ನವದೆಹಲಿ: ಮದುವೆ ಮನೆಯೊಂದರ ಸಂಭ್ರಮವು ಕ್ಷುಲ್ಲಕ ಕಾರಣಕ್ಕೆ ರಣರಂಗವಾಗಿ ಮಾರ್ಪಟ್ಟ ಘಟನೆ ಉತ್ತರ ಪ್ರದೇಶದ ಅಜಂಗಢದಲ್ಲಿ ನಡೆದಿದೆ. ಕೇವಲ ಒಂದು ಏರ್ ಕೂಲರ್ ಗಾಳಿ ಯಾವ ದಿಕ್ಕಿಗೆ ಮಾಡಬೇಕು ಎಂಬ ವಿಚಾರವಾಗಿ ಶುರುವಾದ ಸಣ್ಣ ಜಗಳ ವಿಕೋಪಕ್ಕೆ ತಿರುಗಿ, ಓರ್ವ ಯುವಕ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ಅಜಂಗಢದ ಜಿಯಾನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ನಗರದಲ್ಲಿ ಮಂಗಳವಾರ ರಾತ್ರಿ ವಿವಾಹ ಸಮಾರಂಭ ನಡೆಯುತ್ತಿತ್ತು. ವಧು-ವರರು ವೇದಿಕೆಯ ಮೇಲೆ ‘ಜೈಮಾಲಾ’ ವಿಧಿವಿಧಾನಗಳಲ್ಲಿ ತೊಡಗಿದ್ದಾಗ ಈ ರಾದ್ಧಾಂತ ಆರಂಭವಾಗಿದೆ.
ಕೂಲರ್ ಗಾಳಿಗಾಗಿ ಶುರುವಾದ ಜಗಳ:
ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಮದುವೆ ಮಂಟಪದಲ್ಲಿ ಏರ್ ಕೂಲರ್ ಇರಿಸಲಾಗಿತ್ತು. ಈ ಕೂಲರ್ನ ಗಾಳಿ ತಮ್ಮ ಕಡೆಗೇ ಬರಬೇಕೆಂದು ವರನ ಕಡೆಯವರು ಮತ್ತು ತಮ್ಮ ಕಡೆಗೇ ಬರಬೇಕು ಎಂದು ವಧುವಿನ ಕಡೆಯವರು ಪಟ್ಟು ಹಿಡಿದರು. ಗಾಳಿಯ ದಿಕ್ಕನ್ನು ಬದಲಿಸುವ ವಿಚಾರದಲ್ಲಿ ಶುರುವಾದ ಈ ಕ್ಷುಲ್ಲಕ ಮಾತಿನ ಚಕಮಕಿ ನೋಡನೋಡುತ್ತಿದ್ದಂತೆಯೇ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಎರಡೂ ಕಡೆಯವರು ಪರಸ್ಪರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಸಂಘರ್ಷದಲ್ಲಿ 26 ವರ್ಷದ ಅಮೀರಚಂದ್ರ ಸಾಹನಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ರಾಜಕುಮಾರ ಸಾಹನಿ, ಅಭಿಲಾಷ್ ಸಾಹನಿ ಮತ್ತು ಸಾಹಿಲ್ ಯಾದವ್ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಸ್ತುತ ನಾಲ್ವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತನ ತಂದೆ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಅಜಂಗಢದ ಎಎಸ್ಪಿ (ಗ್ರಾಮಾಂತರ) ತಿಳಿಸಿದ್ದಾರೆ.
ಮದುವೆ ಮನೆಯಲ್ಲಿ ಕಾಲ್ತುಳಿತದ ವಾತಾವರಣ:
ಜಗಳ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮದುವೆಗೆ ಬಂದಿದ್ದ ಅತಿಥಿಗಳು ಭಯಭೀತರಾಗಿ ಓಡಲಾರಂಭಿಸಿದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಹಿತಿ ತಿಳಿದ ತಕ್ಷಣ ಸಗಡಿ ಏರಿಯಾ ಸಿಒ ಮತ್ತು ಜಿಯಾನ್ಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ನಗರದಾದ್ಯಂತ ದಾಳಿ ನಡೆಸಲಾಗುತ್ತಿದೆ. ಪ್ರದೇಶದಲ್ಲಿ ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮದುವೆ ನಡೆದ ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಒಂದು ಸಣ್ಣ ಕೂಲರ್ ಗಾಳಿಯ ವಿಚಾರವಾಗಿ ನಡೆದ ಈ ಗಲಾಟೆ ಒಂದು ಕುಟುಂಬದ ಆಚರಣೆಯನ್ನು ಶೋಕ ಸಾಗರಕ್ಕೆ ತಳ್ಳಿದೆ.
