿ ಸೈನಿಕರು ಹಾಗೂ ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ನೀಡುವುದಾಗಿ ಹಣ ಸಂಗ್ರಹ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಶಿವಂ ಅಸೋಸಿಯೇಟ್ನಲ್ಲಿ ಹೂಡಿಕೆಯಾಗಿರುವ ಸಾವಿರಾರು ಕೋಟಿ ರೂಪಾಯಿ ಹಣ ದುರುಪಯೋಗವಾಗಿರುವ ಸಂಶಯ ವ್ಯಕ್ತವಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಿವಾನಂದ ನೀಲಣ್ಣವರ್ ವಿಡಿಯೋ ವೈರಲ್ ಆಗಿದ್ದು, ಇದು ಭಾರಿ ಸದ್ದು ಮಾಡುತ್ತಿದೆ. ನಮ್ಮ ಬಳಿ 15 ಸಾವಿರ ಬಂದೂಕ್ ಇವೆ, ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ. ನಾನು ಯಾರಿಗೂ ಹೆದರಲ್ಲ, ನಿಮ್ಮನ್ನು ಗಂಡಸರನ್ನಾಗಿ ಮಾಡಲು ಬಂದಿದ್ದೇನೆ ಎಂದು ದೊಡ್ಡದಾದ ಭಾಷಣ ಬಿಗಿದಿದ್ದ ಶಿವಾನಂದ ನೀಲಣ್ಣನವರ್ಗೆ ಈ ಬೆಳಗಾವಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
2028ನೇ ಸಾಲಿನಲ್ಲಿ ಒಂದೇ ಸಲ 224 ವಿಧಾನ ಸಭೆ ಸ್ಥಾನ ಗೆದ್ದು ಸಿಎಂ ಆಗುತ್ತೇನೆ ಎಂದೆಲ್ಲ ಭಾಷಣ ಮಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಕಡೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದ ಈ ವಿಡಿಯೋ ಸದ್ದು ಮಾಡುತ್ತಿದೆ.
ಅದೇ ರೀತಿಯಾಗಿ ಮೇ 17ರಂದು ಸ್ವಚ್ಛ ಬೆಳಗಾವಿ ಕಾರ್ಯಕ್ರಮ ಆಯೋಜನೆ ಜೊತೆಗೆ ಬೆಳಗಾವಿ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಶಿವಾನಂದ ನೀಲಣ್ಣವರ್ ನೇತೃತ್ವದಲ್ಲಿ ಸ್ವಚ್ಛ ಬೆಳಗಾವಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಅಭಿಯಾನಕ್ಕೆ 20 ಸಾವಿರ ಜನರನ್ನು ಸೇರಿಸಿ ಸ್ವಚ್ಛ ಬೆಳಗಾವಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಶಿವಾನಂದ ನೀಲಣ್ಣವರ್ ಅವರು ಹೇಳಿಕೊಂಡಿದ್ದರು.
ಬೆಳಗಾವಿಯ ರಸ್ತೆಗಳಲ್ಲಿನ ಬ್ಯಾನರ್ಗಳಿಗೆ ಪಾಲಿಕೆ ಬ್ರೆಕ್ : ಬೆಳಗಾವಿ ನಗರದಲ್ಲಿ ಸ್ವಚ್ಛ ಬೆಳಗಾವಿ ಹಮ್ಮಿಕೊಂಡ ಹಿನ್ನಲೆಯಲ್ಲಿ ಬೆಳಗಾವಿ ಪ್ರತಿ ರಸ್ತೆಗಳಲ್ಲಿ ಕಳೆದ ಎರಡು ದಿನಗಳಿಂದ ಬ್ಯಾನರ್ಗಳನ್ನು ಅಳವಡಿಸಲಾಗಿತ್ತು. ಆದರೆ ಈ ಬ್ಯಾನರ್ಗಳನ್ನು ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಗುರುವಾರ ಮಧ್ಯಾಹ್ನ ತೆರವು ಮಾಡುವ ಮೂಲಕ ಶಿವಂ ಅಸೋಸಿಯೇಟ್ ಮಾಲೀಕ ಶಿವಾನಂದ ನೀಲಣ್ಣನವರ್ಗೆ ಬಿಸಿ ಮುಟ್ಟಿಸಿದ್ದರು.
